ಸೌರವ್ ಗಂಗೂಲಿಯವರನ್ನು ದ್ವೇಷ ಮಾಡುತ್ತಿದ್ದೆ… ನಾಸೀರ್ ಹುಸೇನ್ ಹೀಗೆ ಯಾಕೆ ಹೇಳ್ತಾರೆ ?
ಸೌರವ್ ಗಂಗೂಲಿ… ಟೀಮ್ ಇಂಡಿಯಾದ ದಿಕ್ಕು ದೆಸೆಯನ್ನೇ ಬದಲಾಯಿಸಿದ್ದ ನಾಯಕ. ಓರ್ವ ಆಟಗಾರನಗಿಂತ ಸೌರವ್ ಗಂಗೂಲಿ ಹೆಚ್ಚು ಖ್ಯಾತಿ ಗಳಿಸಿದ್ದು ತನ್ನ ನಾಯಕತ್ವದಿಂದ. ಮ್ಯಾಚ್ ಫಿಕ್ಸಿಂಗ್ ಭೂತದಿಂದ ಒಡಕಿನ ಮನೆಯಾಗಿದ್ದ ಟೀಮ್ ಇಂಡಿಯವನ್ನು ಸದೃಡ ತಂಡವಾಗಿ ಕಟ್ಟಿದ್ದು ಇದೇ ಸೌರವ್ ಗಂಗೂಲಿ. ಹಿರಿಯ ಆಟಗಾರರ ಜೊತೆ ಯುವ ಆಟಗಾರರಿಗೆ ಅವಕಾಶವನ್ನು ಕೊಟ್ಟು ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿದ್ದು ಕೂಡ ಕೊಲ್ಕತ್ತಾದ ಮಹಾರಾಜ.
2011ರ ವಿಶ್ವಕಪ್ ಗೆಲ್ಲುವಿನಲ್ಲೂ ಗಂಗೂಲಿಯ ಪಾತ್ರ ದೊಡ್ಡದಿದೆ. 2003ರ ವಿಶ್ವಕಪ್ ಫೈನಲ್ ನಲ್ಲಿ ಸೋತು, ಆನಂತರದ ದಿನಗಳಲ್ಲಿ ಟೀಮ್ ಇಂಡಿಯಾಗೆ ಬೇಡವಾಗಿದ್ದ ಗಂಗೂಲಿ 2007ರ ವಿಶ್ವಕಪ್ ನಂತರ ತೆರೆಮರೆಗೆ ಸರಿಯಬೇಕಾಯ್ತು. ಆದ್ರೂ ತಾನು ಅವಕಾಶ ಕೊಟ್ಟ ಹುಡುಗರು 2011ರ ವಿಶ್ವಕಪ್ ನಲ್ಲಿ ಪ್ರಶಸ್ತಿ ಹಿಡಿದು ಸಂಭ್ರಮಿಸಿದ್ದಾಗ ಇದೇ ಸೌರವ್ ಗಂಗೂಲಿ ಕಾಮೆಂಟರಿ ಬಾಕ್ಸ್ ನಿಂದ ಹೊರಗಡೆ ಬಂದು ಆ ಸಂತಸ, ಸಂಭ್ರಮವನ್ನು ಕಣ್ತುಂಬಿಕೊಂಡಿದ್ದರು. ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂತಹ ಗಂಗೂಲಿಯ ನಾಯಕನಾಗಿದ್ದಾಗ ಇಂಗ್ಲೆಂಡ್ ನಾಯಕ ನಾಸೀರ್ ಹುಸೇನ್ ದ್ವೇಷ ಮಾಡುತ್ತಿದ್ರಂತೆ. ನಾಸೀರ್ ಹುಸೇನ್ಗೆ ಗಂಗೂಲಿಯನ್ನು ಕಂಡ್ರೆ ಸ್ವಲ್ಪನೂ ಇಷ್ಟವಾಗುತ್ತಿರಲಿಲ್ಲವಂತೆ. ಹಾಗಿದ್ರೆ ನಾಸೀರ್ ಹುಸೇನ್ ಗಂಗೂಲಿಯವರನ್ನು ಯಾಕೆ ದ್ವೇಷ ಮಾಡುತ್ತಿದ್ದರು ಎಂಬುದನ್ನು ಸ್ವತಃ ನಾಸೀರ್ ಹುಸೇನ್ ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ ಇರೋದೇ ಹಾಗೇ.. ನಾನು ಅವರ ವಿರುದ್ಧ ಆಡುತ್ತಿರುವಾಗ ಅವರನ್ನು ತುಂಬಾನೇ ದ್ವೇಷ ಮಾಡುತ್ತಿದ್ದೆ. ಯಾಕಂದ್ರೆ ಪ್ರತಿ ಬಾರಿ ಟಾಸ್ಗಾಗಿ ಅವರನ್ನು ಕಾಯಬೇಕಾಗಿತ್ತು. ಅವರು ನನ್ನನ್ನು ತುಂಬಾ ಸಲ ಟಾಸ್ಗಾಗಿ ಕಾಯಿಸಿದ್ದಾರೆ. ಹೀಗಾಗಿ ಅವರನ್ನು ನಾನು ದ್ವೇಷ ಮಾಡುತ್ತಿದ್ದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ವೀವ್ ವಾ ಕೂಡ ಗಂಗೂಲಿ ವಿರುದ್ಧ ಇದೇ ರೀತಿಯ ಆರೋಪವನ್ನು ಮಾಡಿದ್ದರು.
ಆದ್ರೆ ಈಗ ಹಾಗಲ್ಲ. ಕಳೆದ ಒಂದು ದಶಕದಿಂದ ಗಂಗೂಲಿ ಜೊತೆ ನಾನು ಕಾಮೆಂಟರಿ ಬಾಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. (ಬಿಸಿಸಿಐ ಅಧ್ಯಕ್ಷನಾಗಿರುವುದಕ್ಕಿಂತ ಮುನ್ನ) ಅವರು ತುಂಬಾ ಒಳ್ಳೆಯವರು. ಆದ್ರೆ ಕಾಮೆಂಟರಿ ಬಾಕ್ಸ್ಗೂ ಗಂಗೂಲಿ ತಡವಾಗಿಯೇ ಆಗಮಿಸ್ತಾರೆ. ಆದ್ರೆ ಅವರ ಜೊತೆ ಸಂವಾದ ನಡೆಸಿದಾಗ ನನಗೆ ಅನ್ನಿಸಿದ್ದು ಗಂಗೂಲಿ ಒಳ್ಳೆಯ ವ್ಯಕ್ತಿ ಅಂತ ನಾಸೀರ್ ಹುಸೇನ್ ಹೇಳಿದ್ದಾರೆ.