2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಕಹಿಯನ್ನು ನೆನಪಿಸಿಕೊಂಡ ರವೀಂದ್ರ ಜಡೇಜಾ
ಸರಿಯಾಗಿ ಒಂದು ವರ್ಷದ ಹಿಂದೆ.. ಅಂದ್ರೆ ಜುಲೈ 10, 2019. ಅದು ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ. ಇಂಗ್ಲೆಂಡ್ನ ಓಲ್ಡ್ ಟ್ರಾಫೋರ್ಡ್ ಮೈದಾನ. ಫೈನಲ್ಗೇರಲು ಭಾರತ ಮತ್ತು ನ್ಯೂಜಿಲೆಂಡ್ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿತ್ತು. ಭಾರತದ ಪ್ರಮುಖ ಬ್ಯಾಟ್ಸ್ ಮೆನ್ಗಳು ಆಗಲೇ ಪೆವಿಲಿಯನ್ ಸೇರಿಕೊಂಡಿದ್ದರು. ಆದ್ರೂ ಭಾರತೀಯ ಅಭಿಮಾನಿಗಳು ಗೆಲ್ಲುವ ಆಸೆಯನ್ನು ಕೈಬಿಡಲಿಲ್ಲ. ಯಾಕಂದ್ರೆ ಭಾರತ ಗೆದ್ದೇ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿದ್ದರು. ಯಾಕಂದ್ರೆ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡುತ್ತಿದ್ದರು. ಜೊತೆಗೆ ರವೀಂದ್ರ ಜಡೇಜಾ ಧೋನಿಗೆ ಸಾಥ್ ನೀಡುತ್ತಿದ್ದರು.
ಆದ್ರೆ ಆ ಒಂದು ರನೌಟ್ ಟೀಮ್ ಇಂಡಿಯಾದ ಗೆಲುವಿನ ಗೋಪುರವನ್ನೇ ಕಳಚಿಬೀಳುವಂತೆ ಮಾಡಿತ್ತು. ಹೌದು,
ಮಹೇಂದ್ರ ಸಿಂಗ್ ಧೋನಿಯವರನ್ನು ಮಾರ್ಟಿನ್ ಗಪ್ಟಿಲ್ ರನೌಟ್ ಮಾಡಿದಾಗ ಭಾರತೀಯ ಅಭಿಮಾನಿಗಳು ಒಂದು ಕ್ಷಣ ಸ್ತಬ್ದರಾಗಿದ್ದರು. ಆಗಲೇ ಕೆಲವು ಅಭಿಮಾನಿಗಳ ಕಣ್ಣಿಂದ ಕಣ್ಣೀರಧಾರೆ ಸುರಿಯುತ್ತಿತ್ತು. ಯಾಕಂದ್ರೆ ಟೀಮ್ ಇಂಡಿಯಾ ಸೋಲುತ್ತೆ ಅಂತ ಯಾರು ಭಾವಿಸಿರಲಿಲ್ಲ. ಆದ್ರೆ ದೇವರ ಆಟವೇ ಬೇರೆನೇ ಆಗಿತ್ತು. ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡ ನ್ಯೂಜಿಲೆಂಡ್ ಫೈನಲ್ಗೇರಿತ್ತು. ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೋತಿತ್ತು. ಇದೆಲ್ಲಾ ಈಗ ಇತಿಹಾಸ.
ಆದ್ರೆ ಈ ದಿನ, ಈ ಸೆಮಿಫೈನಲ್ ಪಂದ್ಯವನ್ನು ನೆನಪು ಮಾಡಿಕೊಂಡಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾ. ತನ್ನ ಇನ್ಸ್ಟ್ರಾಗ್ರಾಂನಲ್ಲಿ ರವೀಂದ್ರ ಜಡೇಜಾ ಅವರು ಔಟಾಗಿ ನಿರಾಸೆಯಿಂದಲೇ ಪೆವಿಲಿಯನ್ಗೆ ಹಿಂತಿರುಗುತ್ತಿರುವ ಫೋಟೋವನ್ನು ಹಾಕಿದ್ದಾರೆ. ನಾವು ಶಕ್ತಿಮೀರಿ ನಮ್ಮ ಪ್ರಯತ್ನವನ್ನು ಮಾಡಿದ್ದೇವು. ಆದ್ರೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ದಿನ ತುಂಬಾ ಬೇಸರದ ದಿನ ಎಂದು ರವೀಂದ್ರ ಜಡೇಜಾ ಬರೆದುಕೊಂಡಿದ್ದಾರೆ.
2019ರ ಸೆಮಿಫೈನಲ್ನಲ್ಲಿ ಭಾರತ ಬೃಹತ್ ಸವಾಲನ್ನು ಏನು ಬೆನ್ನಟ್ಟಲಿಲ್ಲ. ಬದಲಾಗಿ ಟೀಮ್ ಇಂಡಿಯಾಗೆ ಬೇಕಾಗಿದ್ದು ಕೇವಲ 240 ರನ್ ಮಾತ್ರ. ಆದ್ರೆ ಕೆ.ಎಲ್. ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ ಒಂದೊಂದು ರನ್ ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದ್ದರು. ದಿನೇಶ್ ಕಾರ್ತಿಕ್ ಆರು ರನ್ಗೆ ಸೀಮಿತವಾದ್ರು. ಇನ್ನು ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 32 ರನ್ ಗಳಿಸಿದ್ರೂ ತಂಡದ ಪರಿಸ್ಥಿತಿಯನ್ನು ಅರಿತುಕೊಂಡು ಆಡಲು ವಿಫಲರಾದ್ರು.
ನಂತರ ಧೋನಿ ಮತ್ತು ರವೀಂದ್ರ ಜಡೇಜಾ ಏಳನೇ ವಿಕೆಟ್ಗೆ 116 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದ್ರೆ ರವೀಂದ್ರ ಜಡೇಜಾ ತನ್ನ ಹೋರಾಟವನ್ನು 77 ರನ್ಗಳಿಗೆ ಅಂತ್ಯಗೊಳಿಸಿದ್ರು. ಬಳಿಕ ಧೋನಿ 48.3 ಓವರ್ನಲ್ಲಿ ಮಾರ್ಟಿನ್ ಗಫ್ಟಿಲ್ ಅವರ ಅದ್ಭುತ ಫೀಲ್ಡಿಂಗ್ಗೆ ರನೌಟಾದ್ರು, ಧೋನಿ 50 ರನ್ ಗಳಿಸಿದ್ದರು. ಅಂತಿಮವಾಗಿ ಟೀಮ್ ಇಂಡಿಯಾ 221 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 18 ರನ್ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದ ನಂತರ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.