ಹುಲಿಗೆ ವಯಸ್ಸಾಯ್ತು! ಅದಿನ್ನು ಮೊದಲಿನ ಹಾಗೆ ಘರ್ಜಿಸಿ ಭೇಟೆಯಾಡೋಲ್ಲ ಅಂತ ಕೆಣಕಲು ಹೋದಿರಿ ಜೋಕೆ?
ನಾನು ಕೆಲವು ದಿನಗಳ ಹಿಂದೆ ಸನ್ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಗ್ಗೆ ಒಂದು ಸಣ್ಣ ಲೇಖನ ಬರೆದಿದ್ದೆ. ‘ಅವರು ಸುಮ್ಮನೆ ಯಡಿಯೂರಪ್ಪ ಆಗಲಿಲ್ಲ’ ಎಂಬ ತಲೆಬರಹದ ಆ ಲೇಖನ ಸಾಮಾಜಿಕ ಜಾಲತಾಣಗಳೆಲ್ಲಾ ಸುತ್ತಿ ಕೊನೆಗೆ ನನಗೂ ಫಾರ್ವರ್ಡ್ ಆಗಿ ಬಂದಿತ್ತು. ಆ ಲೇಖನದಲ್ಲಿ ಯಡಿಯೂರಪ್ಪನವರ ಹೋರಾಟದ ಬದುಕು, ಅವರಲ್ಲಿನ ಗಟ್ಟಿ ನಿಲುವು, ಬದ್ಧತೆ, ಹಠ ಎಲ್ಲವನ್ನೂ ಸಂಕ್ಷಿಪ್ತವಾಗಿ ಬರೆದಿದ್ದೆ. ಅವರದೇ ಜಿಲ್ಲೆಯಿಂದ ಬಂದ ನಾನು, ಪತ್ರಿಕೋದ್ಯಮಕ್ಕೆ ಬಂದಾಗಿನಿಂದಲೂ ಅವರ ರಾಜಕಾರಣದ ಮಜಲುಗಳನ್ನು ಸೂಕ್ಷ್ಮವಾಗಿ ನೋಡುತ್ತಲೇ ಇದ್ದೇನೆ. ಕರ್ನಾಟಕದ ರಾಜಕಾರಣದ ಚರಿತ್ರೆಯಲ್ಲೇ ಅವರಂತಹ ಮಾಸ್ ಲೀಡರ್ ಮತ್ತೊಬ್ಬರಿಲ್ಲ.
ರಾಮಕೃಷ್ಣ ಹೆಗಡೆ, ಎಸ್.ಎಂ ಕೃಷ್ಣ, ಪಟೇಲರು, ದೇವರಾಜ ಅರಸು, ಮುಂತಾದ ಯಶಸ್ವಿ ಮುಖ್ಯಮಂತ್ರಿಗಳನ್ನು ನಾವು ನೋಡಿದ್ದೇವೆ ಆದ್ರೆ ಯಡಿಯೂರಪ್ಪ ಇವರೆಲ್ಲರಿಗಿಂತ ಪ್ರಭಾವಿಯಾಗಿ ಬೆಳೆದು ನಿಂತವರು. ತಮ್ಮ ಸಮುದಾಯದ ಪ್ರಶ್ನಾತೀತ ನಾಯಕರಾಗಿ ದೈತ್ಯ ಬೆಳವಣಿಗೆ ಕಂಡವರು ಹಾಗೂ ಆನೆ ನಡೆದಿದ್ದೇ ಹಾದಿ ಎಂಬಂತೆ ರಾಜಕೀಯ ಯಾತ್ರೆ ನಡೆಸಿದವರು. ಅವರು ರಾತ್ರೋ ರಾತ್ರಿ ಪ್ರಸಿದ್ಧಿ ಪಡೆದವರಲ್ಲ; ತಮ್ಮಿಡೀ ಜೀವನವನ್ನೇ ಹೋರಾಟದ ಹಾದಿ ತುಳಿದು ಅಧಿಕಾರದ ಗಾಧಿ ಏರಿದವರು. 77 ವರ್ಷ ತುಂಬಿರುವ ಯಡಿಯೂರಪ್ಪ ತಮ್ಮ ವಯಸ್ಸನ್ನೂ ಮರೆಮಾಚಿ ಬತ್ತದ ಉತ್ಸಾಹದ ಚಿಲುಮೆಯಂತೆ ಈಗಲೂ ಕೆಲಸ ಮಾಡುತ್ತಿದ್ದಾರೆ.
ಇವತ್ತು ಅವರ ಬಗ್ಗೆ ಮತ್ತೊಂದು ಲೇಖನ ಬರೆಯಬೇಕಾದ ಅಗತ್ಯ ಬಂದಿದೆ ಅಂದರೆ ಅದಕ್ಕೊಂದು ಕಾರಣವಿದೆ. ಕೇಂದ್ರ ಬಿಜೆಪಿ ಪಾಲಿಗೆ ಬಿಎಸ್ ಯಡಿಯೂರಪ್ಪ ಎಂಬ ನೇತಾರ ಸದಾ ಮಲತಾಯಿ ಮಗ. ಕಾರಣವಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಕೇಂದ್ರದ ನಾಯಕರಿಗೆ ಇಷ್ಟವಾಗಲಿಲ್ಲ. ಕರ್ನಾಟಕವೆನ್ನುವ ಸಮೃದ್ಧ ಹುಲ್ಲುಗಾವಲು ಆಡಳಿತಕ್ಕೆ ಸಿಕ್ಕುತ್ತದೆ ಎನ್ನುವ ಲಾಭಕ್ಕಿಂತ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕಲ್ಲ ಎನ್ನುವ ಸಂಕಟವೇ ನಾಯಕರನ್ನು ಬಾಧಿಸಿತ್ತು.
ಹಾಗಾಗಿ ಅವತ್ತು ಬಿಎಸ್ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಪ್ರಧಾನಿಯಾಗಲಿ ಅಥವಾ ಪ್ರಮುಖ ಮುಖಂಡರಾಗಲಿ ಬರಲಿಲ್ಲ, ಕೊನೆಗೊಂದು ಸಂಭ್ರಮಾಚರಣೆಯೂ ಆಗಲಿಲ್ಲ. ಅದಾದ ನಂತರ ಸಂಪುಟ ವಿಸ್ತರಣೆ, ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕಾತಿಯನ್ನು ವಿನಾಕಾರಣ ಮುಂದೂಡಲಾಯ್ತು. ಅದೇ ವೇಳೆ ರಾಜ್ಯದ 10 ಜಿಲ್ಲೆಗಳಲ್ಲಿ ಜಲಪ್ರವಾಹ ಸಂಭವಿಸಿತು. ವಾನಪ್ರಸ್ತಾಶ್ರಮದ ವಯಸ್ಸಿನ ಯಡಿಯೂರಪ್ಪ ಹಠ ಬಿಡದೇ ಒಬ್ಬರೇ ಏಕಾಂಗಿಯಾಗಿ ನೆರೆ ಬಂದ ಕಡೆ ಸಂಚರಿಸಿ ಸಂತ್ರಸ್ತರ ಕಷ್ಟ ಸುಖ ವಿಚಾರಿಸಿಕೊಂಡರು. ಅವತ್ತು ಸರ್ಕಾರ ಅಂತಿದ್ದಿದ್ದು ಕೇವಲ ಮುಖ್ಯಮಂತ್ರಿಯಾಗಿ ಪ್ರಮಾಣವಿಧಿ ಪಡೆದುಕೊಂಡಿದ್ದ ಯಡಿಯೂರಪ್ಪ ಮಾತ್ರ.
ಕೆಲವು ದಿನಗಳ ನಂತರ ಸಂಪುಟ ವಿಸ್ತರಣೆಯೇನೋ ಆಯಿತು ಆದರೆ ಯಡಿಯೂರಪ್ಪನವರ ಅಧಿಕಾರವನ್ನು ನಿಯಂತ್ರಿಸಲು ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಲಾಯ್ತು. ಯಡಿಯೂರಪ್ಪನವರ ಸುತ್ತಮುತ್ತ ರಾಜಕೀಯ ಕಾರ್ಯದರ್ಶಿ, ಆಡಳಿತ ಸಹಾಯಕರು, ಆಪ್ತ ಸಲಹೆಗಾರರು, ಇತ್ಯಾದಿ ಹೆಸರಿನಲ್ಲಿ ಸ್ಪೈಡರ್ ನೆಟ್ ಹಣೆಯಲಾಯ್ತು. ಸಿಎಂ ಕಚೇರಿಯ ಪ್ರತಿ ಫೈಲನ್ನೂ ಸರ್ವೇಲೆನ್ಸ್ ಮಾಡಲಾಯ್ತು. ಆದ್ರೆ ಇದ್ಯಾವುದಕ್ಕೂ ಜಗ್ಗುವ ಬಗ್ಗುವ ಪೈಕಿಯವರಲ್ಲದ ಬಿಎಸ್ವೈ ತಮ್ಮ ಪಾಡಿಗೆ ತಾವು ಆಡಳಿತ ನಡೆಸಿಕೊಂಡು ಹೋದರು. ನೆರೆ ಪರಿಹಾರದ 35 ಸಾವಿರ ಕೋಟಿ ಅಂದಾಜಿನ ಮೊತ್ತ ಬಿಡುಗಡೆ ಮಾಡದೇ ತಡೆ ಹಿಡಿಯಲಾಯ್ತು. ಹೀಗಾದರೂ ಯಡಿಯೂರಪ್ಪನವರ ಸರ್ಕಾರಕ್ಕೆ ಹಿನ್ನಡೆಯಾಗಲಿ ಎನ್ನುವ ತಂತ್ರವಿರಬಹುದು. ಒಂದೆರಡು ಬಾರಿ ಯಡಿಯೂರಪ್ಪನವರೂ ತಾಳ್ಮೆ ಕಳೆದುಕೊಂಡಿದ್ದೂ ಹೌದು. ಆದರೂ ಅವರನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.
ಈಗ ಕರೋನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಕೋವಿಡ್ -19 ನಿರ್ವಹಣೆ ಅತ್ಯುತ್ತಮವಾಗಿ ನಡೆಯಲು ಕಾರಣ ಬಿಎಸ್ ಯಡಿಯೂರಪ್ಪನವರ ರಾಜಕಾರಣದ ಅನುಭವ ಹಿರಿತನ ಮತ್ತು ಬದ್ಧತೆಗಳೆ. 6 ಕೋಟಿ ದಾಟಿರುವ ರಾಜ್ಯದ ನಿರ್ವಹಣೆ ಅಷ್ಟು ಸಲೀಸಾಗಿರಲಿಲ್ಲ. ಲಾಕ್ ಡೌನ್ ಕಾಲದಲ್ಲಿ ದಿನಕ್ಕೊಬ್ಬರು ಗೊಂದಲ ಸೃಷ್ಟಿಸಿದರೂ ಬಿಎಸ್ವೈ ತಲೆಕೆಡಿಸಿಕೊಳ್ಳದೇ ಆಡಳಿತ ನಡೆಸಿದರು. ಬೊಕ್ಕಸದಲ್ಲಿ ಹಣವಿಲ್ಲದೇ ಇದ್ದರೂ ಸರ್ಕಾರಿ ನೌಕರರ ವೇತನ ಕಡಿತ ಮಾಡಲಿಲ್ಲ. ಮಧ್ಯಮ ವರ್ಗದ ಪರ ನಿಂತು ಯೋಜನೆಗಳನ್ನು ಜಾರಿ ಮಾಡಿದರು. ದೇಶದ ಎಲ್ಲಾ ರಾಜ್ಯಗಳ ಪೈಕಿ ಕರೋನಾ ನಿರ್ವಹಣೆಯಲ್ಲಿ ಕರ್ನಾಟಕದ ಸಿಎಂ ಅತ್ಯುತ್ತಮ ಎನಿಸಿಕೊಂಡರು.
ನೆನಪಿಡಿ ಇವತ್ತು ಪ್ರತೀ ಇಲಾಖೆಗಳಿಗೆ ಮಂತ್ರಿಗಳಿದ್ದರೂ ಯಡಿಯೂರಪ್ಪ ಮಾತ್ರ ಒಂಟಿಯಾಗಿದ್ದಾರೆ. ಎಷ್ಟೋ ವಿಚಾರಗಳು ಅವರ ಗಮನಕ್ಕೆ ಬಾರದೇ ಜಾರಿಯಾಗುತ್ತಿವೆ. ಹೇಗಾದರೂ ಶತಾಯಗತಾಯ ಅವರನ್ನು ಆಡ್ವಾಣಿಯವರಂತೆ ಮೂಲೆಗುಂಪು ಮಾಡಲು ಬಿಜೆಪಿ ಒಳಗಿನ ಒಂದು ಬಣ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಮೊನ್ನೆ ಮೊನ್ನೆ ರಾಜ್ಯಸಭೆ ಉಮೇದುವಾರಿಕೆಗೆ ಯಡಿಯೂರಪ್ಪ ಪಟ್ಟಿಯ ಖತ್ತಿ, ಕೋರೆ, ಶೆಟ್ಟಿಯವರನ್ನು ನಿರಾಕರಿಸಿ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಎಂಬ ಹೊಸ ಹೆಸರು ತಂದಿದ್ದೂ ಇದೇ ಒಳರಾಜಕಾರಣ. ನಾಳೆ ಎಂಎಲ್ಸಿ ಚುನಾವಣೆಯಲ್ಲೂ ಈ ಬಣ ತಮ್ಮದೇ ಆದ ಹೊಸ ಅಭ್ಯರ್ಥಿಗಳನ್ನು ಮುಂದಿಟ್ಟು ಯಡಿಯೂರಪ್ಪನವರಿಗೆ ಹಿನ್ನಡೆ ಉಂಟುಮಾಡಿದರೂ ಅಚ್ಚರಿಯೇನಿಲ್ಲ. ಬಿಎಲ್ ಸಂತೋಷ್ ತಂತ್ರಗಾರಿಕೆ ಹಿಂದಿನಿಂದಲೂ ಪ್ಯಾರ್ ಲಲ್ ಲೈನ್ ನಲ್ಲಿ ಇದೇ ಕೆಲಸ ಮಾಡಿಕೊಂಡು ಬಂದಿದೆ. ಕೋಟೆ ಕಟ್ಟಿದ್ದು ಯಾವನಾದರೇನು? ಧ್ವಜ ನೆಡಲು ಯಾರಾದರೇನು? ಮರೆಯದಿರಿ ಅದೇ ಕೋಟೆ ಮತ್ತೆ ಛಿದ್ರಗೊಂಡರೆ ಕಟ್ಟಲು ನಿಮಗೆ ತಾಕತ್ತಿದೆಯಾ?
77 ವರ್ಷ ತುಂಬದ ಯಡಿಯೂರಪ್ಪ ಈಗ ಮುದಿ ಹುಲಿ. ಹುಲಿ ಭೇಟೆಯಾಡೋದಿಲ್ಲ ಅನ್ನೋ ನಂಬಿಕೆಯಿಂದ ಹುಡುಗಾಟ ಮಾಡಲು ಹೋದರೆ ಅದರ ಪರಿಣಾಮ ಮಾತ್ರ ಗಂಭೀರವಾಗುತ್ತದೆ. ಈವರೆಗೆ ತಾಳ್ಮೆಯಿಂದ ಅವುಡುಗಚ್ಚಿ ಕುಳಿತಿರುವ ಯಡಿಯೂರಪ್ಪ ಸದ್ದಿಲ್ಲದೆ ಬ್ರಹ್ಮಾಸ್ತ್ರ ತಯಾರು ಮಾಡಿಕೊಳ್ಳುತ್ತಿದ್ದಾರೆ. ಆ ಬ್ರಹ್ಮಾಸ್ತ್ರದ ಹೆಸರು ಬಿ.ವೈ ವಿಜಯೇಂದ್ರ. ತಮ್ಮ ಸಮುದಾಯದ ಮುಂದಿನ ಬಲಾಢ್ಯ ನಾಯಕರನ್ನಾಗಿ ವಿಜಯೇಂದ್ರರನ್ನು ಯಡಿಯೂರಪ್ಪ ತಯಾರು ಮಾಡುತ್ತಿದ್ದಾರೆ. 2013ರಲ್ಲಿ ಕೆಜೆಪಿ ಕಟ್ಟಿದ ಯಡಿಯೂರಪ್ಪನವರು ಬಿಜೆಪಿಯನ್ನು ಧೂಳಿಪಟ ಮಾಡಿದ್ದು ನೆನಪಿರಬೇಕಲ್ಲ; ಈಗಲೂ ಬಿಎಸ್ವೈ ಬಂಡಾಯವೆದ್ದರೆ ಬಿಜೆಪಿ ಮತ್ತೆ ಮೇಲೆ ಏಳಲಾಗದಂತೆ ಛಿದ್ರವಾಗುತ್ತದೆ.
ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಈಶ್ವರಪ್ಪ, ಸದಾನಂದ ಗೌಡ, ಸಿಟಿ ರವಿ, ಅಶೋಕ್ ಸೇರಿದಂತೆ ಯಾವ ಮಹಾ ನಾಯಕರಿಗೂ ಮತ್ತೆ ಬಿಜೆಪಿ ಕಟ್ಟಿ ನಿಲ್ಲಿಸುವ ಚೈತನ್ಯವಿಲ್ಲ, ಗಟ್ಟಿತನವಿಲ್ಲ, ಛಲವೂ ಇಲ್ಲ ಮತ್ತು ಸಮುದಾಯಗಳ ಬೆಂಬಲವೂ ಇಲ್ಲ. ಲಿಂಗಾಯಿತ ವೀರಶೈವ ಸಮುದಾಯಗಳ ಮಠ ಮಂದಿರಗಳ ಯಡಿಯೂರಪ್ಪನವರನ್ನು ಒಪ್ಪಿಕೊಂಡು ಬೆಳೆಸಿದಂತೆ ಮತ್ಯಾರನ್ನಾದರೂ ಬೆಳೆಸುತ್ತವೆ ಅಂದರೆ ಅದು ವಿಜಯೇಂದ್ರರನ್ನು ಮಾತ್ರ. ಅದಕ್ಕೊಂದು ಉದಾಹರಣೆ ಕಳೆದ ಫೆಬ್ರವರಿಯಲ್ಲಿ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮುರುಘಾ ಮಠದ ನೇತೃತ್ವದಲ್ಲಿ ನಡೆದ ಎರಡನೇ ಮಹಾ ಗಣಮೇಳ ಮತ್ತು ಶರಣ ಸಮ್ಮೇಳನ. ಇದರ ಸಂಪೂರ್ಣ ಉಸ್ತುವಾರಿ ನಿಭಾಯಿಸಿ ಯಶಸ್ಸಿಗೆ ಕಾರಣವಾಗಿದ್ದು ವಿಜಯೇಂದ್ರ. ಇಂತದ್ದೊಂದು ದೊಡ್ಡ ವೇದಿಕೆಯನ್ನು ಅವರ ಹೆಗಲಿಗೆ ಹಾಕಿದ್ದ ಹಿಂದಿರುವ ಸಂದೇಶ ಸ್ಪಷ್ಟ. ಕರ್ನಾಟಕದ ರಾಜಕಾರಣದ ಪಡಸಾಲೆಗೆ ವಿಜಯೇಂದ್ರರ ರಂಗಪ್ರವೇಶವಾಗುತ್ತಿದೆ.
ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಬಿದ್ದುಹೋಗುತ್ತದೆ. 2013ರ ಚುನಾವಣೆಯ ನಂತರ ಒಂದು ವೇಳೆ ಯಡಿಯೂರಪ್ಪ ಮರಳಿ ಬಿಜೆಪಿಗೆ ಬರದೇ ಇದ್ದಿದ್ದರೆ ಈಗ ಬಿಜೆಪಿ ಅಧಿಕಾರದಲ್ಲೇ ಇರುತ್ತಿರಲಿಲ್ಲ. ಕೆಜೆಪಿ ಗೆದ್ದಿದ್ದು 6 ಸೀಟುಗಳೇ ಆದರೆ ಪಡೆದುಕೊಂಡ ಮತಪ್ರಮಾಣ ಶೆ.9ಕ್ಕಿಂತ ಜಾಸ್ತಿ. ಅವತ್ತಿಗೂ ಇವತ್ತಿಗೂ ಪರಿಸ್ಥಿತಿ ತೀರಾ ಭಿನ್ನವೇನಿಲ್ಲ. ಮೋದಿಯ ಮುಖ ನೋಡಿ ಓಟ್ ಕೊಡಿ ಎಂದು ರಾಜ್ಯದ ಜನರಿಗೆ ಈಗ ಕೇಳಲು ಸಾಧ್ಯವಿಲ್ಲ. ವಿತೌಟ್ ಯಡಿಯೂರಪ್ಪ ಬಿಜೆಪಿಗೆ ರಾಜ್ಯದಲ್ಲಿ ಅಸ್ಥಿತ್ವವೇ ಇಲ್ಲ. ಅತ್ತ ಕೆಪಿಸಿಸಿ ಸಾರಥ್ಯ ವಹಿಸಿರುವ ಡಿಕೆ ಶಿವಕುಮಾರ್ ಡೈನಾಮಿಕ್ ಯೋಜನೆಗಳೊಂದಿಗೆ ಪಕ್ಷ ಸಂಘಟನೆಗೆ ಮುಂದಾಗ್ತಿದ್ದಾರೆ. ಇಷ್ಟೆಲ್ಲಾ ಹೇಳಿದ ನಂತರ ಕಟ್ಟಕಡೆಯದಾಗಿ ಇಷ್ಟನ್ನೇ ಹೇಳಬಯಸುತ್ತೇನೆ, ದಕ್ಷಿಣ ಭಾರತದ ಹೆಬ್ಬಾಗಿಲು ತೆರೆದು ಬಿಜೆಪಿ ಎಂಬ ಪಕ್ಷವನ್ನು ಸ್ವಾಗತಿಸಿದ ಯಡಿಯೂರಪ್ಪ ಎಂಬ ನಾಯಕನ ಬಗ್ಗೆ ಪಕ್ಷಕ್ಕೆ ಕಿಂಚಿತ್ ಕೃತಜ್ಞತೆಯಾದರೂ ಇರಬೇಕಿತ್ತು.
-ವಿಭಾ (ವಿಶ್ವಾಸ್ ಭಾರದ್ವಾಜ್)
*








