ರಾಷ್ಟ್ರಕ್ಕೆ ವಿಶೇಷ ಸೇವೆ ಸಲ್ಲಿಸಿ ನಿಧನರಾಗುವ ಗಣ್ಯಾತಿಗಣ್ಯರು ಹಾಗೂ ಹುತಾತ್ಮ ಸೇನಾ ಯೋಧರಿಗೆ ಶಿಷ್ಟಾಚಾರದ ಪ್ರಕಾರ ರಾಷ್ಟ್ರಧ್ವಜ ಹೊದಿಸಿ ಗೌರವ ನೀಡುವುದು ಸರ್ವೇ ಸಾಮಾನ್ಯ. ಆದರೆ, ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಒಂದು ವೇಳೆ ಸಾವನ್ನಪ್ಪಿದರೆ ಅದಕ್ಕೂ ರಾಷ್ಟ್ರ ಧ್ವಜ ಹೊದಿಸಿ ಅಂತಿಮ ಗೌರವ ಸಲ್ಲಿಸಿ ಅಂತ್ಯಸಂಸ್ಕಾರ ಸಲ್ಲಿಸಲಾಗುತ್ತದೆ ಎಂಬ ವಿಚಾರ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಿಷ್ಟಾಚಾರ ಪಾಲಿಸಿದ ದೆಹಲಿ ಪೊಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಗಣ್ಯ ವ್ಯಕ್ತಿ ಮೃತಪಟ್ಟಾಗ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯುವವರೆಗೂ ಮೃತದೇಹದ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಗುತ್ತದೆ. ಅಂತ್ಯಸಂಸ್ಕಾರ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ರಾಷ್ಟ್ರಧ್ವಜವನ್ನು ಮೃತದೇಹದಿಂದ ತೆಗೆಯಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತದೆ. ಹೀಗಂತ ಸಂವಿಧಾನದ ಶೆಡ್ಯೂಲ್-೧ರಲ್ಲಿ ಉಲ್ಲೇಖಿಸಲಾಗಿದೆ. ಶೆಡ್ಯೂಲ್-೧ರ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.
ರಾಷ್ಟ್ರೀಯ ಗೌರವ ಸಲ್ಲಿಕೆ ಹೇಗೆ ನಡೆಯುತ್ತೆ..!
ಅನಾರೋಗ್ಯ ಅಥವಾ ಅಪಘಾತ ಸೇರಿದಂತೆ ಬೇರೆ ಯಾವುದೇ ಕಾರಣಗಳಿಂದ ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿರುವ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಅಥವಾ ಸೇನಾ ಸಿಬ್ಬಂದಿ ಸ್ಥಳಕ್ಕೆ ತೆರೆಳುತ್ತಾರೆ.
ರಾಷ್ಟ್ರಧ್ವಜದೊಂದಿಗೇ ಸ್ಥಳಕ್ಕೆ ತೆರಳುವ ಪೊಲೀಸರು, ನವಿಲಿನ ಮೃತದೇಹವನ್ನು ರಾಷ್ಟ್ರಧ್ವಜದಿಂದ ಸುತ್ತಿ ಎತ್ತಿಕೊಳ್ಳುತ್ತಾರೆ. ಈ ವೇಳೆ ಅಪ್ಪಿತಪ್ಪಿಯೂ ನವಿಲಿನ ಮೃತದೇಹವನ್ನು ಕೈಯಿಂದ ಮುಟ್ಟುವಂತಿಲ್ಲ. ಪ್ರತಿಯೊಂದು ಪ್ರಕ್ರಿಯೆಯೂ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ನಡೆಯುತ್ತದೆ.

ರಾಷ್ಟ್ರಧ್ವಜದಲ್ಲಿ ಸುತ್ತಿಕೊಂಡ ನವಿಲಿನ ಮೃತದೇಹವನ್ನು ಮೊದಲು ಕಟ್ಟಿಗೆಯ ಪೆಟ್ಟಿಗೆಯೊಂದರಲ್ಲಿ ಇಡಲಾಗುತ್ತದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತದೆ. ನಿಗದಿಪಡಿಸಿದ ಸ್ಥಳವೊಂದರಲ್ಲಿ ನವಿಲಿನ ಮೃತದೇಹವನ್ನಿಟ್ಟು ರಾಷ್ಟ್ರೀಯ ಗೌರವ ಸಲ್ಲಿಸಿದ ಬಳಿಕ ಮಣ್ಣು ಮಾಡಲಾಗುತ್ತದೆ.
ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದೇ ಜಾಸ್ತಿ ಎಂದು ವನ್ಯಜೀವಿ ಕಾರ್ಯಕರ್ತರ ಆರೋಪವಾಗಿದೆ.
ಚರ್ಚೆಗೆ ಗ್ರಾಸವಾದ ದೆಹಲಿ ಘಟನೆ
ಇತ್ತೀಚೆಗೆ ದೆಹಲಿಯ ಹೈಕೋರ್ಟ್ ಸಮೀಪ ನವಿಲೊಂದು ಗಾಯಗೊಂಡು ಬಿದ್ದಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬರುತ್ತೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ತಿರಂಗ ಧ್ವಜ ಹೊದಿಸಿ ನವಿಲನ್ನು ಎತ್ತಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಗೌರವ ಸಲ್ಲಿಸುವ ಪೊಲೀಸರು, ನಂತರ ನವಿಲನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ನವಿಲು ಮೃತಪಟ್ಟಿದೆ. ಇದಾದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ನವಿಲಿನ ಅಂತ್ಯಸಂಸ್ಕಾರ ನಡೆಸಲಾಯಿತು.
ವನ್ಯಜೀವಿ ಕಾಯ್ದೆ ಪ್ರಕಾರ ಮೃತ ನವಿಲಿಗೆ ರಾಷ್ಟ್ರೀಯ ಗೌರವ ನೀಡಿ ಅಂತ್ಯಸಂಸ್ಕಾರ ನಡೆಸಬೇಕು. ಶಿಷ್ಟಾಚಾರದ ಪ್ರಕಾರವೇ ಮೃತ ನವಿಲಿಗೆ ರಾಷ್ಟ್ರೀಯ ಗೌರವ ನೀಡಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








