ಮೈಶುಗರ್ ಕಾರ್ಖಾನೆ ಖಾಸಗೀಕರಣ ಬಗ್ಗೆ ರಾಜವಂಶಸ್ಥ ಯದುವೀರ್ ಹೇಳಿದ್ದೇನು?
ಮೈಸೂರು : ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ವಿಚಾರವಾಗಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಯದುವೀರ್ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ.. ಮಂಡ್ಯ ಜಿಲ್ಲೆಯು ಕಬ್ಬುಬೆಳೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸಮಾನವಾಗಿದೆ. ಮೈಶುಗರ್ ಕಾರ್ಖಾನೆಯ ಪರಂಪರೆಯ ದೃಷ್ಟಿಯಿಂದ ಖಾಸಗೀಕರಣಕ್ಕೆ ನಿರಂತರ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂತಹದ್ದಾಗಿದೆ, ಆದರೆ ಪ್ರತಿರೋಧವು ಕಳವಳಕ್ಕೆ ಕಾರಣವಾಗಿದೆ, ಏಕೆಂದರೆ ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ.
ಕಾರ್ಖಾನೆಯನ್ನು ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಯ ನಡುವೆ ನಮಗೆ ಇರುವ ಒಂದು ಆಯ್ಕೆಯೆಂದರೆ, ಕಾರ್ಯಾಚರಣೆ ಮತ್ತು ನಿರ್ವಹಣೆ (operations and maintenance) ವ್ಯವಸ್ಥೆಯಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸುವುದು. ಈ ಮಧ್ಯಮ ವ್ಯವಸ್ಥೆಯು ಖಾಸಗೀಕರಣದ ವಿರುದ್ಧ ಸಾರ್ವಜನಿಕರಿಗಿರುವ ಭಾವನೆಯನ್ನು ತೃಪ್ತಿಪಡಿಸುವುದಲ್ಲದೆ ಕಾರ್ಖಾನೆಯು ಮತ್ತೊಮ್ಮೆ ಸಮೃದ್ಧಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ ಇದರಿಂದ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಸಂಕಷ್ಟಗಳನ್ನು ಎದುರಿಸಬೇಕಾಗಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.








