ಗದಗ: ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ಪಟ್ಟಣದ ಗೋಸಾವಿ ಸಮಾಜದವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು ಹಾಗೂ ಪಿಎಸ್ ಐ ಅವರ ನಡೆ ಖಂಡಿಸಿ ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮಸೇನೆ (Sri Ram Sena), ಗೋಸಾವಿ ಸಮಾಜ (Gosavi Samaj) ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ಬಂದ್ ಕರೆ ಘೋಷಿಸಿರುವುದಾಗಿ ಹೇಳಿದೆ. ವಿಜಯ ದಶಮಿ ದಿನದಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಗೋಸಾವಿ ಸಮಾಜದಿಂದ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಹೊರಟಿತ್ತು. ಈ ಸಂರ್ಭದಲ್ಲಿ ಅನ್ಯಕೋಮಿನ ಆರೇಳು ಯುವಕರು ಮೆರವಣಿಗೆಯಲ್ಲಿ ನುಗ್ಗಿ ಗೋಸಾವಿ ಯುವಕರ ಮೇಲೆ ಹಲ್ಲೆ ಮಾಡಿ, ಕೇಸರಿ ಶಾಲು ನೆಲಕ್ಕೆ ಎಸೆದು ತುಳಿದು ಹೋಗಿದ್ದರು.
ಈ ಕುರಿತು ಸಮಾಜದವರೆಲ್ಲಾ ಸೇರಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಠಾಣೆ ಪಿಎಸ್ ಐ ಈರಣ್ಣ ರಿತ್ತಿ ಅವರು ದೂರುದಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಹಲ್ಲೆ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಹೇಳಲು ಹೋದವರ ಮೇಲೆ ಪಿಎಸ್ಐ ಲಾಠಿ ಚಾರ್ಜ್ ಮಾಡಿಸಿದ್ದರು. ಹೀಗಾಗಿ ಹಲ್ಲೆಕೋರರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಜೊತೆಗೆ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ ಪಿಎಸ್ಐ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಅ.19ರಂದು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6ರ ವರೆಗೆ ಬಂದ್ಗೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.