18,000 ಉದ್ಯೋಗಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿರುವ ಕಾಗ್ನಿಜಂಟ್
ಬೆಂಗಳೂರು, ಜುಲೈ 4: ಕರ್ನಾಟಕ ಮತ್ತು ಚೆನ್ನೈನಲ್ಲಿನ ರಾಜ್ಯ ಐಟಿ ನೌಕರರ ಸಂಘಗಳು ಯುಎಸ್ ಟೆಕ್ ಸಂಸ್ಥೆ ಕಾಗ್ನಿಜಂಟ್ ಭಾರತದಾದ್ಯಂತ ಸುಮಾರು 18,000 ಉದ್ಯೋಗಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದೆ.
ಹೊಸ ಯೋಜನೆ(ಪ್ರಾಜೆಕ್ಟ್) ಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡುವಂತೆ ಕಾಗ್ನಿಜೆಂಟ್ ಕಂಪನಿಯು ತನ್ನ ನೌಕರರನ್ನು ಕೇಳಿಕೊಂಡಿದ್ದು, ಕಂಪೆನಿಯ ಒತ್ತಡಕ್ಕೆ ಮಣಿದು ರಾಜೀನಾಮೆಯನ್ನು ನೀಡದಂತೆ ಎಲ್ಲಾ ಕಾಗ್ನಿಜೆಂಟ್ ಉದ್ಯೋಗಿಗಳಿಗೆ ಕರೆ ನೀಡುವ ಡ್ರೈವ್ ಅನ್ನು ಪ್ರಾರಂಭಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಐಟಿ ನೌಕರರ ಒಕ್ಕೂಟದ (ಕೆಐಟಿಯು) ವಕ್ತಾರರು ತಿಳಿಸಿದ್ದಾರೆ.

ಕಂಪೆನಿಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಸಾಮೂಹಿಕ ರಾಜೀನಾಮೆ ಪಡೆಯಲು ಮುಂದಾಗಿದೆ. ನಾವು ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ವಜಾಗೊಳಿಸುವ ಮೊದಲು ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಆದರೆ ಕಾಗ್ನಿಜೆಂಟ್ ಕಾನೂನನ್ನು ಉಲ್ಲಂಘಿಸಿ ಹೊಸ ಪ್ರಾಜೆಕ್ಟ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರುವ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದು, ಭಾರತದಾದ್ಯಂತ ಸಾವಿರಾರು ಉದ್ಯೋಗಿಗಳು ಇದಕ್ಕೆ ಬಲಿಯಾಗಲಿದ್ದಾರೆ. ಕಾಗ್ನಿಜೆಂಟ್ನ ಆಡಳಿತವು ತೆಗೆದುಕೊಂಡ ಈ ಅಕ್ರಮ ಮತ್ತು ಅಮಾನವೀಯ ನಿರ್ಧಾರವನ್ನು ಕರ್ನಾಟಕ ರಾಜ್ಯ ಐಟಿ / ಐಟಿಎಸ್ ನೌಕರರ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಐಟಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಕೇಳಲಾಗುತ್ತಿದೆ ಎಂದು ಹೆಸರನ್ನು ಹೇಳಲು ಬಯಸದ ನೌಕರರು ತಿಳಿಸಿದ್ದು, ಸುಮಾರು 30-45 ದಿನಗಳವರೆಗೆ ಕಾಯಿಸಿ ಯಾವುದೇ ಪ್ರಾಜೆಕ್ಟ್ ಸಿಗದ ಕಾರಣ ಉದ್ಯೋಗಿಗಳನ್ನೇ ದೂಷಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಮಿಕ ಕಾನೂನಿನ ಪ್ರಕಾರ, 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡುವ ಕಂಪನಿಗಳು ಅವರನ್ನು ವಜಾಗೊಳಿಸುವ ಮೊದಲು ಕಾರ್ಮಿಕ ಇಲಾಖೆಯಿಂದ ಅನುಮೋದನೆ ಪಡೆಯಬೇಕು ಎಂದು ಕೆಐಟಿಯು ವಕ್ತಾರರು ತಿಳಿಸಿದ್ದಾರೆ. ನೌಕರರು ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಬೇಡಿ, ಒತ್ತಾಯದಿಂದ ವಜಾಗೊಳಿಸುವಿಕೆಯು ಕಾನೂನಿಗೆ ವಿರುದ್ಧವಾಗಿದೆ. ಆದುದರಿಂದ ಕಂಪನಿ ರಾಜೀನಾಮೆ ಕೇಳಿದರೆ ಕೊಡಲು ನಿರಾಕರಿಸಿ ಎಂದು ಎಲ್ಲಾ ನೌಕರರನ್ನು ಕೆಐಟಿಯು ಒತ್ತಾಯಿಸುತ್ತದೆ ಎಂದು ಕೆಐಟಿಯು ವಕ್ತಾರರು ಹೇಳಿದರು.
ಕೊರೋನಾ ಸಾಂಕ್ರಾಮಿಕದ ಮಧ್ಯೆ, ಐಟಿ / ಐಟಿ ಸೇವೆಗಳ ಉದ್ಯಮದಲ್ಲಿನ ವಜಾಗಳ ವರದಿಗಳು ದೇಶಾದ್ಯಂತ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿವೆ, ವಿವಿಧ ಐಟಿ / ಐಟಿ ನೌಕರರ ಸಂಘಗಳು ರಾಜ್ಯ ಕಾರ್ಮಿಕ ಇಲಾಖೆಗಳನ್ನು ಸಂಪರ್ಕಿಸುತ್ತಿದ್ದು, ಕಂಪನಿಗಳು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿವೆ.