1989ರ ಭಾರತ -ಪಾಕ್ ಟೆಸ್ಟ್ ಸರಣಿಯಲ್ಲಿ ಚೆಂಡನ್ನು ವಿರೂಪಗೊಳಿಸಲಾಗಿತ್ತು – ಕಿರಣ್ ಮೋರೆ
ಅದು 1989ರ ಭಾರತ ಮತ್ತು ನಡುವಿನ ಟೆಸ್ಟ್ ಸರಣಿ. ಆ ಪಂದ್ಯದಲ್ಲಿ ಭಾರತದ ಪರ ಸಚಿನ್ ತೆಂಡುಲ್ಕರ್ ಮತ್ತು ಪಾಕ್ ಪರ ವೇಗಿ ವಕಾರ್ ಯೂನಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದರ್ಪಾಣೆ ಮಾಡಿದ್ದರು. ಆ ಸರಣಿಯಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಉಭಯ ತಂಡಗಳ ಆಟಗಾರರು ಚೆಂಡನ್ನು ಮನಬಂದಂತೆ ಗೀಚುತ್ತಿದ್ದರು ಎಂಬ ವಿಚಾರವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಬಹಿರಂಗಪಡಿಸಿದ್ದಾರೆ.
ಆಗ ಚೆಂಡನ್ನು ವಿರೂಪಗೊಳಿಸಿದ್ರೆ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಅಲ್ಲದೆ ಚೆಂಡನ್ನು ವಿರೂಪಗೊಳಿಸಿದ್ರೆ ದಂಡ ವಿಧಿಸುವ ಅಷ್ಟೊಂದು ದೊಡ್ಡ ಅಧಿಕಾರವೂ ಅಂಪೈರ್ಗಳಿಗೆ ಇರಲಿಲ್ಲ. ಅಲ್ಲದೆ ಚೆಂಡನ್ನು ಗೀಚಲು ಅವಕಾಶವನ್ನೂ ನೀಡಲಾಗಿತ್ತು. ಮಹತ್ವದ ಘಟ್ಟದಲ್ಲಿ ಚೆಂಡು ಹೆಚ್ಚು ಸ್ವಿಂಗ್ ಪಡೆಯಲು ಉಭಯ ತಂಡಗಳ ಆಟಗಾರರು ಚೆಂಡನ್ನು ಉಜ್ಜುತ್ತಿದ್ದರು. ಚೆಂಡು ಹೆಚ್ಚು ಸ್ವಿಂಗ್ ಪಡೆದಾಗ ಬ್ಯಾಟ್ಸ್ ಮೆನ್ಗಳಿಗೆ ಬ್ಯಾಟಿಂಗ್ ಮಾಡಲು ಕೂಡ ಹರ ಸಾಹಸ ಮಾಡಬೇಕಾಗಿತ್ತು ಎಂದು ಕಿರಣ್ ಮೋರೆ ಹೇಳಿದ್ದಾರೆ.
ಇನ್ನು ಚೆಂಡನ್ನು ವಿರೂಪಗೊಳಿಸಿದ್ದಾಗ ಉಭಯ ತಂಡಗಳ ಆಟಗಾರರು ದೂರು ಕೂಡ ನೀಡುತ್ತಿರಲಿಲ್ಲ. ಯಾಕಂದ್ರೆ ಎರಡೂ ತಂಡಗಳ ಆಟಗಾರರು ಇದೇ ರೀತಿ ಚೆಂಡನ್ನು ವಿರೂಪಗೊಳಿಸುತ್ತಿದ್ದರು. ಅಲ್ಲದೆ ಇದೇ ಸರಣಿಯಲ್ಲಿ ಭಾರತದ ವೇಗಿ ಮನೋಜ್ ಪ್ರಭಾಕರ್ ರಿವರ್ಸ್ ಸ್ವಿಂಗ್ ಮಾಡಲು ಚೆಂಡನ್ನು ಯಾವ ರೀತಿ ಗೀಚಬೇಕು ಎಂಬುದನ್ನು ಕೂಡ ಕಲಿತುಕೊಂಡಿದ್ದರು ಎಂದು ಕಿರಣ್ ಮೋರೆ ನೆನಪು ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ 2018ರಲ್ಲಿ ಅಂಪೈರ್ ಜಾನ್ ಹೋಲ್ಡರ್ ಕೂಡ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಆಗೀನ ಪಾಕ್ ನಾಯಕ ಇಮ್ರಾನ್ ಖಾನ್ ಮತ್ತು ಭಾರತದ ನಾಯಕ ಶ್ರೀಕಾಂತ್ ಅವರ ಬಳಿ ಈ ಕುರಿತು ಮಾತನಾಡಲು ಪ್ರಯತ್ನಿಸಿದ್ದೆ. ಆದ್ರೆ ಆಗ ಚೆಂಡನ್ನು ವಿರೂಪಗೊಳಿಸುವುದು ಯಾವುದೇ ರೀತಿಯ ಅಪರಾಧವಾಗಿರಲಿಲ್ಲ. ಹೀಗಾಗಿ ಆಗ ಶಿಕ್ಷೆ ನೀಡಲು ಆಗಿಲ್ಲ ಎಂದು ಜಾನ್ ಹೋಲ್ಡರ್ ಹೇಳಿದ್ದಾರೆ. ಜಾನ್ ಹೋಲ್ಡರ್ ಆ ಸರಣಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಈಗ ಚೆಂಡನ್ನು ವಿರೂಪಗೊಳಿಸಿದ್ರೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪ್ರತಿ ಓವರ್ ಅಥವಾ ವಿಕೆಟ್ ಉರುಳಿದಾಗ ಚೆಂಡನ್ನು ಅಂಪೈರ್ ಕೈಗೆ ನೀಡಬೇಕು. ಆದ್ರೆ ಆಗ ಈ ರೀತಿಯ ನಿಯಮಗಳು ಇರಲಿಲ್ಲ. ಇದ್ರಿಂದ ಆಟಗಾರರು ನಿಂತಲ್ಲೇ ಕೈಯಿಂದ ಚೆಂಡನ್ನು ವಿರೂಪಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಅಂಪೈರ್ಗಳು ಮೈದಾನದಲ್ಲಿ ಏನು ಹೇಳಬೇಕಾದ್ರೂ ಇಬ್ಬರು ನಾಯಕರು ಮತ್ತು ಮ್ಯಾನೇಜರ್ ಅವರನ್ನು ಒಟ್ಟಿಗೆ ಸೇರಿಸಿ ಹೇಳಬೇಕಾಗಿತ್ತು. ಅಷ್ಟೇ ಅಲ್ಲ, ಚೆಂಡನ್ನು ವಿರೂಪಗೊಳಿಸುವುದು ತಪ್ಪು ಅದು ಅಪರಾಧ ಅಂತ ನಾವು ಹೇಳಿದ್ದೇವೆ ಎಂದು ಜಾನ್ ಹೋಲ್ಡರ್ ಎರಡು ವರ್ಷಗಳ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು.