ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?
ವರ್ಣ ಭೇದ ನೀತಿಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಬ್ಯಾನ್ ಮಾಡುತ್ತೆ..! ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕಾಗಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯನ್ನು ಕೂಡ ಐಸಿಸಿ ಅಮಾನತು ಮಾಡುತ್ತೆ..!
ಹಾಗೇ ಭಯೋತ್ಪಾದನೆಗೆ ಬೆಂಬಲ ನೀಡೋ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಯಾಕೆ ಬ್ಯಾನ್ ಮಾಡಬಾರದು..?
ಉಗ್ರರ ತವರು.. ಭಯೋತ್ಪಾನೆಗೆ ಕುಮ್ಮಕ್ಕು ನೀಡೋ ಪಾಕಿಸ್ತಾನ ಒಂದು ರೀತಿಯಲ್ಲಿ ಟೆರರ್ ಫ್ಯಾಕ್ಟರಿ…ಕಿತ್ತು ತಿನ್ನುವ ಬಡತನವಿದ್ರೂ ಪಾಕ್ ರಾಜಕಾರಣಿಗಳ ಶೋಕಿಗೆ ಏನು ಕಮ್ಮಿ ಇಲ್ಲ. ಶೂಟ್ ಬೂಟ್ ಹಾಕೊಂಡಿರುವ ಅಲ್ಲಿನ ರಾಜಕಾರಣಿಗಳು ಭಾರತದ ವಿರುದ್ಧ ಆಕ್ರೋಶ ಭರಿತವಾಗಿ ಭಾಷಣ ಮಾಡುತ್ತಿದ್ರೆ ಸಾಕು, ಪಾಪ ಪಾಕ್ ಪ್ರಜೆಗಳು ಚಪ್ಪಾಳೆ ತಟ್ಟುತ್ತಾರೆ. ಭಾರತದ ವಿರುದ್ಧ ದ್ವೇಷ ಕಾರುವುದೇ ಅಲ್ಲಿನ ರಾಜಕಾರಣಿಗಳ, ಸೇನಾ ಅಧಿಕಾರಿಗಳ ಚಾಲಿಯಾಗಿದೆ. ನೀವು ನೋಡಿದ್ದೀರಾ ಅನ್ಸುತ್ತೆ.. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶಾಂಗ ನೀತಿಯ ಬಗ್ಗೆ ಸಾರ್ವಜನಿಕ ಸಮಾರಂಭದಲ್ಲಿ ಪಾಕ್ನ ಆಗೀನ ಪ್ರಧಾನಿ ಇಮ್ರಾನ್ ಖಾನ್ ಹೊಗಳಿ ಕೊಂಡಾಡಿದ್ದರು. ಪಾಕ್ಗೆ ಇಂತಹ ವಿದೇಶಾಂಗ ಸಚಿವರು ಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಜೈಶಂಕರ್ ಅವರ ಹೇಳಿಕೆಯನ್ನು ವಿಡಿಯೋ ವಾಲ್ ನಲ್ಲಿ ತೋರಿಸಿದ್ದ ಇಮ್ರಾನ್ ಖಾನ್ ಇವತ್ತು ಜೈಲಿನಲ್ಲಿದ್ದಾರೆ.
ಅದೇನೇ ಇರಲಿ, ಅದು ರಾಜಕೀಯದಾಟ…ಇನ್ನು, ಪಾಕಿಸ್ತಾನಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕ ಇಮ್ರಾನ್ ಖಾನ್ ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆದ್ರೆ ಮನಸ್ಸು ಮಾಡಿದ್ರೆ ಇಮ್ರಾನ್ ಖಾನ್ಗೆ ಪಾಕಿಸ್ತಾನ ದೇಶದ ಮನಸ್ಥಿತಿಯನ್ನು ಬದಲಾಯಿಸಬಹುದಿತ್ತು. ಆದ್ರೆ ಪಾಕ್ ಸೇನೆ, ಅಲ್ಲಿನ ರಾಜಕೀಯಕ್ಕೆ ಬಲಿಯಾಗಿ ಹೋದ್ರು. ಮೈದಾನದಲ್ಲಿ ಏಕಾಂಗಿ ಹೋರಾಟ ಮಾಡಿದ ಹಾಗೇ ದೇಶದ ವಿಚಾರದಲ್ಲಿ ಏಕಾಂಗಿ ಹೋರಾಟ ಮಾಡಿದ್ರೆ ಆಗಲ್ಲ ಅನ್ನೋದು ಇಮ್ರಾನ್ಖಾನ್ಗೆ ಈಗ ಚೆನ್ನಾಗಿ ಮನವರಿಕೆ ಆಗಿದೆ. ಅದಕ್ಕಾಗಿಯೇ ಈಗ ಜೈಲಿನಲ್ಲಿದ್ದಾರೆ.
ಅದಿರಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕಿಸ್ತಾನ ಸರ್ಕಾರಕ್ಕೆ ಭಾರತ ದೇಶವನ್ನು, ಭಾರತೀಯ ಕ್ರಿಕೆಟ್ ಮಂಡಳಿಯನ್ನು ಟೀಕೆ ಮಾಡದೆ ಇದ್ರೆ ನಿದ್ದೆ ಬರಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರದ ವಿರುದ್ಧ ಎಷ್ಟೇ ಪಿತೂರಿ ಮಾಡಿದ್ರೂ, ಬಿಸಿಸಿಐ ವಿರುದ್ಧ ಎಷ್ಟೇ ಕೆಂಡ ಕಾರಿದ್ರೂ ಪ್ರಯೋಜನವಂತೂ ಆಗಿಲ್ಲ.
ರಾಜಕೀಯ, ವ್ಯಾಪಾರ ವಹಿವಾಟುಗಿಂತಲೂ ಭಾರತದ ಜೊತೆ ಕ್ರಿಕೆಟ್ ನಂಟು ಮುಖ್ಯವಾಗಿದೆ. ಮೊದಲೇ ಭಾರತ – ಪಾಕ್ ಕ್ರಿಕೆಟ್ ಕದನ ಅಂದ್ರೆ ಅದು ಯುದ್ಧಕ್ಕಿಂತಲೂ ಒಂದು ಪಟ್ಟು ಹೆಚ್ಚಿನ ಟೆನ್ಷನ್ ಇರುತ್ತೆ. ಇನ್ನೊಂದೆಡೆ ಪಾಕ್ಗೆ ಭಾರತದ ಜೊತೆ ಕ್ರಿಕೆಟ್ ಆಡುವುದಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವುದು ದುಡ್ಡು.. ಇನ್ನೊಂದೆಡೆ ಪಾಕ್ ಜೊತೆ ಭಾರತದ ಕ್ರಿಕೆಟ್ ಸಂಬಂಧ ಚೆನ್ನಾಗಿದ್ರೆ ಇನ್ನಿತರ ರಾಷ್ಟ್ರಗಳು ಪಾಕ್ ನೆಲದಲ್ಲಿ ಬಂದು ಕ್ರಿಕೆಟ್ ಆಡುತ್ತವೆ. ಅಷ್ಟೇ ಅಲ್ಲ, ಉಗ್ರರಿಗೆ ಭಾರತದೊಳಗೆ ನುಸುಳಲು ಅವಕಾಶವೂ ಸಿಗುತ್ತದೆ. ಉಗ್ರರನ್ನು ಪೋಷಣೆ ಮಾಡಲು ಅಲ್ಲಿನ ಸರ್ಕಾರಕ್ಕೆ ಹಣವೂ ಬರುತ್ತದೆ ಎಂಬುದು ಚೆನ್ನಾಗಿಯೇ ಗೊತ್ತಿದೆ.
ಅದಿರಲಿ, 1999ರಲ್ಲಿ ವಾಜಪೇಯಿ ಸರ್ಕಾರ ಭಾರತ – ಪಾಕ್ ನಡುವೆ ಬಸ್ ಸಂಚಾರ ಒಪ್ಪಂದ ನಡೆಸಿತ್ತು. ಅದೇ ವೇಳೆ ಪಾಕಿಸ್ತಾನ ಭಾರತ ಪ್ರವಾಸವನ್ನು ಕೂಡ ಕೈಗೊಂಡಿತ್ತು. ಆದ್ರೆ ಅದಕ್ಕೆ ಪಾಕಿಸ್ತಾನ ಕೊಟ್ಟ ಕೊಡುಗೆ ಏನು.. ಕಾರ್ಗಿಲ್ ವಾರ್. ಆದಾದ ನಂತರ ಪಾಕ್ ಅಧ್ಯಕ್ಷ ಮುಷರಪ್ ಅಧಿಕಾರವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಪಾಕ್ ಪ್ರವಾಸ ನಡೆಸಿತ್ತು. ಬಳಿಕ ದ್ವೀಪಕ್ಷಿಯ ಸರಣಿಯೂ ನಡೆಯಿತ್ತು. ಹಾಗೇ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಪಾಕ್ ಆಟಗಾರರಿಗೂ ಆಡಲು ಅವಕಾಶ ನೀಡಿತ್ತು. ಇದಕ್ಕೆ ಪಾಕ್ ಸರ್ಕಾರ ಕೊಟ್ಟ ಕಾಣಿಕೆ ಮುಂಬೈ ಬ್ಲ್ಯಾಸ್ಟ್.
ನಂತರ ಭಾರತ ಸರ್ಕಾರ ಪಾಕ್ ಜೊತೆಗಿನ ದ್ವೀಪಕ್ಷೀಯ ಸರಣಿಗೆ ಬ್ರೇಕ್ ಹಾಕಿತ್ತು. ಮನಮೋಹನ್ ಸಿಂಗ್ ಸರ್ಕಾರದ ಈ ನಿರ್ಧಾರವನ್ನು ಮೋದಿ ಸರ್ಕಾರ ಕೂಡ ಮುಂದುವರಿಸಿಕೊಂಡು ಬಂದಿದೆ.
saakshatv.com
ಭಾರತದ ವಿರುದ್ಧ ಪಿಸಿಬಿ ಐಸಿಸಿ ಬಳಿ ಎಷ್ಟೇ ದೂರು ಕೊಟ್ರೂ ಬಿಸಿಸಿಐ ಮತ್ತು ಭಾರತ ಸರ್ಕಾರ ಅವಕಾಶವನ್ನೇ ನೀಡಲಿಲ್ಲ. ಯಾವಾಗ ಭಾರತದ ಜೊತೆಗೆ ಕ್ರಿಕೆಟ್ ನಂಟು ಮುರಿದು ಬಿತ್ತು ಅಲ್ಲಿಂದ ಪಾಕಿಸ್ತಾನದ ಕ್ರಿಕೆಟ್ ಕೂಡ ಅಧಃಪತನದತ್ತ ಸಾಗುತ್ತಿದೆ.
ಈ ನಡುವೆ, ಅದೇನೋ ಗಟ್ಟಿ ಮನಸ್ಸು ಮಾಡಿಕೊಂಡು (ಬಹುಶಃ. 2008-2009ರಲ್ಲಿ) ನೆರೆಯ ಶ್ರೀಲಂಕಾ ತಂಡ ಪಾಕ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ಬಾಂಬ್ ಸ್ಫೋಟ ಆಗಿ ಲಂಕಾ ಆಟಗಾರರು ಪ್ರಾಣಾಪಯದಿಂದ ಪಾರಾಗಿದ್ದರು. ಅಲ್ಲಿಂದಂತೂ ಅಂತಾರಾಷ್ಟ್ರೀಯ ತಂಡಗಳು ಪಾಕ್ ನೆಲಕ್ಕೆ ಕಾಲಿಡಲು ಹಿಂದೇಟು ಹಾಕಿದ್ದವು. ಪಾಕಿಸ್ತಾನದ ಕ್ರಿಕೆಟ್ ಮೈದಾನಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದೇ ಭಣಗುಟ್ಟಿದ್ದವು. ಕೇವಲ ಸ್ಥಳೀಯ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಮೈದಾನಗಳು ಸೀಮಿತವಾದವು. ಈ ನಡುವೆ, ಪಿಸಿಬಿ ಹುಂಬುತನದಿಂದ ಐಪಿಎಲ್ಗೆ ಠಕ್ಕರ್ ನೀಡಲು ಪಿಸಿಎಲ್ ಅನ್ನು ಆರಂಭಿಸಿತ್ತು. ಆದ್ರೂ ಅಂತಾರಾಷ್ಟ್ರೀಯ ಆಟಗಾರರು ಪಾಕ್ ನೆಲಕ್ಕೆ ಕಾಲಿಡಲು ಹಿಂದೇಟು ಹಾಕಿದ್ರು. ಹೀಗಾಗಿ ಐಪಿಎಲ್ನ ಯಶಸ್ಸಿನ ಮುಂದೆ ಪಿಸಿಎಲ್ ಠುಸ್ಸ್ ಪಟಾಕಿಯಾಯ್ತು.
ಇತ್ತೀಚಿನ ವರ್ಷದಲ್ಲಿ ಅದು ಹೇಗೋ ಧೈರ್ಯ ಮಾಡಿ ಮತ್ತೆ ಶ್ರೀಲಂಕಾ, ಜಿಂಬಾಬ್ವೆ, ಇಂಗ್ಲೆಂಡ್ ತಂಡಗಳು ಜೀವ ಭಯದಿಂದಲೇ ಪಾಕ್ನಲ್ಲಿ ಕೆಲವೊಂದು ಟೆಸ್ಟ್, ಏಕದಿನ, ಟಿ-20 ಪಂದ್ಯಗಳನ್ನು ಆಡಿದ್ದವು. ಇತ್ತೀಚೆಗೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಕೂಡ ಬಿಗಿ ಭದ್ರತೆಯ ನಡುವೆಯೇ ನಡೆಸಲಾಯ್ತು. ಇನ್ನೇನು ಪಾಕ್ ನೆಲದಲ್ಲಿ ಐಸಿಸಿ ತಂಡಗಳು ಆಡಲು ಧೈರ್ಯ ಮಾಡುತ್ತಿವೆ ಎನ್ನುವಾಗಲೇ ಇದೀಗ ಪಾಕಿಸ್ತಾನ ಮತ್ತೆ ಎಡವಟ್ಟು ಮಾಡಿಕೊಂಡಿದೆ.
saakahsatv.com
ಈ ನಡುವೆ, ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕ್ ನೆಲದಲ್ಲಿ ಭಾರತವನ್ನು ಆಡಿಸಲೇಬೇಕು ಎಂದು ಪಿಸಿಬಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದ್ರೆ ಬಿಸಿಸಿಐ ಮತ್ತು ಭಾರತ ಸರ್ಕಾರದ ಮುಂದೆ ಪಿಸಿಬಿ ಮತ್ತೆ ಶರಣಾಗಲೇಬೇಕಾಯ್ತು. ಬಿಸಿಸಿಐ ಒತ್ತಡಕ್ಕೆ ಮಣಿದು ತಟಸ್ಥ ತಾಣದಲ್ಲಿ ಆಡಿದ್ದ ಭಾರತ ಪ್ರಶಸ್ತಿ ಗೆದ್ದು ಪಾಕ್ಗೆ ಮತ್ತೆ ಮುಖಭಂಗವನ್ನುಂಟು ಮಾಡಿತ್ತು. ಫೈನಲ್ ಪಂದ್ಯ ನಡೆಯಬೇಕಿದ್ದ ಲಾಹೋರ್ ಕಗ್ಗತ್ತಲೆಯಾಗಿತ್ತು. ದುಬೈನಲ್ಲಿ ಟೀಮ್ ಇಂಡಿಯಾ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿದ್ರೆ, ಇತ್ತ ಭಾರತದಲ್ಲಿ ಮತ್ತೊಂದು ದೀಪಾವಳಿಯಾಗಿತ್ತು.
ಹಾಗೇ ನೋಡಿದ್ರೆ ವಿಶ್ವ ಕ್ರಿಕೆಟ್ಗೆ ಅದ್ಭುತ ಆಟಗಾರರನ್ನು ಕೊಡುಗೆಯಾಗಿ ಪಾಕಿಸ್ತಾನ ನೀಡಿದೆ. ಎವರ್ಗ್ರೀನ್ ಪ್ಲೇಯರ್ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪರಿಚಯಿಸಿದೆ. ಇದರಲ್ಲಿ ಎರಡು ಮಾತಿಲ್ಲ. ಆದ್ರೆ ಭಯೋತ್ಪಾದನೆ, ಅಲ್ಲಿನ ರಾಜಕೀಯ, ಸೇನಾ ಆಡಳಿತದಿಂದ ಪಿಸಿಬಿಯನ್ನು ದಿವಾಳಿಯನ್ನಾಗಿಸಿರೋದು ಮಾತ್ರ ವಿಪರ್ಯಾಸ.
ಇದೀಗ ಆಪರೇಷನ್ ಸಿಂಧೂರ ಬಳಿಕ ಪಾಕ್ ನೆಲಕ್ಕೆ ಕಾಲಿಡಲು ಐಸಿಸಿ ತಂಡಗಳು ಹಿಂದೇಟು ಹಾಕುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಐಪಿಎಲ್ನಲ್ಲಿ ವಿದೇಶಿ ಆಟಗಾರರು ಭಾರತದಲ್ಲಿ ಆಡಲು ಹಿಂದೆ ಮುಂದೆ ಯೋಚನೆ ಮಾಡುತ್ತಿರುವಾಗ ಪಾಕ್ ನೆ¯ಕ್ಕೆ ಹೇಗೆ ಕಾಲಿಡುತ್ತಾರೆ ಅಲ್ವಾ..?
ಸದ್ಯ ಭಾರತಕ್ಕೆ ಕ್ರಿಕೆಟ್ ಜಗತ್ತಿನಲ್ಲೂ ಪಾಕಿಸ್ತಾನದ ಗರ್ವಭಂಗ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಐಸಿಸಿ ಅಧ್ಯಕ್ಷ ಜೈಶಾಹ ಭಾರತದ ಗೃಹ ಮಂತ್ರಿ ಅಮೀತ್ ಶಾಹ ಅವರ ಸುಪುತ್ರ. ಹಾಗೇ ಐಸಿಸಿ ಹಾಗೂ ವಿಶ್ವದ ಕ್ರಿಕೆಟ್ ತಂಡಗಳು ಬಿಸಿಸಿಐನ ಕಪಿಮುಷ್ಠಿಯಲ್ಲಿದೆ. ಹೀಗಾಗಿ ಪಾಕ್ ತಂಡವನ್ನು ಭಯೋತ್ಪಾದನೆ ಮತ್ತು ಪಾಕ್ ಸರ್ಕಾರ ಪಿಸಿಬಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಕಾರಣವನ್ನು ನೀಡಿ ಬ್ಯಾನ್ ಮಾಡಲು ಒಳ್ಳೆಯ ಅವಕಾಶ ಇದೆ. ಒಂದು ವೇಳೆ ಬ್ಯಾನ್ ಮಾಡಿದ್ರೂ ತಪ್ಪೇನು ಇಲ್ಲ. ಜನಾಂಗಿಯಾ ನಿಂದನೆಗಾಗಿ ಸೌತ್ ಆಫ್ರಿಕಾವನ್ನು ಬ್ಯಾನ್ ಮಾಡಿದ್ದ ಐಸಿಸಿ ಉಗ್ರರ ಪೋಷಕರಾಗಿರುವ ಪಾಕ್ ಕ್ರಿಕೆಟ್ ತಂಡವನ್ನು ಯಾಕೆ ಬ್ಯಾನ್ ಮಾಡಬಾರದು..? ಹಾಗಂತ ಇದು ಕೇವಲ ಕ್ರಿಕೆಟ್ಗೆ ಮಾತ್ರ ಸೀಮಿತವಾಗಬಾರದು. ಇನ್ನುಳಿದ ಕ್ರೀಡೆಗಳಿಗೂ ಅನ್ವಯವಾಗಬೇಕು. ಇಲ್ಲಿ ಪಾಕ್ನ ಕ್ರೀಡಾಪಟುಗಳ ಪ್ರತಿಭೆಗಳನ್ನು ಚಿವುಟಿ ಹಾಕುವ ಪ್ರ ಯತ್ನವನ್ನು ಭಾರತ ಮಾಡುತ್ತಿದೆ ಎಂಬ ಆರೋಪ ಖಂಡಿತ ಬರುತ್ತದೆ. ಆದ್ರೆ ಉಗ್ರರನ್ನು ಪೋಷಿಸುವ ಪಾಕ್ ಸರ್ಕಾರ ಮತ್ತು ಸೇನೆಯ ವಿರುದ್ಧ ಯಾವೊಬ್ಬ ಕ್ರೀಡಾಪಟುಗಳು ಆಗಿರಲಿ, ಅಲ್ಲಿನ ಜನಸಾಮಾನ್ಯರು ಕೂಡ ಪ್ರಶ್ನೆ ಮಾಡುತ್ತಿಲ್ಲ. ಶ್ರೀಲಂಕಾದಂತಹ ಸಣ್ಣ ರಾಷ್ಟ್ರವೊಂದರ ಜನ ಅಲ್ಲಿನ ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಅಂದ ಮೇಲೆ ಪಾಕಿಸ್ತಾನದ ಜನರಿಗೆ ಯಾಕೆ ಧೈರ್ಯ ಬರುತ್ತಿಲ್ಲ. ಅಂದ್ರೆ ಪಾಕ್ ಜನತೆಗೂ ಪ್ರಜಾಪ್ರಭುತ್ವದ ಸರ್ಕಾರ ಆಡಳಿತ ನಡೆಸಬೇಕು ಎಂಬ ಮನೋಭಾವನೆಯೇ ಇಲ್ವಾ..? ಪಾಕಿಸ್ತಾನದಲ್ಲಿ ಇಷ್ಟೇಲ್ಲಾ ಅವಾಂತರ ನಡೆಯುತ್ತಿದ್ರೂ ಅಲ್ಲಿನ ಜನ ಯಾಕೆ ಮೌನ ಆಗಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಸನತ್ ರೈ








