ದೇಶದಲ್ಲಿ ಶಿಕ್ಷಣದ ಸ್ಥಿತಿಗತಿ ಮತ್ತು ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುವ ಸರ್ಕಾರಗಳು ಶಿಕ್ಷಣದ ಮೂಲಸೌಕರ್ಯಕ್ಕೆ ಕನಿಷ್ಠ ಮೊತ್ತವನ್ನು ನೀಡಲು ಮೀನಮೇಷ ಎಣಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಸಿಕ್ ನಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಧಾರ್ಮಿಕ ನಂಬಿಕೆಗಳಿಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಕುಂಭಮೇಳದ ಬಜೆಟ್ ಮತ್ತು ಮರಾಠಿ ಶಾಲೆಗಳ ದುಸ್ಥಿತಿ
ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆಯಲಿರುವ ಕುಂಭಮೇಳದ ಮೂಲಸೌಕರ್ಯಕ್ಕೆ ಸರ್ಕಾರ ಬರೋಬ್ಬರಿ 34000 ಕೋಟಿ ರೂಪಾಯಿ ಮತ್ತು ಕಾರಿಡಾರ್ ಯೋಜನೆಗೆ 11000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಈ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಈ ಒಟ್ಟು ಮೊತ್ತದ ಕೇವಲ ಶೇ 0.1 ರಷ್ಟು ಅಂದರೆ ಸರಿಸುಮಾರು 32 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ನೀಡಿದ್ದರೆ ರಾಜ್ಯದ 100 ರಿಂದ 150 ಮರಾಠಿ ಮಾಧ್ಯಮ ಶಾಲೆಗಳು ಮುಚ್ಚುವುದನ್ನು ತಡೆಯಬಹುದಿತ್ತು ಎಂದು ನ್ಯಾಯಮೂರ್ತಿ ವರಾಳೆ ತಿಳಿಸಿದರು.
ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಸಾವು ಶೋಚನೀಯ
ಸರ್ಕಾರಿ ವಸತಿ ಶಾಲೆಗಳ ಅದರಲ್ಲೂ ಆಶ್ರಮ ಶಾಲೆಗಳ ಸ್ಥಿತಿಗತಿ ಅತ್ಯಂತ ಕಳವಳಕಾರಿಯಾಗಿದೆ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು. ಸರಿಯಾದ ಹಾಸಿಗೆ ಮತ್ತು ಮೂಲಸೌಕರ್ಯ ಇಲ್ಲದೆ ನೆಲದ ಮೇಲೆ ಮಲಗಿದ್ದ ಮೂವರು ವಿದ್ಯಾರ್ಥಿನಿಯರು ಹಾವು ಕಡಿತಕ್ಕೆ ಬಲಿಯಾಗಿರುವ ಘಟನೆಯನ್ನು ಅವರು ನೆನಪಿಸಿದರು. ಅನೇಕ ವಸತಿ ಶಾಲೆಗಳಲ್ಲಿ ಮಕ್ಕಳು ಕನಿಷ್ಠ ಸೌಲಭ್ಯಗಳಿಲ್ಲದೆ ಶಿಕ್ಷಣ ಪಡೆಯುವಂತಾಗಿದೆ. ಬಜೆಟ್ ನಲ್ಲಿ ಶಿಕ್ಷಣಕ್ಕೆ ಮೀಸಲಿಡುವ ಅನುದಾನದ ಪ್ರಮಾಣ ಈ ಹಿಂದೆ ಶೇ 8 ರಿಂದ 12 ರಷ್ಟಿತ್ತು ಆದರೆ ಈಗ ಅದು ಗಣನೀಯವಾಗಿ ಕುಸಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣವೇ ರಾಷ್ಟ್ರದ ಅಡಿಪಾಯ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಹಣ ವ್ಯಯಿಸದಿದ್ದರೆ ರಾಷ್ಟ್ರದ ಅಡಿಪಾಯ ದುರ್ಬಲಗೊಳ್ಳುತ್ತದೆ. ಸರ್ಕಾರಗಳು ಬೃಹತ್ ಯೋಜನೆಗಳಿಗೆ ಹಣ ಮೀಸಲಿಡುವ ಮುನ್ನ ಶಾಲೆಗಳ ಉಳಿವಿಗಾಗಿ ಚಿಂತಿಸಬೇಕು ಎಂದು ನ್ಯಾಯಮೂರ್ತಿ ವರಾಳೆ ಕರೆ ನೀಡಿದರು. ನಾಸಿಕ್ ನ ಸಿಂಹಸ್ಥ ಕುಂಭಮೇಳವು ಈ ವರ್ಷದ ಅಕ್ಟೋಬರ್ ನಲ್ಲಿ ಆರಂಭವಾಗಲಿದ್ದು ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.








