ಮಹಾ ರಾಜಕೀಯ ಬಿಕ್ಕಟ್ಟು – ಅಸ್ಸಾಂನಲ್ಲಿ ಮೊಕ್ಕಾಂ ಹೂಡಿದ ಏಕನಾಥ್ ಶಿಂಧೆ ಮತ್ತು ಶಾಸಕರು…
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೀವ್ರ ಬಿಕ್ಕಟ್ಟನ್ನ ಎದುರಿಸುತ್ತಿದೆ. ಶಿವಸೇನೆಯ ಹಿರಿಯ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆ.
ಶಿಂಧೆ ಅವರು ಒಟ್ಟು 40 ಶಿವಸೇನೆ ಶಾಸಕರ ಬೆಂಬಲವನ್ನ ಹೊಂದಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ. ಇಂದು ಬೆಳಗ್ಗೆ ಬಂಡಾಯ ಶಾಸಕರನ್ನ ಗುಜರಾತ್ ನ ಸೂರತ್ನಿಂದ ಅಸ್ಸಾಂನ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಪಕ್ಷಾಂತರ ವಿರೋಧಿ ಕಾನೂನನ್ನ ತಪ್ಪಿಸಲು, ಶಿಂಧೆ ಅವರ ಪರವಾಗಿ 55 ಶಿವಸೇನೆ ಶಾಸಕರಲ್ಲಿ ಮೂರನೇ ಎರಡರಷ್ಟು ಶಾಸಕರು ಅಂದರೆ 37% ನಷ್ಟು ಶಾಸಕರ ಬೆಂಬಲದ ಅಗತ್ಯವಿದೆ.
ಉದ್ಧವ್ ಠಾಕ್ರೆ ಸರ್ಕಾರವನ್ನ ಬೆಂಬಲಿಸುತ್ತಿರುವ ಶಿವಸೇನೆ ಶಾಸಕರನ್ನ ಕಳ್ಳಬೇಟೆಯಿಂದ ರಕ್ಷಿಸಲು ಮುಂಬೈ ಸಮೀಪದ ಲೋವರ್ ಪರೇಲ್ನಲ್ಲಿರುವ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ.
ಬಂಡಾಯ ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರೊಂದಿಗೆ 37 ಕ್ಕೂ ಹೆಚ್ಚು ಶಾಸಕರು ಕಾಣಿಸಿಕೊಂಡಿರುವುದರಿಂದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ತೀವ್ರ ಸಂಕಷ್ಟದಲ್ಲಿದೆ. ಗುವಾಹಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ ಅವರು 40 ಶಾಸಕರೊಂದಿಗೆ ಅಸ್ಸಾಂನ ರಾಜಧಾನಿಗೆ ಬಂದಿದ್ದೇವೆ ಇನ್ನೂ 10 ಮಂದಿ ಶೀಘ್ರದಲ್ಲೇ ಅವರನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.