ಶ್ರೀ ಶಿವಕುಮಾರ ಶ್ರೀಗಳ 115 ಜನ್ಮದಿನ, ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ
ತುಮಕೂರು: ಪರಮಪೂಜ್ಯ ನಡೆದಾಡುವ ದೇವರು ಶ್ರೀ ಶಿವಮಕುಮಾರ ಶ್ರೀಗಳ 115 ಜನ್ಮದಿನೋತ್ಸವದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಹಬ್ಬದ ಕಳೆ ಕಟ್ಟಿದೆ.
ಶ್ರೀಮಠದಲ್ಲಿ ಇಂದು ಮುಂಜಾನೆಯಿಂದ ಹಲವು ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ. ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ.
ಇನ್ನೂ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೋಳ್ಳಲಿದ್ದಾರೆ. ಅಮಿತ್ ಶಾ ಮೊದಲು ಶ್ರೀಗಳ ಗದ್ದಿಗೆ ದರ್ಶನ ಹಾಗೂ ಪೂಜೆ ಮಾಡುತ್ತಾರೆ. ನಂತರ 11 ಗಂಟೆಯಿಂದ 1 ಗಂಟೆವರೆಗೂ ಜರಗುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಈ ಕಾರ್ಯಕ್ರಮವು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತದೆ. ವೇದಿಕೆ ಮೇಲೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಾಧು ಸಂತರು ಸೇರಿದಂತೆ ಒಟ್ಟು 22 ಜನರಿಗೆ ಅವಕಾಶವಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ಮಾಡಲಾಗುತ್ತಿದೆ.
ಕಾರ್ಯಕ್ರಮ ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ.









