ಬೆಂಗಳೂರು, ಮೇ 20 : ಡಿ.ಕೆ ಶಿವಕುಮಾರ್ ಅವರ ಪಾಲಿಗೆ ಕೊರೊನಾ ವೈರಸ್ ಶನಿಯಂತೆ ವಕ್ಕರಿಸಿದ್ದು, ಟ್ರಬಲ್ ಶೂಟರ್ ಗೆ ಪದೇ ಪದೇ ಟ್ರಬಲ್ ನೀಡುತ್ತಿದೆ. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಸಾಂಕ್ರಾಮಿಕ ಹೆಮ್ಮಾರಿ ಕೊರೊನಾ ಅಡ್ಡಗಾಲು ಹಾಕುತ್ತಲೇ ಇದೆ. ಹೀಗಾಗಿ ಮೇ 31ರಂದು ಫಿಕ್ಸ್ ಆಗಿದ್ದ ಪದಗ್ರಹಣ ಸಮಾರಂಭವನ್ನು ಮುಂದೂಡಿರುವ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೋವಿಡ್-19 ಬಿಕ್ಕಟ್ಟನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ಡಿಕೆ ಸಾಹೇಬ ಪ್ರವಾಸ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಯಶಸ್ಸಿನ ಎಳೆಯನ್ನು ತೆಗೆದುಕೊಂಡು ಕೊರೊನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಹತ್ತಿರವಾಗಲು ಡಿ ಕೆ ಶಿವಕುಮಾರ್ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ಅವರು ತಮ್ಮ ಪ್ರವಾಸದ ಬಗ್ಗೆ ಉಪನಿಷತ್ ಉದಾಹರಣೆ ನೀಡಿ ವಿವರಿಸಿದರು.
ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪ್ರವಾಸ ಮಾಡುತ್ತೇನೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಸಾಯುವ ಮೊದಲು ಏನಾದರೊಂದು ಒಳ್ಳೆ ಕೆಲಸ ಮಾಡು ಎಂದು ಉಪನಿಷತ್ ನಲ್ಲಿ ಹೇಳಲಾಗಿದೆ, ಹೀಗಾಗಿ ಈ ಕೊರೊನಾ ಸಮಯದಲ್ಲಿ ಕಷ್ಟಕ್ಕೊಳಗಾಗಿರುವ ಸಹೋದರ, ಸಹೋದರಿಯರನ್ನು ಭೇಟಿ ಮಾಡುತ್ತೇನೆ. ಅವರ ಸಮಸ್ಯೆಗೆ ಧ್ವನಿಯಾಗಿ ನಿಲ್ಲಲಿದ್ದೇನೆ. ಎಲ್ಲಾ ಜಾತಿ, ಧರ್ಮ, ಸಮುದಾಯ, ವರ್ಗಗಳ ಜನರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳಿದ್ದಾರೆ ಡಿಕೆಶಿ.
ಆಂಧ್ರ ಸಿಎಂ ಜಗನ್ ಮಾರ್ಗದಲ್ಲಿ ಡಿಕೆಶಿ : ಯಾಕೆ ಗೊತ್ತಾ ?
ಕರ್ನಾಟಕದಲ್ಲಿ ಪ್ರಬಲ ಮುಖಂಡನಾಗಿ ಹೊರಹೊಮ್ಮಲು ಹವಣಿಸುತ್ತಿರುವ ಕನಕಪುರ ಬಂಡೆ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯಗತಾಯ ಕೇಸರಿಪಡೆಗೆ ಡಿಚ್ಚಿ ಕೊಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಲು ಟ್ರಬಲ್ ಶೂಟರ್ ಪಣತೊಟ್ಟಿದ್ದಾರೆ. ಹೀಗಾಗಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯಂತೆ ರಾಜ್ಯಾದ್ಯಂತ ಪ್ರವಾಸ ಮಾಡಲು ಮುಂದಾಗಿದ್ದಾರೆ.
ಅಂದ್ಹಾಗೆ ಸದ್ಯ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬರಲು ಕಾರಣವಾಗಿಯದ್ದೇ ಅವರ “ಪ್ರಜಾ ಸಂಕಲ್ಪ ಯಾತ್ರಾ”. ಚುನಾವಣೆಗೂ ಮುನ್ನಾ ಅಂದಿನ ಆಡಳಿತ ರೂಢ ಟಿಡಿಪಿ ವಿರುದ್ಧ ಸಮರ ಸಾರಿದ್ದ ಜಗನ್ ಮೋಹನ್ ರೆಡ್ಡಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿದರು. ಜನರ ಬಳಿಯೇ ಹೋಗಿ ಅವರ ಕಷ್ಟಗಳನ್ನು ಕೇಳಿದರು. ಹೀಗೆ ಜಗನ್ ತಮ್ಮ ಪ್ರವಾಸದ ಮೂಲಕ ಜನರಿಗೆ ಹತ್ತಿರವಾಗಿ ಆಂಧ್ರದ ಮಾಸ್ ಲೀಡರ್ ಆಗಿ ಗುರುತಿಸಿಕೊಂಡು ಯಾರೂ ಊಹಿಸದ ರೀತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರದ ಚಿಕ್ಕಾಣಿ ಹಿಡಿದರು.
ಇದೇ ಕಾರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸಾರಥಿ ಡಿ.ಕೆ ಶಿವಕುಮಾರ್ ಅವರು ಜಗನ್ ಅವರ ಯಶಸ್ಸಿನ ಎಳೆ ತೆಗೆದುಕೊಂಡು ಕೊರೊನಾ ಸಂದರ್ಭದಲ್ಲಿ ಜನರಿಗೆ ಹತ್ತಿರವಾಗಲು ಹೊರಟಿದ್ದಾರೆ. ಮೂಲಗಳ ಪ್ರಕಾರ ಡಿಕೆಶಿ ತಮ್ಮ ಪ್ರವಾಸಕ್ಕೆ ಈಗಾಗಲೇ ನಕ್ಷೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ.ಶಿವಕುಮಾರ್, ಆಂಧ್ರ ಸಿಎಂ ಜಗನ್ ರಂತೆ ಪಾದಯಾತ್ರೆ ಮೂಲಕ ರಾಜ್ಯ ಪ್ರವಾಸ ಮಾಡುತ್ತಾರೋ.. ಅಥವಾ ಬೇರೆ ರೀತಿಯಲ್ಲಿ ರಾಜ್ಯ ಪ್ರವಾಸ ಮಾಡುತ್ತಾರೋ ಎಂಬುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.








