ಚಂಡೀಗಢ: ಸೇತುವೆ ಮೇಲಿಂದ ಖಾಸಗಿ ಬಸ್ ಬಿದ್ದ ಪರಿಣಾಮ 8 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
50 ಜನರಿದ್ದ ಖಾಸಗಿ ಬಸ್ ಸೇತುವೆಯ ಮೇಲಿಂದ ಚರಂಡಿಗೆ ಬಿದ್ದಿದೆ. ಪರಿಣಾಮ 8 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಪಂಜಾಬ್ನ (Punjab) ಬತಿಂಡಾದಲ್ಲಿ (Bathinda) ನಡೆದಿದೆ.
ಡಿ.27ರಂದು ಈ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, 18ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಬಸ್ ಪಂಜಾಬ್ನ ಸರ್ದುಲ್ಗಢದಿಂದ ಬತಿಂಡಾಗೆ ತೆರಳುತ್ತಿತ್ತು. ಈ ವೇಳೆ ಜಿವಾನ್ ಸಿಂಗ್ ವಾಲಾ ಗ್ರಾಮದಲ್ಲಿ ಸೇತುವೆ ಮೇಲಿಂದ ಚರಂಡಿಗೆ ಬಿದ್ದಿದೆ. ಕೂಡಲೇ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಆಗಮಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೊಂದು ಭೀಕರ ದುರಂತ. ಗಾಯಗೊಂಡು ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ 18 ಜನರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.








