ಮಂಡ್ಯ: ಆರೋಪಿಯೊಬ್ಬ ಎಎಸ್ಐ (ASI) ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ (Nagamangala) ನಡೆದಿದೆ. ನಾಗಮಂಗಲ ಗ್ರಾಮಾಂತರ ಎಎಸ್ ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಎಂಬಾತ ಹಲ್ಲೆ ಮಾಡಿದ್ದಾನೆ. ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು ಪ್ರತಿ ದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಕೃಷ್ಣನನ್ನು ಠಾಣೆಗೆ ಕರೆತರಲು ಎಎಸ್ಐ ರಾಜು ತೆರಳಿದ್ದರು. ನಾಗಮಂಗಲದ ಕೋರ್ಟ್ ಹತ್ತಿರ ನಿಂತಿದ್ದ ಕೃಷ್ಣನನ್ನು ಎಎಸ್ಐ ರಾಜು ಠಾಣೆಗೆ ಕರೆದಿದ್ದರು.
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್ಐ ಮುಂದಾಗಿದ್ದರು. ಈ ವೇಳೆ ಎಎಸ್ಐ ರಾಜುವನ್ನು ಕೃಷ್ಣ ತಳ್ಳಿದ್ದಾನೆ. ಆಗ ಅವರು ಕೆಳಗೆ ಬಿದ್ದಿದ್ದಾನೆ. ನಂತರ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.








