ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು ರೈಫಲ್ ಶೂಟಿಂಗ್ ಕೋಚ್ ನೀಡುತ್ತಿದ್ದ ಮತಾಂತರ ಕಿರುಕುಳವೇ ಇಡೀ ಕುಟುಂಬದ ಸಾವಿಗೆ ಕಾರಣ ಎನ್ನುವ ಅಂಶ ಬಯಲಾಗಿದೆ.
ಕಳೆದ ಆಗಸ್ಟ್ 16 ಮತ್ತು 17 ರ ಮಧ್ಯರಾತ್ರಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್ ತಿಲ್ಲಪುಡಿ ನೂಕರಾಜು ಅವರು ತಮ್ಮ ಪತ್ನಿ ಮೀನಾ ಮತ್ತು ಮಗಳು ಸೌಜನ್ಯ ಅವರೊಂದಿಗೆ ರಾಜಮಹೇಂದ್ರವರಂ ಸೇತುವೆಯಿಂದ ಗೋದಾವರಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದರು. ಈ ದುರಂತದಲ್ಲಿ ಹತ್ತು ವರ್ಷದ ಮೊಮ್ಮಗ ಮಾತ್ರ ಮೀನುಗಾರರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದು ಉಳಿದ ಮೂವರು ಸಾವನ್ನಪ್ಪಿದ್ದಾರೆ.
ಡೆತ್ ನೋಟ್ ನಲ್ಲಿ ಅಡಗಿದೆ ಸಾವಿನ ರಹಸ್ಯ
ಈ ಕುಟುಂಬದ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ನೂಕರಾಜು ಬರೆದಿದ್ದ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಶೇಖ್ ಸಾದಿಕ್ ಖಾನ್ ಎಂಬ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಶೇಖ್ ಸಾದಿಕ್ ಖಾನ್ ತಮ್ಮ ಇಡೀ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಸುಲಿಗೆ ಮಾಡಲು ಯತ್ನಿಸಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಐದು ರಾಜ್ಯಗಳಲ್ಲಿ ನಡೆದ ಹೈಡ್ರಾಮಾ
ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಸಾದಿಕ್ ಖಾನ್ ನನ್ನು ಬಂಧಿಸಲು ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿದ್ದರು. ಯಾವುದೇ ಮೊಬೈಲ್ ಫೋನ್ ಬಳಸದೆ ಮತ್ತು ಡಿಜಿಟಲ್ ವಹಿವಾಟು ನಡೆಸದೆ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಆರೋಪಿಯನ್ನು ಐದು ರಾಜ್ಯಗಳಲ್ಲಿ ಸತತವಾಗಿ ಬೆನ್ನಟ್ಟಿದ ತನಿಖಾಧಿಕಾರಿಗಳು ಕೊನೆಗೂ ಉತ್ತರ ಪ್ರದೇಶದ ಮೀರತ್ ನಲ್ಲಿ ಸೆರೆಹಿಡಿದಿದ್ದಾರೆ. ಮೃತ ನೂಕರಾಜು ಅವರ ಮೊಮ್ಮಗನಿಗೆ ಶಾಲೆಯಲ್ಲಿ ರೈಫಲ್ ಶೂಟಿಂಗ್ ತರಬೇತಿ ನೀಡುತ್ತಿದ್ದ ಖಾನ್ ಕಳೆದ ಎರಡು ವರ್ಷಗಳಿಂದ ಈ ಕುಟುಂಬಕ್ಕೆ ಹತ್ತಿರವಾಗಿದ್ದನು ಎಂದು ತಿಳಿದುಬಂದಿದೆ.
ಸಿಬಿಐ – ಎನ್ ಐ ಎ ತನಿಖೆಗೆ ಹೆಚ್ಚಿದ ಒತ್ತಾಯ
ಈ ಪ್ರಕರಣದ ಆಳ ಮತ್ತು ಗಂಭೀರತೆಯನ್ನು ಗಮನಿಸಿರುವ ಮಾಜಿ ಸಂಸದ ವಿಜಯಸಾಯಿ ಅವರು ಇದರಲ್ಲಿ ಅಂತರಾಷ್ಟ್ರೀಯ ಪಿತೂರಿ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಖಾನ್ ಕೇವಲ ಮತಾಂತರ ಮಾತ್ರವಲ್ಲದೆ ಅಕ್ರಮ ಬಂದೂಕು ಸರಬರಾಜು ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಅಥವಾ ಎನ್ ಐ ಎ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಾಕಿನಾಡ ಜಿಲ್ಲಾ ಎಸ್ಪಿ ಬಿಂದು ಮಾಧವ್ ನೇತೃತ್ವದಲ್ಲಿ ನಡೆದ ಈ ಕಠಿಣ ಕಾರ್ಯಾಚರಣೆಯು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.








