ಬೆಂಗಳೂರು : ಯುವತಿಯೊಬ್ಬಳು ಕೊಲೆ ಪ್ರಕರಣದ(Murder Case) ಆರೋಪಿಯನ್ನು ಮದುವೆಯಾಗಲು ಮುಂದಾಗಿದ್ದು, ಕರ್ನಾಟಕ ಹೈಕೋರ್ಟ್(Karnataka High Court) ಆರೋಪಿಗೆ ಪೆರೋಲ್ ನೀಡಿ ಆದೇಶ ಹೊರಡಿಸಿದೆ.
ತನ್ನ ಪ್ರಿಯಕರನೊಂದಿಗೆ ವಿವಾವಾಗಲು ಬಯಸಿದ ಯುವತಿ ಆರೋಪಿಯ ತಾಯಿಯೊಂದಿಗೆ ಕರ್ನಾಟಕ ಹೈಕೋರ್ಟ್ ಗೆ ಹೋಗಿದ್ದಳು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಏಪ್ರಿಲ್ 5ರಿಂದ ಏಪ್ರಿಲ್ 20ರ ವರೆಗೆ ಷರತ್ತುಬದ್ಧ ಪೆರೋಲ್ ನೀಡಿ ಆದೇಶ ಹೊರಡಿಸಿದೆ.
ಯುವತಿ ನೀತಾ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ ಆನಂದ್ ಕಳೆದ 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ ಕೊಲೆ ಪ್ರಕರಣವೊಂದರಲ್ಲಿ ಬಂಧಿಯಾಗಿದ್ದ ಆನಂದ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಆನಂದ್ ಕಳೆದ ಆರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ, ಇತ್ತ ಯುವತಿಗೆ ಕುಟುಂಬಸ್ಥರು ಬೇರೆ ಮದುವೆಯಾಗುವಂತೆ ಒತ್ತಾಯಿಸಿದ್ದರು. ಆದರೆ ತನ್ನ ಪ್ರಿಯಕರನನ್ನು ಬಿಟ್ಟಿರಾಲಾಗದ ನೀತಾ ಬೇರೆ ಯುವಕನನ್ನು ವಿವಾಹವಾಗಲು ಒಪ್ಪಿಲ್ಲ.
ಪೋಷಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನೀತಾ ತನ್ನ ಪ್ರಿಯಕರ ಆನಂದ್ ಜೊತೆ ವಿವಾಹವಾಗಲು ನಿರ್ಧರಿಸಿದ್ದಾಳೆ. ಅದರಂತೆ ಆನಂದ್ ತಾಯಿ ರತ್ನಮ್ಮ ಜೊತೆ ಸೇರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಮದುವೆಯಾಗಲು ಪೆರೋಲ್ ನೀಡುವಂತೆ ಮನವಿ ಮಾಡಿದ್ದಾಳೆ. ಪೆರೋಲ್ ನೀಡದಿದ್ದರೆ ತನ್ನ ಜೀವದ ಪ್ರೀತಿ ಸಿಗುವುದಿಲ್ಲ. ಹೀಗಾಗಿ ಮದುವೆಯಾಗಲು 15 ದಿನಗಳ ತುರ್ತು ಪೆರೋಲ್ ನೀಡುವಂತೆ ಮನವಿ ಮಾಡಿದ್ದಳು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ಯುವತಿ ಅರ್ಜಿಗೆ ಸರ್ಕಾರಿ ಪರ ವಕೀಲ ವಿನೋದ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದುವೆಗೆ ಪೆರೋಲ್ ನೀಡಲು ನಿಯಮದಲ್ಲಿ ಅವಕಾಶವಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಪೀಠ, ಪೆರೋಲ್ ನೀಡಿ ಆದೇಶ ಹೊರಡಿಸಿದೆ.
2015ರ ಆಗಸ್ಟ್ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆನಂದ್ ಗೆ ಸೆಷನ್ಸ್ ಕೋರ್ಟ್ 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆನಂದ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿತ್ತು.








