Uttarakhand murder: ಅಂಕಿತಾ ಸಾವಿಗೆ ಕಾರಣ… ಪ್ರಾಥಮಿಕ ವರದಿಯಲ್ಲಿ ಬಹಿರಂಗ
ಉತ್ತರಾಖಂಡದಲ್ಲಿ ಸಂಚಲನ ಮೂಡಿಸಿದ್ದ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ಮಾರ್ಟಂ ವರದಿ ಬಹಿರಂಗಪಡಿಸಿದೆ. ಸಾವಿಗೂ ಮುನ್ನ ತಲೆಯ ಮೇಲೆ ಗಾಯಗಳಿದ್ದವು ಎಂದೂ ವರದಿ ತಿಳಿಸಿದೆ. ಆದರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ರಿಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಈ ಕರಡು ವರದಿಯನ್ನು ಬಿಡುಗಡೆ ಮಾಡಿದೆ. ಏಮ್ಸ್ನ ನಾಲ್ವರು ಸದಸ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಗಾಯಗಳ ವಿವರಗಳು ಮತ್ತು ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ಅಂತಿಮ ವರದಿಯಲ್ಲಿ ನೀಡಲಾಗುವುದು ಎಂದು ಕರಡು ವರದಿಯಲ್ಲಿ ತಿಳಿಸಲಾಗಿದೆ.
ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ ಅಂಕಿತಾ ಕುಟುಂಬ
ಆದರೆ, ಅಂತಿಮ ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಿಂದ ತೃಪ್ತರಾಗಿಲ್ಲ ಎಂದು ಅಂಕಿತಾ ತಂದೆ ವೀರೇಂದ್ರ ಸಿಂಗ್ ಭಂಡಾರಿ ತಿಳಿಸಿದ್ದು, ಅಂತಿಮ ವರದಿ ಬರುವವರೆಗೆ ಅಂತ್ಯಕ್ರಿಯೆ ನಡೆಸದಂತೆ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯಲ್ಲಿ ಯಾವುದೇ ನೈಜ ವಿವರಗಳಿಲ್ಲ ಎಂದು ಅಂಕಿತಾ ಸಹೋದರ ಅಜಯ್ ಸಿಂಗ್ ಭಂಡಾರಿ ಹೇಳಿದ್ದಾರೆ. ಅಂಕಿತಾ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಏಕೆ ಕೆಡವಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಎಂದು ತಳ್ಳಿ ಹಾಕಿದ್ದಾರೆ.
ರಿಷಿಕೇಶದ ಕಾಲುವೆಯಲ್ಲಿ ಅಂಕಿತಾ ಭಂಡಾರಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಈಗಾಗಲೇ ರೆಸಾರ್ಟ್ ಮಾಲೀಕ ಪುಲಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಮತ್ತು ಅವರಿಗೆ ಸಹಾಯ ಮಾಡಿದ ಸಹಾಯಕ ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ವಿಶೇಷ ಸೇವೆಯಡಿ ಅತಿಥಿಗಳಿಗೆ ಸಹಾಯ ಮಾಡಲು ಅಂಕಿತಾ ನಿರಾಕರಿಸದ ಕಾರಣ ಈ ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸಿಬ್ಬಂದಿಯನ್ನು ಎಸ್ಐಟಿ ವಿಚಾರಣೆ ನಡೆಸಲಿದೆ.
ಈ ನಡುವೆ, ವನತಾರಾ ರೆಸಾರ್ಟ್ನ ಎಲ್ಲಾ ಉದ್ಯೋಗಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ತಿಳಿಸಿದೆ. ನೌಕರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಎಸ್ಐಟಿ ಉಸ್ತುವಾರಿ ಡಿಐಜಿ ಪಿ.ಆರ್.ದೇವಿ ತಿಳಿಸಿದ್ದಾರೆ. ರೆಸಾರ್ಟ್ನ ಪೂರ್ವಾಪರಗಳನ್ನು ಎಳೆದು ತರಲಾಗುತ್ತಿದೆ ಎಂದರು. ಅಂಕಿತಾ ಅವರ ಫೋನ್ನಿಂದ ವಾಟ್ಸಾಪ್ ಸಂಭಾಷಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆ ಕೋನದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.







