ಶುಬ್ಬಿ.. ತಾತನ ಪ್ರೀತಿಯ ಮೊಮ್ಮಗ.. ಅಪ್ಪನ ಕನಸನ್ನು ಸಾಕಾರಗೊಳಿಸಿದ ಹೆಮ್ಮೆಯ ಸುಪುತ್ರ. ಇಲ್ಲಿಂದಲೇ ಶುರುವಾಗುತ್ತೆ, ಶುಭ್ಮನ್ ಗಿಲ್ ಕ್ರಿಕೆಟ್ ಜರ್ನಿಯ ರೋಚಕ ತ್ರಿ “ಡಿ”ಯ ನೈಜ ಕಥೆ.
ಭಾರತದ ಬಹುತೇಕ ಮಕ್ಕಳಂತೆ ಕ್ರಿಕೆಟ್ ಆಟದ ಮೋಹದ ಬಲೆಯೊಳಗೆ ಸಿಲುಕಿ, ಕೊನೆಗೆ ಅದನ್ನೆ ಉಸಿರಾಗಿಸಿಕೊಂಡು ತನ್ನ ಬದುಕನ್ನು ರೂಪಿಸಿಕೊಂಡಿರುವುದು ತ್ರಿ ‘ಡಿ” ಮೂಲಕವೇ. ಅದುವೇ ಡಿಸಿಪ್ಲಿನ್, ಡೆಡಿಕೇಷನ್.. ಡಿಟರ್ಮಿನೇಷನ್.. ಇಲ್ಲದೆ ಇರುತ್ತಿದ್ರೆ ಇವತ್ತು ಒಬ್ಬ ರೈತ ಕುಟುಂಬದ ಹುಡುಗ ವಿಶ್ವ ಕ್ರಿಕೆಟಿಗನಾಗುತ್ತಿರಲಿಲ್ಲ. ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಯಕನಾಗುತ್ತಿರಲಿಲ್ಲ.
ಭಾರತ – ಪಾಕಿಸ್ತಾನ ಗಡಿಯಿಂದ ಕೇವಲ 10 ಕೀಲೋ ಮೀಟರ್ ದೂರದಲ್ಲಿರುವ ಚಕ್ಖೇರೆ ಗ್ರಾಮ ಶುಭ್ಮನ್ ಗಿಲ್ ಅವರ ಹುಟ್ಟೂರು. ಶ್ರೀಮಂತ ರೈತ ಕುಟುಂಬ. ಹೀಗಾಗಿ ಶುಭ್ಮನ್ಗೆ ಆರ್ಥಿಕ ತೊಂದರೆ ಯಾವತ್ತು ಕಾಡಿರಲಿಲ್ಲ. ಆದ್ರೆ ಕ್ರಿಕೆಟ್ ಆಟಗಾರನಾಗುವ ಕನಸನ್ನು ನನಸು ಮಾಡಲು ಸಾಕಷ್ಟು ಕಷ್ಟ, ನೋವು ಅನುಭವಿಸಿದ್ದಾರೆ. ಅದರಲ್ಲೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವಾಗ ಕೆಲವೊಂದು ತ್ಯಾಗಗಳನ್ನು ಮಾಡಲೇಕಾಗುತ್ತದೆ.
ಹೌದು, ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತರಲ್ಲ.. ಹಾಗೇ ಶುಭ್ಮನ್ ಗಿಲ್ 9 ವರ್ಷದ ತನಕ ಆಡುತ್ತಿದ್ದ ಏಕೈಕ ಆಟಿಕೆ ಅಂದ್ರೆ ಅದು ಬ್ಯಾಟ್ ಆಗಿತ್ತು. ಯಾಕಂದ್ರೆ ಆ ಬ್ಯಾಟ್ ಶುಭ್ಮನ್ ಗಿಲ್ ಅಜ್ಜ ಸರ್ದಾರ್ ದಿದಾರ್ ಸಿಂಗ್ ಕೊಟ್ಟ ಉಡುಗೊರೆಯಾಗಿತ್ತು. ತಾತ ಗಿಫ್ಟ್ ಕೊಟ್ಟ ಆಟಿಕೆಯ ಬ್ಯಾಟ್ನ ಮೋಹವೋ ಏನೋ ಮೊಮ್ಮಗ ಶುಭ್ಮನ್ ಕ್ರಿಕೆಟ್ ಆಟದ ಕಡೆ ಆಕರ್ಷಿತನಾದ. ಇದನ್ನು ಗಮನಿಸಿದ ಶುಭ್ಮನ್ ತಂದೆ ಲಖ್ವಿಂದರ್ ಸಿಂಗ್ ಗಿಲ್ ತನ್ನ ಮಗ ಕ್ರಿಕೆಟಿಗನಾಗಬೇಕು ಎಂದು ಕನಸು ಕಾಣತೊಡಗಿದ್ರು. ಹೀಗಾಗಿ ಗ್ರಾಮೀಣ ಪ್ರದೇಶವಾಗಿದ್ದ ಚಖ್ ಖೇರೆ ವಾಲಾ ಗ್ರಾಮದಿಂದ ಮೊಹಾಲಿಗೆ ಶಿಫ್ಟ್ ಆಗುವ ಪ್ಲ್ಯಾನ್ ಮಾಡಿದ್ದರು. ಆದ್ರೆ ಅಜ್ಜ ದಿದಾರ್ ಸಿಂಗ್ಗೆ ಲಖ್ವಿಂದರ್ ಕುಟುಂಬ ಮೊಹಾಲಿಗೆ ಶಿಫ್ಟ್ ಆಗೋದು ಇಷ್ಟವಿರಲಿಲ್ಲ. ಹೀಗಾಗಿ ಮೊಮ್ಮಗನಿಗೆ ಕ್ರಿಕೆಟ್ ಆಡಲು ವಿಶಾಲವಾದ ಅಂಗಣದಲ್ಲಿ ಪಿಚ್ ಕೂಡ ರೆಡಿ ಮಾಡಿದ್ದರು. ಪುಟಾಣಿ ಹುಡುಗ ಶುಭ್ಮನ್ ಬ್ಯಾಟಿಂಗ್ ಮಾಡುತ್ತಿದ್ರೆ, ತಂದೆ ಲಖ್ವಿಂದರ್ ಸಿಂಗ್ ಗಿಲ್ ಬೌಲಿಂಗ್ ಮಾಡುತ್ತಿದ್ದರು. ಅದು ಕೂಡ ಪ್ರತಿ ದಿನ ಸುಮಾರು 600-700 ಎಸೆತಗಳನ್ನು ಹಾಕುತ್ತಿದ್ದರಂತೆ.
ಮಗನ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ್ದ ಲಖ್ವಿಂದರ್ ಸಿಂಗ್ 2007ರಲ್ಲಿ ಮೊಹಾಲಿಯ ಪಿಸಿಎ ಮೈದಾನದ ಹತ್ತಿರದಲ್ಲೇ ಮನೆ ಮಾಡಿಕೊಂಡ್ರು. ಹೀಗಾಗಿ ಗಿಲ್ಗೆ ಕ್ರಿಕೆಟ್ನ ಗ್ರಾಮರ್ಗಳನ್ನು ಕಲಿಯಲು ಸುಲಭವಾಯ್ತು. ಸ್ಕೂಲ್ನಲ್ಲೂ ಟಾಪರ್ ಆಗಿದ್ದ ಶುಭ್ಮನ್ ಗಣಿತದಲ್ಲಿ ಪಂಟರ್ ಆಗಿದ್ದ. ಹೀಗಾಗಿ ಕ್ರಿಕೆಟ್ ಟೆಕ್ನಿಕ್ ಕಲಿಯುವುದು ದೊಡ್ಡ ಕಷ್ಟವೇನೂ ಆಗಿರಲಿಲ್ಲ.
ಅದು ಯಾವುದೇ ಕ್ಷೇತ್ರವಿರಲಿ.. ಕೇವಲ ಪ್ರತಿಭೆಯೊಂದೇ ಇದ್ರೆ ಸಾಕಾಗುವುದಿಲ್ಲ. ಪ್ರತಿಭೆಯನ್ನು ಗುರುತಿಸುವವರು ಬೇಕು. ಶುಭ್ಮನ್ ಗಿಲ್ ಬದುಕಿನಲ್ಲೂ ಆಗಿದ್ದು ಕೂಡ ಅದೇ.. ಅದೊಂದು ಅದೃಷ್ಟದ ದಿನ, 14 ವಯೋಮಿತಿ ಹುಡುಗರ ಜೊತೆ ಆಡುತ್ತಿದ್ದ ಶುಭ್ಮನ್ ಆಟವನ್ನು ದೂರದಿಂದಲೇ ಅಪ್ಪ ಲಿಖ್ವಿಂದರ್ ಸಿಂಗ್ ಗಿಲ್ ನೋಡುತ್ತಿದ್ದರು. ಇನ್ನೊಂದೆಡೆ ಅದೇ ಮೈದಾನದಲ್ಲಿ ಶುಭ್ಮನ್ ಬ್ಯಾಟಿಂಗ್ ಕೌಶಲ್ಯವನ್ನು ಕಡೂ ಭಾಯ್ ಅಂದ್ರೆ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಕರ್ಸನ್ ಘಾವ್ರಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. 19 ವಯೋಮಿತಿ ಪಂಜಾಬ್ ತಂಡದ ಬೌಲರ್ಗಳಿಗೆ ಘಾವ್ರಿ ತರಬೇತಿ ನೀಡುತ್ತಿದ್ದರು. ಆದ್ರೆ ಬೌಲರ್ಗಳನ್ನು ಎದುರಿಸುವ ಬ್ಯಾಟ್ಸ್ಮೆನ್ಗಳ ಕೊರತೆ ಕಾಡುತ್ತಿತ್ತು. ಆಗಲೇ ಕಡೂ ಭಾಯ್ ಕಣ್ಣಿಗೆ ಬಿದ್ದಿದ್ದು ಶುಭ್ಮನ್ ಗಿಲ್. ಎಳೆಯ ಬಾಲಕನ ಬ್ಯಾಟಿಂಗ್ ಶೈಲಿಗೆ ಆಕರ್ಷಿತರಾದ ಕಡೂ ಭಾಯ್, ಮಗನ ಆಟವನ್ನು ನೋಡುತ್ತಿದ್ದ ಲಿಖ್ಚಿಂದರ್ ಸಿಂಗ್ ಬಳಿ ಈ ಹುಡುಗ ಯಾರು..? ನಿಮಗೆ ಏನಾದ್ರೂ ಈ ಹುಡುಗನ ಬಗ್ಗೆ ಗೊತ್ತಿದೆಯಾ ಅಂತ ಕೇಳಿದ್ದರು. ಮರದ ಕೆಳಗೆ ಮಗನ ಆಟವನ್ನು ನೋಡುತ್ತಿದ್ದ ಲಖ್ಚಿಂದರ್ ಸಿಂಗ್, ಆತ ನನ್ನ ಮಗ ಶುಭ್ಮನ್. ಆತನಿಗೆ 12 ವರ್ಷ ಅಂತ ಹೇಳಿದ್ದರು. ಆಗ ಒಂದು ಕ್ಷಣವೂ ವ್ಯರ್ಥ ಮಾಡದೇ ನಾಳೆಯಿಂದ 19 ವಯೋಮಿತಿ ವೇಗದ ಬೌಲರ್ಗಳ ಶಿಬಿರಕ್ಕೆ ಶುಭ್ಮನ್ ಹಾಜರಾಗುವಂತೆ ಸೂಚನೆ ನೀಡಿದ್ದರು. ಅಲ್ಲಿಂದ ಶುಭ್ಮನ್ ಗಿಲ್ ಭಾಗ್ಯದ ಬಾಗಿಲು ತೆರೆದುಕೊಂಡಿತ್ತು.
ಬಳಿಕ ಶುಭ್ಮನ್ ಗಿಲ್ ಪಳಗಿದ್ದು ಎನ್ಸಿಎ ಹೆಡ್ ಹಾಗೂ 19 ವಯೋಮಿತಿ ವಿಶ್ವಕಪ್ ತಂಡದ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ. ಮುಂದಿನದ್ದು ಏನಿದ್ರೂ ಕಣ್ಣ ಮುಂದೆಯೇ ಇದೆ. ರಾಹುಲ್ ಗುರುಕುಲ ಅಂದ್ರೆ ಅಲ್ಲಿ ಶಿಸ್ತು, ಬದ್ಧತೆ, ದೃಢ ಸಂಕಲ್ಪ ಇರಲೇಬೇಕು. ಬ್ಯಾಟಿಂಗ್ ತಾಂತ್ರಿಕತೆಯಲ್ಲಿ ಪಕ್ವಗೊಂಡಿರುವ ಶುಭ್ಮನ್ ಗಿಲ್ 19 ವಯೋಮಿತಿ ವಿಶ್ವಕಪ್ ವಿಜೇತ ತಂಡದ ಆಟಗಾರನೂ ಹೌದು. ಹಾಗೇ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲೇ ಭಾರತ ಎ ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದರು. ಹೀಗೆ ಹಂತ ಹಂತವಾಗಿ ಒಂದೊಂದು ಹೆಜ್ಜೆಯನ್ನಿಟ್ಟಿರುವ ಶುಭ್ಮನ್ ಗಿಲ್, 2019ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 55 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್ 59ರ ಸರಾಸರಿಯಲ್ಲಿ 2775 ರನ್ ಕಲೆ ಹಾಕಿದ್ದಾರೆ. ಒಂದು ದ್ವಿಶತಕ ಸೇರಿದಂತೆ ಎಂಟು ಶತಕಗಳನ್ನು ಸಿಡಿಸಿದ್ದಾರೆ. ಹಾಗೇ 2020ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಶುಭ್ಮನ್ 35ರ ಸರಾಸರಿಯಲ್ಲಿ 1893 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕ ದಾಖಲಿಸಿದ್ದಾರೆ. 2023ರಲ್ಲಿ ಟಿ-20 ಕ್ರಿಕೆಟಿಗೂ ಪದಾರ್ಪಣೆ ಮಾಡುವ ಮೂಲಕ ಟೀಮ್ ಇಂಡಿಯಾದ ಮೂರು ಮಾದರಿಯ ಕ್ರಿಕೆಟ್ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಆಡಿದ್ದ ಗಿಲ್ ಸದ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಇದೀಗ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಟೆಸ್ಟ್ ತಂಡದ ಸಾರಥಿಯಾಗಿದ್ದಾರೆ. ಅಜ್ಜ, ತಂದೆಯ ಕನಸನ್ನು ನನಸು ಮಾಡಿದ್ದಾರೆ. ಹಾಗಂತ ಇದು ಖಂಡಿತವಾಗಿಯೂ ಹೂವಿನ ಹಾದಿಯಲ್ಲ. ಕಲ್ಲು ಮುಳ್ಳಿನ ಹಾದಿ. ಪ್ರತಿ ಹೆಜ್ಜೆಯನ್ನು ನೋಡಿಕೊಂಡು ಇಡಬೇಕಿದೆ. ಭಾರತ ಟೆಸ್ಟ್ ತಂಡದ ಘನತೆಯನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಗಿಲ್ ಮೇಲಿದೆ. ಈಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟಿಗರು ಒಡ್ಡೋಲಗ ನಡೆಸಿರುವುದು ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಾಗಿದೆ. ಆ ಪರಂಪರೆಯನ್ನು ಮುಂದುವರಿಸುವ ಭರವಸೆ, ವಿಶ್ವಾಸವನ್ನು ಕೋಟ್ಯಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳು 25ರ ತರುಣ ಶುಭ್ಮನ್ ಗಿಲ್ ಮೇಲೆ ಇಟ್ಟಿದ್ದಾರೆ. ಆಪ್ತಮಿತ್ರ ರಿಷಬ್ ಪಂತ್ ಶುಬ್ಬಿಗೆ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಇದು ಆರಂಭ.. ಶುಭಾರಂಭ.. ಆಲ್ ದಿ ಬೆಸ್ಟ್ ಶುಬ್ಬಿ..!
ಸನತ್ ರೈ








