ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ : ಬಿ.ಸಿ ಪಾಟೀಲ್
ಮೈಸೂರು: ನಾನು 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ, ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅಲ್ಲದೇ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರ ನಿಜಕ್ಕೂ ದುರಂತ ವಿಚಾರವಾಗಿದೆ. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ಹಣದಿಂದ ಬಂದವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗಿತ್ತಾ, ಇದರಿಂದ ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದರು.
ಅಲ್ಲದೇ ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನೂ ರಾಜ್ಯದಲ್ಲಿ ಶಾಂತಿ ಕೆಟ್ಟಿಲ್ಲ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಪ್ರಕರಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎಫ್ಐಆರ್ ಮಾಡಲಾಗಿತ್ತು. ಆದರೂ ಸಾವಿರಾರು ಜನರು ಗುಂಡಾವರ್ತನೆ ತೋರಿದ್ದಾರೆ. ಆರೋಪಿಗಳು ಯುವಕನ ಶಿರಚ್ಛೇದ ಮಾಡುತ್ತೇವೆ ಎನ್ನುತ್ತಾರೆ. ಯುವಕನನ್ನು ವಶಕ್ಕೆ ಕೊಡಿ ತಲೆ ಕಡಿಯುತ್ತೇವೆ ಎನ್ನುತ್ತಾರೆ. ಇದು ಭಾರತನಾ ತಾಲಿಬಾನಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾನೂನು ಕೈಗೆತ್ತುಕೊಂಡವರ ರಕ್ಷಣೆ ಮಾಡುತ್ತಿದೆ. ಕಾಂಗ್ರೆಸ್ಸಿಗರು ದೇಶದ ಪರ ಇದ್ದಾರಾ ಅಥವಾ ದೇಶದ ವಿರುದ್ಧ ಇದ್ದವರಾ. ಕಾನೂನು ಪರನಾ ಕಾನೂನು ವಿರೋಧನಾ ಎಂದು ಕಾಂಗ್ರೆಸ್ನವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.









