ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..!
ಮಿಲಿಟರಿ, ರಾಜಕೀಯ, ವ್ಯಾಪಾರ, ನೀರು, ವಿದೇಶಾಂಗ ನೀತಿಯಿಂದ ಪಾಕಿಸ್ತಾನದ ಬೆನ್ನಲುಬನ್ನೇ ಮುರಿದಿರುವ ಭಾರತ ಈಗ ಕ್ರಿಕೆಟ್ ಆಟದ ಮೂಲಕವೂ ಬೌನ್ಸರ್..ಗೂಗ್ಲಿ ಎಸೆತಗಳನ್ನು ಎಸೆದಿದೆ.
ಪಾಕಿಸ್ತಾನದ ವಿರುದ್ಧ ಧ್ವಿಪಕ್ಷೀಯ ಕ್ರಿಕೆಟ್ ಸರಣಿಯಂತೂ ಕನಸಿನ ಮಾತು. ಇದೀಗ ಬಿಸಿಸಿಐ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಸದ್ಯಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟೂರ್ನಿಯಿಂದ ಹೊರಬರುವ ಸೂಚನೆ ನೀಡಿದೆ. ಮುಂದಿದೆ ಮಾರಿ ಹಬ್ಬ ಎಂಬಂತೆ ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಲ್ಲೂ ಆಡದಿರುವ ತೀರ್ಮಾನವನ್ನು ಕೈಗೆತ್ತಿಕೊಂಡತ್ತಿದೆ ಬಿಸಿಸಿಐ.
ಈ ಹಿಂದೆ ಜೈ ಶಾಹ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು. ಐಸಿಸಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದ ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪಟ್ಟ ಶ್ರೀಲಂಕಾದ ಶಮ್ಮಿ ಸಿಲ್ವಾ ಪಾಲಾಗಿತ್ತು. ಇದೀಗ ಪಾಕಿಸ್ತಾನದ ಸಚಿವ ಹಾಗೂ ಪಿಸಿಬಿ ಅಧ್ಯಕ್ಷ ಮೊಶ್ವೀನ್ ನಕ್ವಿ ಅಲಂಕರಿಸಿದ್ದಾರೆ. ಇತ್ತೀಚೆಗೆ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಬೆನ್ನುಮೂಳೆ ಮುರಿದಿರುವ ಭಾರತ ಈಗ ಕ್ರಿಕೆಟ್ ಮೂಲಕವೂ ದಿಗ್ಭಂದನ ಹಾಕುವ ಪ್ರಯತ್ನ ನಡೆಸುತ್ತಿದೆ.
ಹೌದು, ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟೂರ್ನಿಯಲ್ಲಿ ಆಡದಿರುವ ತೀರ್ಮಾನವನ್ನು ಕೈಗೊಂಡಿದೆ. ಸದ್ಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಲ್ಲಿ 27 ದೇಶಗಳಿವೆ. ಅದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲದೇಶ, ಅಫಘಾನಿಸ್ತಾನ ದೇಶಗಳು ಮಾತ್ರ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡಿವೆ. ಇನ್ನುಳಿದ 22 ರಾಷ್ಟ್ರಗಳು ಸಹ ಸದಸ್ಯತ್ವವನ್ನು ಪಡೆದುಕೊಂಡಿವೆ.
ಸದ್ಯದ ಮಟ್ಟಿಗೆ 27 ರಾಷ್ಟ್ರಗಳಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವ ರಾಷ್ಟ್ರ ಅಂದ್ರೆ ಅದು ಬಾಂಗ್ಲಾದೇಶ ಮಾತ್ರ. ಇನ್ನುಳಿದಂತೆ ವಿಶ್ವ ಕ್ರಿಕೆಟ್ನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು 25 ರಾಷ್ಟ್ರಗಳು ಭಾರತದ ಪರವಾಗಿವೆ. ಒಂದು ವೇಳೆ ಕೊನೆ ಗಳಿಗೆಯಲ್ಲಿ ಬಾಂಗ್ಲಾದೇಶ ಬೆಂಬಲ ನೀಡಿದ್ರೆ ಪಾಕಿಸ್ತಾನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಲ್ಲಿ ಏಕಾಂಗಿಯಾಗಲಿದೆ.
ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪಾಕ್ ನೆಲದಲ್ಲಿ ಆಡಿಸಲೇಬೇಕು ಎಂದು ಪಣ ತೊಟ್ಟಿದ್ದ ಪಿಸಿಬಿಗೆ ಮುಖಭಂಗವಾಗಿದ್ದು ಗೊತ್ತೆ ಇದೆ. ಕೊನೆಗೂ ಭಾರತ ತಟಸ್ಥ ತಾಣದಲ್ಲಿ ಆಡಿ ಚಾಂಪಿಯನ್ ಪಟ್ಟಕ್ಕೇರಿದ್ದು ಕೂಡ ಗೊತ್ತಿದೆ. ಅಂದ ಮೇಲೆ ವಿಶ್ವ ಕ್ರಿಕೆಟ್ನಲ್ಲಿ ಭಾರತ ಹೇಳಿದ್ದೇ ಶಾಸನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದಕ್ಕೆ ಬಲವಾದ ಕಾರಣ ದುಡ್ಡು. ಟೀಮ್ ಇಂಡಿಯಾ ಯಾವುದೇ ರಾಷ್ಟ್ರದ ಜೊತೆ ಆಡಲಿ.. ಅಲ್ಲಿ ಹಣದ ಹೊಳೆ ಹರಿಯುತ್ತದೆ ಎಂಬುದು ಗೊತ್ತಿರುವ ವಿಚಾರವೇ. ಟೀಮ್ ಇಂಡಿಯಾದ ಸರಣಿಗೆ ಸಿಗುವಷ್ಟು ಪ್ರಾಯೋಜಕರು ಬೇರೆ ಯಾವುದೇ ರಾಷ್ಟ್ರದ ಸರಣಿಗೂ ಸಿಗುತ್ತಿಲ್ಲ. ಹೀಗಾಗಿಯೇ ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸರಣಿಗೆ ಸಿಕ್ಕಾಪಟ್ಟೇ ಡಿಮ್ಯಾಂಡ್. ಆ ಕಾರಣಕ್ಕಾಗಿಯೇ ಐಸಿಸಿ ಕೂಡ ಬಿಸಿಸಿಐನ ನಿರ್ಧಾರಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸುವುದಿಲ್ಲ. ಎಲ್ಲದಕ್ಕೂ ತಲೆದೂಗುತ್ತದೆ. ಜೊತೆಗೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಸದ್ಯದ ಮಟ್ಟಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಸೈಲೆಂಟಾಗಿ ಬಿಸಿಸಿಐಗೆ ಜೈ ಎನ್ನುತ್ತಿದೆ. ಒಟ್ಟಾರೆ, ಬಿಸಿಸಿಐ ಇವತ್ತು ಇಡೀ ಕ್ರಿಕೆಟ್ ಜಗತ್ತನ್ನು ಕೈ ಬೆರಳಿನಲ್ಲಿ ಆಡಿಸುತ್ತಿದೆ.
ಅಂದೊಂದು ಕಾಲವಿತ್ತು. ಸುಮಾರು 42 ವರ್ಷಗಳ ಹಿಂದೆ. ಅದು 1983ರ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ವೇತನ ನೀಡಲು ಕೂಡ ಬಿಸಿಸಿಐ ಆಕೌಂಟ್ನಲ್ಲಿ ದುಡ್ಡು ಇರಲಿಲ್ಲ. ಲತಾ ಮಂಗೇಶ್ಕರ್ ಸಂಗೀತ ಕಚೇರಿ ನಡೆಸಿ ಕಪಿಲ್ ಡೇವಿಲ್ಸ್ಗೆ ದುಡ್ಡು ಕೊಟ್ಟಿರುವುದು ಎಂಬುದನ್ನು ಮರೆಯುವ ಹಾಗಿಲ್ಲ. ಹಾಗೇ 1983ರ ವಿಶ್ವಕಪ್ ಫೈನಲ್ ಪಂದ್ಯ ನೋಡಲು ಭಾರತದ ಪ್ರಭಾವಿ ಸಚಿವರಿಗೆ ಎರಡು ಟಿಕೆಟ್ ನೀಡಲು ಕೂಡ ಆಗಿನ ಬಿಸಿಸಿಐ ಅಧ್ಯಕ್ಷ ಎನ್ಪಿಕೆ ಸಾಳ್ವೆ ಅವರಿಗೆ ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಿಸಿಸಿಐಯನ್ನು ಕೀಳಾಗಿ ನೋಡಿದ್ದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಜಿದ್ದು ತೀರಿಸಿಕೊಂಡಿದ್ದು ಆಗಿನ ಬಿಸಿಸಿಐ ಅಧ್ಯಕ್ಷ ಸಾಳ್ವೆ ಅವರು. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಾಗೂ ಐಸಿಸಿಗೆ ಸಡ್ಡು ಹೊಡೆಯಲು ರಚಿಸಿದ್ದ ಮಾಸ್ಟರ್ ಪ್ಲ್ಯಾನ್ ಏಷ್ಯನ್ ಕ್ರಿಕೆಟ್ ಕ್ರಿಕೆಟ್ ಕೌನ್ಸಿಲ್.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೂಲಕವೇ ಐಸಿಸಿ ಮೇಲೆ ಪ್ರಭುತ್ವ ಸಾಧಿಸಿದ್ದ ಬಿಸಿಸಿಐ ನಂತರ ಹಿಂತಿರುಗಿ ನೋಡಲೇ ಇಲ್ಲ. ಈ ನಡುವೆ, ಭಾರತ – ಪಾಕ್ ನಡುವಿನ ಬಿರುಕಿನಿಂದ ಪಾಕಿಸ್ತಾನ ಏಷ್ಯಾಕಪ್ನಿಂದ ಹೊರಗುಳಿದಿರುವುದು ಇದೆ. ಆದ್ರೆ ಬಿಸಿಸಿಐ ಕ್ಯಾರೇ ಅನ್ನಲಿಲ್ಲ. ಏಷ್ಯಾಕಪ್ ಮಾತ್ರ ಅಲ್ಲ… ಐಸಿಸಿ ಟೂರ್ನಿಯಲ್ಲೂ ಭಾರತ ಪಾಕ್ ನೆಲದಲ್ಲಿ ಆಡದಿರುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಪಾಕಿಸ್ತಾನ ಐಸಿಸಿ ಬಳಿ ದೂರು ಕೊಟ್ರೂ ಯಾವುದೇ ಪ್ರಯೋಜನ ಆಗಿಲ್ಲ.
ಐಸಿಸಿಗೆ ಭಾರತ – ಪಾಕ್ ನಡುವಿನ ಪಂದ್ಯ ಅಂದ್ರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದೇ ರೀತಿ ಪಿಸಿಬಿಗೆ ಭಾರತದ ವಿರುದ್ಧ ಸರಣಿ, ಪಂದ್ಯವನ್ನಾಡಿದ್ರೆ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ. ಹೀಗಾಗಿ ಬಿಸಿಸಿಐ ಐಸಿಸಿ ಲೆಕ್ಕಾಚಾರಕ್ಕೆ ತೊಂದ್ರೆ ಮಾಡದಿದ್ರೂ ಪಿಸಿಬಿಗೆ ಮಾತ್ರ ಮಾಸ್ಟರ್ ಸ್ಟ್ರೋಕ್ ನೀಡುತ್ತಲೇ ಬಂದಿದೆ. ರಾಜತಾಂತ್ರಿಕ ಅಡಚಣೆಯ ನಡುವೆಯೂ ಕೆಲವೊಂದು ದ್ವೀಪಕ್ಷೀಯ ಸರಣಿಯನ್ನು ಆಡಿದ್ರೂ ಮುಂಬೈ ಬ್ಲ್ಯಾಸ್ಟ್ ನಂತರ ಪಾಕ್ ನೆಲದಲ್ಲಿ ಕ್ರಿಕೆಟ್ ಆಡದಿರುವ ಕಠಿಣ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿತ್ತು. ಕಳೆದ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪಾಕ್ ನೆಲದಲ್ಲಿ ಆಡಿಸಬೇಕು ಎಂಬ ಟೊಂಕಕಟ್ಟಿ ನಿಂತಿತ್ತು. ಐಸಿಸಿ ಮೇಲೆ ಎಷ್ಟೇ ಒತ್ತಡ ಹೇರಿದ್ರೂ ಬಿಸಿಸಿಐನ ನಿಲುವು ಬದಲಾಗಲಿಲ್ಲ. ಹೀಗಾಗಿ ಭಾರತದ ವಿರುದ್ಧ ತಟಸ್ಥ ತಾಣದಲ್ಲಿ ಆಡಬೇಕಾಯ್ತು. ಪಾಕ್ ಆಯೋಜನೆ ಮಾಡಿದ ಟೂರ್ನಿ ತಟಸ್ಥ ತಾಣದಲ್ಲಿ ಆಡುವ ಮೂಲಕ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು.
ಇದೀಗ ಆಪರೇಷನ್ ಸಿಂಧೂರ ಬಳಿಕ ಪಾಕ್ ಕ್ರಿಕೆಟ್ಗೆ ಉಳಿಗಾಲವಿಲ್ಲ ಎಂದು ಅನ್ಸುತ್ತೆ. ಪಾಕ್ ನೆಲದಲ್ಲಿ ಭಾರತ ಆಡುವುದು ದೂರದ ಮಾತು. ಅಷ್ಟೇ ಯಾಕೆ ವಿದೇಶಿ ತಂಡಗಳು ಆಡುವುದು ಕೂಡ ಅನುಮಾನವಾಗಿದೆ. ಇದೀಗ ಏಷ್ಯನ್ ಕ್ರಿಕೆಟ್ನಿಂದ ಹೊರಬರುವ ತೀರ್ಮಾನವನ್ನು ತೆಗೆದುಕೊಂಡಿರುವ ಬಿಸಿಸಿಐ ಮುಂದಿನ ದಿನಗಳಲ್ಲಿ ಐಸಿಸಿಯಿಂದಲೂ ಪಾಕ್ ತಂಡವನ್ನು ಬ್ಯಾನ್ ಮಾಡೋ ಎಲ್ಲಾ ಪ್ಲ್ಯಾನ್ಗಳು ನಡೆಯುತ್ತಿವೆ.
ಈಗಾಗಲೇ ಪಾಕಿಸ್ತಾನಕ್ಕೆ ಮುಖಭಂಗ ಆಗಬೇಕು. ಭಯೋತ್ಪಾದಕ ರಾಷ್ಟ್ರ ಎಂಬುದನ್ನು ವಿಶ್ವಕ್ಕೆ ಸತ್ಯ ವಿಚಾರವನ್ನು ತಿಳಿಸಬೇಕು ಎಂಬುದು ಭಾರತ ಸರ್ಕಾರದ ನಿಲುವಾಗಿದೆ. ಒಂದು ವೇಳೆ ಭಾರತದ ಒತ್ತಡಕ್ಕೆ ಮಣಿದ್ರೆ ಪಾಕಿಸ್ತಾನ ವಿಶ್ವದಲ್ಲಿ ಬೆತ್ತಲೆಯಾಗೋದು ಖಚಿತ. ಹಾಗೇ ಬಿಸಿಸಿಐನ ಒತ್ತಡಕ್ಕೆ ಮಣಿದು ಪಾಕಿಸ್ತಾನ ಕ್ರಿಕೆಟ್ ಐಸಿಸಿಯಿಂದ ಬ್ಯಾನ್ ಆದ್ರೂ ಅಚ್ಚರಿ ಏನಿಲ್ಲ. ಉಗ್ರರನ್ನು ಪೋಷಣೆ ಮಾಡುವ ಪಾಕ್ನ ದುಡ್ಡಿನ ಮೂಲಕ್ಕೆ ಕತ್ತರಿ ಹಾಕುವ ಎಲ್ಲಾ ಯೋಜನೆಗಳನ್ನು ಭಾರತ ಸರ್ಕಾರ ಮಾಡುತ್ತಿದೆ ಎಂಬುದು ಅಷ್ಟೇ ಸತ್ಯ.
ಸನತ್ ರೈ








