ವಯನಾಡು: ವಯನಾಡಿನ ಭೀಕರ ಸ್ಫೋಟಕ್ಕೆ ಇಡೀ ದೇಶವೇ ಕಣ್ಣೀರು ಸುರಿಸುತ್ತಿದೆ. ಪ್ರಕೃತಿ ಮಾತೆಯ ಅರ್ಧ ನಿಮಿಷದ ಮುನಿಸಿಗೆ ಸಾವಿರಾರೂ ಜನರ ಬದುಕು ಬೀದಿಗೆ ಬಂದು ನಿಂತಿದೆ. ನೂರಾರು ಕುಟಂಬಗಳು ತಮ್ಮ ಸದಸ್ಯರನ್ನು ಕಳೆದುಕೊಂಡು ಗೋಳಾಡುತ್ತಿವೆ.
ಮೃತದೇಹಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಮಲ್ಪಾಡಿಯಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ತಮ್ಮವರ ಹೆಣ ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ಆಕ್ರಂದನ ಅಲ್ಲಿ ಎಂಥವರನ್ನೂ ಬೆಚ್ಚಿ ಬೀಳಿಸುತ್ತಿದೆ. ಅಂಬುಲೆನ್ಸ್ನಲ್ಲಿ ಬಂದ ಹೆಣ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಹೆಣ ಸಿಗುತ್ತೋ ಇಲ್ವೋ ಎಂದು ಒದ್ದಾಡಿ, ದೇವರಿಗೆ ಪ್ರಾರ್ಥಿಸುತ್ತಿದ್ದಾರೆ.
ದೇಹವೇ ಇರದ ಆರು ಬರೀ ಕೈಗಳು ಇಲ್ಲಿಯವರೆಗೆ ಸಿಕ್ಕಿವೆ. ಇವು ಯಾರ ಕೈ? ಪತ್ತೆ ಮಾಡುವುದು ಹೇಗೆ? ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖಗಳು ಜಜ್ಜಿ ಹೋಗಿವೆ. ಯಾರ ತಲೆ ಎನ್ನುವುದೇ ತಿಳಿಯುತ್ತಿಲ್ಲ. ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್ಡಿಆರ್ಎಫ್ ಶವಗಾರ ಸೇರಿಸಿದ್ದಾರೆ. ಇದನ್ನು ನೋಡುತ್ತಿದ್ದರೆ ವಿಧಿಯ ಕ್ರೂರತೆಗೆ ಶಾಪ ಹಾಕುವಂತಾಗುತ್ತಿದೆ.
ಚೂರಲ್ಮಲ ಎಂಬ ಗ್ರಾಮಕ್ಕೆ ಸಮೃದ್ಧ ಊರು ಎಂಬ ಪಟ್ಟ. ಜೊತೆಗೆ ಇಲ್ಲಿದ್ದವರೆಲ್ಲ ಬಡತನದಲ್ಲೇ ಸುಖ ಉಂಡವರು. ಎಲ್ಲಾದಕ್ಕಿಂತಾ ಹೆಚ್ಚಾಗಿ ಶೇ.98 ಭಾಗದ ಜನ ಇಲ್ಲಿ ತಮ್ಮ ಸ್ವಂತ ಮನೆಗಳಲ್ಲೇ ವಾಸಿಸುತ್ತಿದ್ದರು. ಐಷಾರಾಮಿ ಅಲ್ಲದಿದ್ದರೂ ತಮ್ಮದು ಎಂದು ಒಂದು ಸ್ವಂತ ನೆಲೆ ಕಟ್ಟಿಕೊಂಡವರು ಚೂರಲ್ಮಲ ಗ್ರಾಮದ ಜನ. ಗ್ರಾಮದಲ್ಲಿ ಕಟ್ಟಿದ ಐದು ಮನೆಗಳಿಗೆ ಇನ್ನು ಒಂದು ಎರಡು ತಿಂಗಳಲ್ಲಿ ಗೃಹಪ್ರವೇಶ ಆಗಬೇಕಿತ್ತು. ಆದರೆ, ಇದರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳ ಜೊತೆಗೆ ಸಮಾಧಿಯಾಗಿದ್ದಾರೆ.








