ಏನಿದು ಒಂದು ದೇಶ – ಒಂದು ಚುನಾವಣೆ? ಸಂವಿಧಾನ ಏನು ಹೇಳುತ್ತೆ..
What is one country – one election?
ಸದ್ಯ ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಲು ಟೊಂಕ ಕಟ್ಟಿ ನಿಂತಿದೆ. ಈ ‘ಒಂದು ದೇಶ ಒಂದು ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿ ರಚಿಸಿದೆ.
ಹಾಗಾದರೆ ಏನಿದು ಒಂದು ದೇಶ ಒಂದು ಚುನಾವಣೆ ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಹಿಂದೆಯೂ ಇದು ಜಾರಿಯಲ್ಲಿತ್ತಾ? ಎಂಬ ಮಾಹಿತಿ ಇಲ್ಲಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಈ ಹೆಸರೇ ಹೇಳುವಂತೆ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಇದರ ಉದ್ದೇಶ. ಅಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನವನ್ನು ಏಕಕಾಲದಲ್ಲಿ ನಡೆಸುವುದು. ಪ್ರಸ್ತುತ, ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ.
ಒಂದು ರಾಷ್ಟ್ರ ಒಂದು ಚುನಾವಣೆ ಅಷ್ಟು ಸುಲಭವಲ್ಲ. ಈ ಮಸೂದೆಯನ್ನು ಅಂಗೀಕರಿಸಲು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ. ಲೋಕಸಭೆಯ 543 ಸ್ಥಾನಗಳಲ್ಲಿ ಕನಿಷ್ಠ 67 ಪ್ರತಿಶತದಷ್ಟು ಜನರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯಸಭೆಯ 245 ಸ್ಥಾನಗಳಲ್ಲಿ ಶೇ.67ರಷ್ಟು ಜನ ಬೆಂಬಲ ನೀಡಬೇಕು. ಇದರ ಜೊತೆಗೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯ ಮುದ್ರೆಯನ್ನು ನೀಡಬೇಕು. ಅಂದರೆ 14 ರಾಜ್ಯಗಳು ಈ ಮಸೂದೆಯ ಪರವಾಗಿ ನಿಂತರೇ ಮಾತ್ರ ಈ ಮಸೂದೆ ಜಾರಿಯಾಗುತ್ತದೆ.
ಪ್ರಸ್ತುತ 10 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಇದನ್ನು ಬೆಂಬಲಿಸುವ ಪಕ್ಷಗಳು 6 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಲೋಕಸಭೆಯಲ್ಲಿ ಎನ್ಡಿಎ 333 ಮತಗಳ ಬಲ ಹೊಂದಿದೆ. ಇದು 61 ಪ್ರತಿಶತಕ್ಕೆ ಸಮನಾಗಿರುತ್ತದೆ. ಇನ್ನು ಶೇ.5ರಷ್ಟು ಮತ ಗಳಿಸುವುದು ಕಷ್ಟವಾಗುತ್ತದೆ. ರಾಜ್ಯಸಭೆಯಲ್ಲಿ ಕೇವಲ ಶೇ.38 ಸ್ಥಾನಗಳಿವೆ ಹೀಗಾಗಿ ಈ ಮಸೂದೆ ಅಂಗಿರವಾಗುವು ಸ್ವಲ್ಪ ಕಷ್ಟವಾಗಬಹುದು
ಇನ್ನೂ ಈ ಒಂದು ದೇಶ ಒಂದು ಚುನಾವಣೆಯಿಂದ ದೇಶಕ್ಕೆ ಆಗುವ ಲಾಭವಾದರು ಏನು? ಮತ್ತು ಒಂದು ದೇಶ ಒಂದು ಚುನಾವಣೆಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ. ಇದರ ಸಾಧಕ ಏನೆಂಬುದು ನೋಡುವುದಾರೇ
2019ರ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ 10,000 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಇತ್ತೀಚೆಗೆ ನಡೆದ ನಮ್ಮ ರಾಜ್ಯ ವಿಧಾನಸಭೆ ಚುನಾವಣೆಗೆ 500 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ವೆಚ್ಚಕ್ಕೆ ರಾಜಕೀಯ ಪಕ್ಷಗಳು ಮಾಡಿದ ಖರ್ಚು ಕೂಡಿಸಿದರೆ ಒಂದು ಕ್ಷಣ ತಲೆ ತಿರಗುತ್ತದೆ. 2019ರ ಲೋಕಸಭೆ ಚುನಾವಣೆಗೆ ಆಯಾ ಪಕ್ಷಗಳ ಖರ್ಚು 60 ಸಾವಿರ ಕೋಟಿ ರೂ.ವರೆಗೆ ಇತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ಹೇಳಿದೆ. ಒಂದು ವೇಳೆ ಒಂದು ದೇಶ ಒಂದು ಚುನಾವಣೆ ಜಾರಿಗೆ ಬಂದರೇ ಚುನಾವಣೆಗಾಗಿ ಖರ್ಚಾಗುವ ಸರ್ಕಾರದ ಹಣ ಅಂದರೆ ನಮ್ಮ ತೆರಗೆ ಹಣ ಕಡಿಮೆಯಾಗುತ್ತದೆ.
ಇನ್ನೂ ನಮ್ಮ ದೇಶದಲ್ಲಿ ಒಂದಲ್ಲಾ ಒಂದು ಕ್ಷೇತ್ರ ಅಥವಾ ಸ್ಥಳೀಯ ಮಟ್ಟದಲ್ಲಿ ಚುನಾವಣೆ ಇದ್ದೆ ಇರುತ್ತದೆ. ಈ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿದ್ದರೆ, ಆಡಳಿತ ನಿಧಾನವಾಗುತ್ತದೆ. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾವಣೆ ಏಕಕಾಲಕ್ಕೆ ನಡೆಸಲು ಚಿಂತನೆ ನಡೆದಿದೆ.
ಅಲ್ಲದೇ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಅಡೆತಡೆ ಉಂಟಾಗುತ್ತದೆ. ಒಂದೇ ಚುನಾವಣೆಯಿಂದಾಗಿ ಇದನ್ನು ತಡೆಯಬಹುದಾಗಿದೆ. ಹಾಗೇ ಎಲ್ಲ ರೀತಿಯ ಮತದಾನ ಒಂದೇ ಸಮಯದಲ್ಲಿ ನಡೆಯುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಾಗವ ಸಾಧ್ಯತೆ ಇದೆ ಎಂದು ಇದರ ಪರವಾಗಿ ಇದ್ದವರ ವಾದವಾದರೇ, ಇದನ್ನು ವಿರೋಧಿಸುವವರು ಬೇರೆಯದ್ದೇ ವಾದವಿದೆ.
ಇನ್ನೂ ಒಂದು ದೇಶ ಒಂದೇ ಚುನಾವಣೆ ಈ ಹಿಂದೆಯೂ ನಡೆದಿತ್ತು. 1967 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ, ಕೆಲವು ರಾಜ್ಯಗಳ ವಿಧಾನಸಭೆ ವಿಸರ್ಜನೆ ಮತ್ತು 1970 ರಲ್ಲಿ ಲೋಕಸಭೆಯ ಒಂದು ವರ್ಷದ ಮೊದಲು ವಿಸರ್ಜನೆ ಆಗಿದ್ದರಿಂದ ಈ ನೀತಿಯನ್ನು ಮುಂದುವರಿಸಲಾಗಲಿಲ್ಲ.
1983 ರಲ್ಲಿ, ಚುನಾವಣಾ ಆಯೋಗವು ಮತ್ತೊಮ್ಮೆ ಈ ರೀತಿಯ ಚುನಾವಣೆಗೆ ಪ್ರಸ್ತಾಪ ತಂದಿತ್ತು. ಆದರೆ, ಆಗ ಸರ್ಕಾರ ಆಸಕ್ತಿ ತೋರಿಸಲಿಲ್ಲ. 1999ರಲ್ಲಿ ಕಾನೂನು ಆಯೋಗದ ವರದಿ ಇದನ್ನು ಮತ್ತೊಮ್ಮೆ ಎತ್ತಿ ಹಿಡಿದಿತ್ತು. 2016ರಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿದ್ದರು. 2017ರಲ್ಲಿ ನೀತಿ ಆಯೋಗ ಈ ಬಗ್ಗೆ ಕಸರತ್ತು ನಡೆಸಿತ್ತು. 2019ರಲ್ಲಿ ಈ ವಿಚಾರವಾಗಿ ವಿವಿಧ ಪಕ್ಷಗಳ ಮುಖಂಡರ ಜೊತೆ ಪ್ರಧಾನಿ ಸಭೆ ಏರ್ಪಡಿಸಿದ್ದರು. ಆದರೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇದರಿಂದ ದೂರ ಉಳಿದಿದ್ದವು.
ಇದೀಗ ಮತ್ತೆ ಇದು ಮುನ್ನಲೆಗೆ ಬಂದಿದ್ದು, ಸೆಪ್ಟೆಂಬರ್18 ರಿಂದ 22ರ ನಡುವೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ದೇಶ – ಒಂದು ಚುನಾವಣೆ’ ವಿಧೇಯಕವನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ.








