ಅದು ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಧೋನಿ ಟೀಮ್ ಇತಿಹಾಸ ನಿರ್ಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರರು ಕೂಡ ಒಂದೊಂದು ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನವನ್ನೇ ನೀಡಿದ್ದಾರೆ. ಒಂದು ತಂಡವಾಗಿ ಆಡಿದ್ರೆ ಗೆಲುವು ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೆ ಟೀಮ್ ಇಂಡಿಯಾದ ಈ ಸಾಧನೆಯೇ ಉತ್ತಮ ನಿದರ್ಶನ.
ಹಾಗೇ ನೋಡಿದ್ರೆ ಟೀಮ್ ಇಂಡಿಯಾ ಇಂತಹುದ್ದೊಂದು ಪ್ರದರ್ಶನ ನೀಡುತ್ತದೆ. ಚೊಚ್ಚಲ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುತ್ತದೆ ಅಂತ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಯುವ ಆಟಗಾರರ ತಂಡವಾಗಿದ್ದ ಟೀಮ್ ಇಂಡಿಯಾಗೆ ಧೋನಿಯ ಮೊದಲ ಸಾರಥ್ಯ. ಆದ್ರೆ ಧೋನಿ ತನ್ನ ಮೊದಲ ನಾಯಕತ್ವದಲ್ಲಿ ತಂಡವನ್ನು ಮುನ್ನಡೆಸಿದ್ದ ರೀತಿ ಇದೆಯಲ್ಲಾ ಅದು ಅಚ್ಚರಿಗೊಳಿಸುವಂತಿತ್ತು. ಯಾಕಂದ್ರೆ ಮಹತ್ವದ ಪಂದ್ಯಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದ ಧೋನಿಯ ಧೈರ್ಯ ಮತ್ತು ವಿಶ್ವಾಸಕ್ಕೆ ಕ್ರಿಕೆಟ್ ಪಂಡಿತರೇ ಚಕಿತಗೊಳಿಸುತ್ತಿದ್ದರು. ಪ್ರತಿ ಪಂದ್ಯದಲ್ಲೂ ಆಟಗಾರರನ್ನು ಹುರಿದುಂಬಿಸುತ್ತಿದ್ದ ಧೋನಿಯ ನಾಯಕತ್ವಕ್ಕೆ ಕೇರಳ ಎಕ್ಸ್ ಪ್ರೆಸ್ ಶ್ರೀಶಾಂತ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
2007ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಶ್ರೀಶಾಂತ್ ಆಟವನ್ನು ಮರೆಯೋಕೆ ಸಾಧ್ಯವಿಲ್ಲ. ಮೊದಲೇ ತುಂಟ, ಕೋಪಿಷ್ಟ. ಆತನನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ಸಾಹಸ. ನೋಡಲು ಹುಚ್ಚು ಹುಚ್ಚು ವರ್ತನೆಯಾದ್ರೂ ಎದುರಾಳಿ ಬ್ಯಾಟ್ಸ್ ಮೆನ್ಗಳನ್ನು ದಂಗುಬಡಿಯುತ್ತಿದ್ದ ಶ್ರೀಶಾಂತ್ ಅವರ ಆಕ್ರಮಣಕಾರಿ ಬೌಲಿಂಗ್ ಬಗ್ಗೆ ಹೇಳುವುದೇ ಬೇಡ. ಇದೀಗ ಶ್ರೀಶಾಂತ್ 2007ರ ಟಿ-ಟ್ವೆಂಟಿ ವಿಶ್ವಕಪ್ನ ಸೆಮಿಫೈನಲ್ ಪಂದ್ಯವನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು, 2007ರ ಟಿ-ಟ್ವೆಂಟಿ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಕಾದಾಡಿದ್ದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು. ಆ ಪಂದ್ಯದಲ್ಲಿ ಭಾರತ ಗೆಲ್ಲುತ್ತೆ ಅಂತ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಟೀಮ್ ಇಂಡಿಯಾ ಆಟಗಾರರಿಗೆ ಗೆಲ್ಲುತ್ತೇವೆ ಎಂಬ ನಂಬಿಕೆ ಇತ್ತು. ಇದಕ್ಕೆ ಶ್ರೀಶಾಂತ್ ಕೂಡ ಹೊರತಲ್ಲ. ಆಸ್ಟ್ರೇಲಿಯಾ ವಿರುದ್ಧ ಸೋಲುವುದನ್ನು ಯಾವತ್ತೂ ಒಪ್ಪಿಕೊಳ್ಳದ ಶ್ರೀಶಾಂತ್ ಆ ಪಂದ್ಯದಲ್ಲಿ ಅದ್ಭುತವಾದ ಬೌಲಿಂಗ್ ದಾಳಿಯನ್ನು ನಡೆಸಿದ್ದರು. 4 ಓವರ್ಗಳಲ್ಲಿ 2 ವಿಕೆಟ್ ಪಡೆದು 12 ರನ್ ನೀಡಿದ್ರು. ಇದ್ರಲ್ಲಿ ಎರಡು ಬೌಂಡರಿಗಳಿದ್ದವು ಅಷ್ಟೇ. ಆಸ್ಟ್ರೇಲಿಯಾದ ಆರಂಭಿಕರಾದ ಮ್ಯಾಥ್ಯೂ ಹೇಡನ್ ಮತ್ತು ಗಿಲ್ ಕ್ರಿಸ್ಟ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದ ಶ್ರೀ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆದ್ರೆ ಆಸ್ಟ್ರೇಲಿಯಾ ವಿರುದ್ಧ ಆ ಮಟ್ಟದ ಪ್ರದರ್ಶನ ನೀಡಲು ಮುಖ್ಯ ಕಾರಣ ಮಹೇಂದ್ರ ಸಿಂಗ್ ಅಂತ ಹೇಳ್ತಾರೆ ಶ್ರೀಶಾಂತ್. ಪಂದ್ಯಕ್ಕೆ ಮುನ್ನ ಧೋನಿ ನೀಡಿರುವ ಮಾತುಗಳೇ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವಂತೆ ಮಾಡಿತ್ತು. ಹೀಗಾಗಿಯೇ ನಾನು ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಯ್ತು ಅಂತಾರೆ ಶ್ರೀ.
ಹಾಗಾದ್ರೆ ಧೋನಿ ಶ್ರೀಶಾಂತ್ಗೆ ಹೇಳಿದ್ದೇನು ? ಇದಕ್ಕೆ ಶ್ರೀಶಾಂತ್ ಹೇಳುವುದು ಹೀಗೆ…. ಪಂದ್ಯಕ್ಕೆ ಮುನ್ನ ಧೋನಿ ಭಾಯ್ ನನ್ನನ್ನು ಕರೆದಿದ್ದರು. ನೀನು ನಿನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಅಲ್ಲಿ ಇಲ್ಲಿ ತೋರಿಸುರ್ತಿತಿಯಾ, ಅದೇನು ನಿನ್ನ ಆಕ್ರಮಣಕಾರಿ ಪ್ರವೃತ್ತಿ ಇದೆಯೋ ಇವತ್ತು ಆಸ್ಟ್ರೇಲಿಯಾ ವಿರುದ್ಧ ತೋರಿಸು ಅಂತ ಹೇಳಿದ್ದರು. ಇದು ನನಗೆ ತುಂಬಾ ಪ್ರೇರಣೆಯಾಯ್ತು, ಹೀಗಾಗಿಯೇ ನಾನು ಆಸ್ಟ್ರೇಲಿಯಾ ವಿರುದ್ಧ ನನ್ನ ಕ್ರಿಕೆಟ್ ಬದುಕಿನಲ್ಲೇ ಅತ್ಯುತ್ತಮವಾದ ದಾಳಿಯನ್ನು ಸಂಘಟಿಸಿದ್ದೆ ಎಂದು ಶ್ರೀಶಾಂತ್ ಆ ದಿನವನ್ನು ನೆನಪು ಮಾಡಿಕೊಂಡ್ರು.
ನಾನು ಆಸ್ಟ್ರೇಲಿಯಾ ವಿರುದ್ಧ ಯಾವಾಗಲೂ ಸಿಟ್ಟಿನಿಂದಲೇ ಆಡುತ್ತಿರುತ್ತೇನೆ. ನನಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಸಾಕಷ್ಟು ಕೋಪವಿದೆ. ಅದಕ್ಕೆ ಕಾರಣ 2003ರ ವಿಶ್ವಕಪ್ನಲ್ಲಿ ಭಾರತದ ಸೋಲು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಬೃಹತ್ ಮೊತ್ತದ ರನ್ ದಾಖಲಿಸಿತ್ತು. ಸವಾಲನ್ನು ಬೆನ್ನಟ್ಟಿದ್ದ ಭಾರತ ಸೋಲು ಅನುಭವಿಸಿತ್ತು. ಭಾರತದ ಪರ ಸೆಹ್ವಾಗ್ ಮಾತ್ರ ರನ್ ಗಳಿಸಲು ಯಶಸ್ವಿಯಾಗಿದ್ರು. ಈ ಸೋಲು ನನ್ನನ್ನು ಯಾವಾಗಲೂ ಕಾಡುತ್ತಿತ್ತು. ಈ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬುದನ್ನು ಕಾಯುತ್ತಿದೆ. ಅದು ಜೋಹಾನ್ಸ್ ಬರ್ಗ್ನಲ್ಲಿ 2007ರಲ್ಲಿ ಸಾಧ್ಯವಾಯ್ತು. ಅಷ್ಟೇ ಅಲ್ಲ ಈ ಪಂದ್ಯದಲ್ಲಿ ನನ್ನ ಬೌಲಿಂಗ್ ಪ್ರದರ್ಶನವನ್ನು ಎಲ್ಲರು ಮಾತನಾಡಿಕೊಳ್ಳುವಂತೆ ಆಗಿರುವುದು ನನಗೆ ತುಂಬಾ ಖುಷಿ ಕೊಡುತ್ತೆ ಅಂತ ಕೇರಳ ಎಕ್ಸ್ ಪ್ರೆಸ್ ಶ್ರೀಶಾಂತ್ ಹೇಳಿದ್ರು.
ಇನ್ನು ನಾನು ಯಾವಾಗಲೂ ಎದುರಾಳಿ ತಂಡದ ನಾಯಕನ ವಿಕೆಟ್ ಅನ್ನು ಪಡೆಯಲು ಇಷ್ಟಪಡುತ್ತಿದೆ. ಹಾಗೇ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ದಿನದ ರಾತ್ರಿ ದಿನೇಶ್ ಭಾಯ್ (ಶ್ರೀಶಾಂತ್ ಕೋಚ್) ನನಗೆ ಕರೆ ಮಾಡಿದ್ರು. ಹಾಗೇ ಪಂದ್ಯದ ಬಗ್ಗೆ ಮಾತನಾಡುತ್ತಿದ್ದ ದಿನೇಶ್ ಭಾಯ್, ನಾಳೆ ನೀನು ಯಾರ ವಿಕೆಟ್ ಪಡೆಯುತ್ತಿಯಾ ಅಂತ ಕೇಳಿದ್ರು. ಅದಕ್ಕೆ ಅವರು ಹೇಳಿದ್ರು. ಪಾಂಟಿಂಗ್ ನಾಳೆಯ ಪಂದ್ಯವನ್ನು ಆಡುವುದಿಲ್ಲ. ಅವರು ಗಾಯಗೊಂಡಿದ್ದಾರೆ. ಫೈನಲ್ ಪಂದ್ಯಕ್ಕೆ ಸಿದ್ಧವಾಗುತ್ತಿದ್ದಾರೆ ಅಂತ. ಅದಕ್ಕೆ ನಾನು ಕೇಳಿದ್ದೆ… ಯಾವ ಫೈನಲ್ ಪಂದ್ಯ. ಅವರು ಹೇಗೆ ಫೈನಲ್ ಮ್ಯಾಚ್ ಅನ್ನು ಆಡ್ತಾರೆ ? ನಾವೇನು ಇಲ್ಲಿಗೆ ಮಾವಿನ ಹಣ್ಣು ತಿನ್ನೋಕೆ ಬಂದವರ ಅಂತ ಕೇಳಿದ್ದೆ ಎಂಬುದನ್ನು ಶ್ರೀಶಾಂತ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡ್ರು.
ಆ ಪಂದ್ಯದಲ್ಲಿ ನಾನು ಮ್ಯಾಥ್ಯೂ ಹೇಡನ್ಗೆ ಯಾರ್ಕರ್ ಎಸೆತವೊಂದನ್ನು ಹಾಕಿದ್ದೆ. ಆದ್ರೆ ಹೆಡನ್ ಆ ಎಸೆತವನ್ನು ಬೌಂಡರಿಗಟ್ಟಿದ್ದರು. ಆಗ ನನ್ನ ಗೇಮ್ ಪ್ಲಾನ್ ವರ್ಕ್ ಔಟ್ ಆಗಲಿಲ್ಲ. ಯಾಕಂದ್ರೆ ಶೋಯಿಬ್ ಅಖ್ತರ್ ಅದೇ ರೀತಿಯಲ್ಲಿ ಬೌಲಿಂಗ್ ಮಾಡಿ ಹೇಡನ್ ವಿಕೆಟ್ ಉರುಳಿಸಿದ್ದರು. ನಂತರ ನಾನು ಬೌಲಿಂಗ್ ಶೈಲಿಯನ್ನೇ ಬದಲಾಸಿದ್ದೆ. ಪರಿಣಾಮ ಹೇಡನ್ ಮತ್ತು ಆ ಪಂದ್ಯದ ನಾಯಕರಾಗಿದ್ದ ಗಿಲ್ ಕ್ರಿಸ್ಟ್ ಅವರ ವಿಕೆಟ್ ಅನ್ನು ಕಬಳಿಸುವಲ್ಲಿ ಯಶಸ್ವಿಯಾದೆ ಅಂತ ಶ್ರೀಶಾಂತ್ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ನ ಸೆಮಿಫೈನಲ್ ಪಂದ್ಯದ ರೋಚಕ ವಿಚಾರಗಳನ್ನು ಹೇಳಿಕೊಂಡ್ರು.








