ನವದೆಹಲಿ: ಔತಣ ಕೂಟಕ್ಕೆ ನಾಯಕರು ಸೇರಿದರೆ ತಪ್ಪೇನು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿದೇಶಿ ಪ್ರವಾಸದ ನಂತರ ದೆಹಲಿಗೆ ಬಂದಿಳಿದು ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿವಾಸದಲ್ಲಿ ಸಿಎಂ ಡಿನ್ನರ್ ಸಭೆ ( Dinner Meeting) ನಡೆಸಿದ ಕುರಿತು ಮಾತನಾಡಿದ್ದಾರೆ. ನಮ್ಮ ಮನೆಗೆ ನೀವು ಬರೋದು, ನಿಮ್ಮ ಮನೆಗೆ ನಾವು ಬರೋದು ಸಹಜ. ಔತಣ ಕೂಟಕ್ಕೆ ಸೇರಿದರೆ ರಾಜಕೀಯ ಯಾಕೆ ಬೇರೆಸುತ್ತೀರಿ. ನಾನು ಕೆಲವು ಬಾರಿ ಊಟಕ್ಕೆ ಕರೆಯುತ್ತೇನೆ ಎಂದಿದ್ದಾರೆ.
ನಾಲ್ಕು ವರ್ಷಗಳಿಂದ ಎಲ್ಲಿಯೂ ಹೊರಗೆ ಹೋಗಿರಲಿಲ್ಲ. ಹೀಗಾಗಿ ಕುಟುಂಬದ ಜೊತೆಗೆ ಹೊಸ ವರ್ಷಕ್ಕೆ ವಿದೇಶಕ್ಕೆ ತೆರಳಿದ್ದೆ. ಕೆಲವರು ಕುಟುಂಬ ಜೊತೆಗೆ ಬೇರೆ ಕಡೆಗೆ ಹೋಗಿದ್ದಾರೆ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೆಲವು ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು.ಸ ಸಂಪುಟ ಸಭೆಯ ನಂತರ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಡಾ. ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ್ದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದರು.








