Ukraine crisis: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ….
ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಿತು. ಇಬ್ಬರೂ ದಿಗ್ಗಜರು ಉಕ್ರೇನ್ನಲ್ಲಿ ವರ್ತಮಾನ ಪರಿಸ್ಥಿತಿಯನ್ನು ಚರ್ಚಿಸಿದರು. ಉಕ್ರೇನ್ ಮತ್ತು ರಷ್ಯಾ ತಂಡಗಳ ನಡುವಿನ ಮಾತುಕತೆಯ ಸ್ಥಿತಿಯನ್ನು ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿಯವರಿಗೆ ವಿವರಿಸಿದರು.
ತಮ್ಮ ತಂಡಗಳ ನಡುವೆ ನಡೆಯುತ್ತಿರುವ ಮಾತುಕತೆಗಳ ಹೊರತಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆ ನಡೆಸುವಂತೆ ಪ್ರಧಾನಿ ಮೋದಿ ಅಧ್ಯಕ್ಷ ಪುಟಿನ್ ಅವರನ್ನು ಒತ್ತಾಯಿಸಿದರು. ಸುಮಿ ಸೇರಿದಂತೆ ಉಕ್ರೇನ್ನ ಕೆಲವು ಭಾಗಗಳಲ್ಲಿ ಕದನ ವಿರಾಮ ಮತ್ತು ಮಾನವೀಯ ಕಾರಿಡಾರ್ಗಳ ಸ್ಥಾಪನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲಗಳ ಪ್ರಕಾರ, ಸುಮಿಯಿಂದ ಭಾರತೀಯ ನಾಗರಿಕರನ್ನು ಶೀಘ್ರವಾಗಿ ಸ್ಥಳಾಂತರಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿಯವರಿಗೆ ಸುರಕ್ಷಿತ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ಇಬ್ಬರ ನಡುವೆ ಸುಮಾರು 35 ನಿಮಿಷಗಳ ಕಾಲ ಫೋನ್ನಲ್ಲಿ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ಉಕ್ರೇನ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಝೆಲೆನ್ಸ್ಕಿ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅವರು ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಬಗ್ಗೆ ಝೆಲೆನ್ಸ್ಕಿಯೊಂದಿಗೆ ಚರ್ಚಿಸಿದರು. ಉಕ್ರೇನ್ನ ಸುಮಿಯಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ಕುರಿತು ಅವರು ಮಾತನಾಡಿದರು.
ಇದಕ್ಕೂ ಮುನ್ನ ಉಭಯ ನಾಯಕರು ಮಾತನಾಡಿದ್ದರು
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ಯುದ್ಧ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ. ಈ ಅವಧಿಯಲ್ಲಿ ಝೆಲೆನ್ಸ್ಕಿ ಭಾರತದ ರಾಜಕೀಯ ಬೆಂಬಲವನ್ನು ಕೋರಿದ್ದರು. ಆ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರು ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರವಾಗಿ ತಿಳಿಸಿದ್ದರು. ನಡೆಯುತ್ತಿರುವ ಘರ್ಷಣೆಯಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಪ್ರಧಾನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ನ ನಾಲ್ಕು ನಗರಗಳಲ್ಲಿ ರಷ್ಯಾ ಕದನ ವಿರಾಮವನ್ನು ಘೋಷಿಸಿದೆ
ರಷ್ಯಾ-ಉಕ್ರೇನ್ ನಡುವಿನ ಮೂರನೇ ಸುತ್ತಿನ ಮಾತುಕತೆಗೂ ಮುನ್ನ ರಷ್ಯಾದಿಂದ ದೊಡ್ಡ ಘೋಷಣೆಯಾಗಿದೆ. ವರದಿಗಳ ಪ್ರಕಾರ, ಮಾನವೀಯ ಕಾರಿಡಾರ್ಗಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕೋರಿಕೆಯ ಮೇರೆಗೆ ಪುಟಿನ್ ಸೋಮವಾರ ಭಾರತೀಯ ಕಾಲಮಾನ ಮಧ್ಯಾಹ್ನ 12:30 ರಿಂದ ಕದನ ವಿರಾಮವನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ, ಯುದ್ಧದಲ್ಲಿ ಸಿಲುಕಿರುವ ಸಾಮಾನ್ಯ ಜನರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ತೆರೆಯಲಾಗುವುದು. ವರದಿಯ ಪ್ರಕಾರ, ಕೈವ್, ಖಾರ್ಕಿವ್, ಮರಿಯುಪೋಲ್ ಮತ್ತು ಸುಮಿಯಲ್ಲಿ ಕದನ ವಿರಾಮ ವಿರುತ್ತದೆ.








