ಆರ್ಸಿಬಿ-ಪಿಬಿಕೆಎಸ್ ಅಭಿಮಾನಿಗಳಿಗೆ ಮಾಮೂಲಿ ಕ್ರಿಕೆಟ್ ಪ್ರೇಮಿಯೊಬ್ಬನಿಂದ ಸುಮ್ಮನೆ ಹೀಗೊಂದು ಪತ್ರ;
“ಈ ಸಲ ಐಪಿಎಲ್ ಅನ್ನು ಆರ್ಸಿಬಿಗಿಂತ ಮುಖ್ಯವಾಗಿ ಪಂಜಾಬ್ ಗಿಂತ ಮುಖ್ಯವಾಗಿ ಕ್ರಿಕೆಟ್ ಗೆಲ್ಲಬೇಕು.. ವಿರಾಟ್-ಶ್ರೇಯಸ್ ಇಬ್ಬರೂ ಕ್ರಿಕೆಟ್ ಅನ್ನು ಗೆಲ್ಲಿಸಬೇಕು”
ಇವರಿಂದ,
ಆರ್ಸಿಬಿ ವರ್ಸಸ್ ಪಿಬಿಕೆಎಸ್
ಇವರಿಗೆ,
ಆರ್ಸಿಬಿ ಮತ್ತು ಪಿಬಿಕೆಎಸ್ ಫ್ಯಾನ್ಸ್
ವಿಷಯ: 2025ರ ಐಪಿಎಲ್ ಹಣಾಹಣಿಯ ಅಂತಿಮ ನಿರ್ಣಾಯಕ ಪಂದ್ಯ
ದಿನಾಂಕ: ಜೂನ್ 3, 2025
ಸ್ಥಳ: ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣ
ಪ್ರೀತಿಯ ಕ್ರಿಕೆಟ್ ಪ್ರೇಮಿಗಳೇ,
ಯಾಕೋ ಏನೋ ಗೊತ್ತಿಲ್ಲ.. ಮನಸು ಫುಲ್ ಕನ್ಫ್ಯೂಷನ್ಲ್ಲಿದೆ. ಏನೋ ಒಂದು ರೀತಿಯ ತಳಮಳ ಶುರುವಾಗಿದೆ. ಹೇಗೆ ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಹೃದಯ ಮಾತು ಕೇಳಿದ್ರೆ ನೀವು ನಗಬಹುದು.. ಮನದಲ್ಲಿರುವ ನೂರಾರು ಸ್ವಾರ್ಥಗಳನ್ನು ಹೇಳಿದ್ರೆ ನೀವೂ ಹೌದು ಎನ್ನಬಹುದು.. ಹಾಗಾಗಿದೆ ನನ್ನ ಈ ಪರಿಸ್ಥಿತಿಗೆ ಕಾರಣ – ಈ ಬಾರಿಯ ಐಪಿಎಲ್ ಫೈನಲ್ ಮ್ಯಾಚ್
ಹೌದು, ನಾನು ಅಪ್ಪಟ ಆರ್ಸಿಬಿ ಅಭಿಮಾನಿ ಖಂಡಿತಾ ಅಲ್ಲ. ಹಾಗೇ ಪಿಬಿಕೆಎಸ್ನ ಅಭಿಮಾನಿಯೂ ಅಲ್ಲ. ಜಸ್ಟ್ ಒಬ್ಬ ಸಾಮಾನ್ಯ ಕ್ರಿಕೆಟ್ ಪ್ರೇಮಿ. ದೇಶದ ವಿಚಾರದ ಬಂದಾಗ ಟೀಮ್ ಇಂಡಿಯಾ ಗೆಲ್ಲಬೇಕು ಎಂದು ಮನ ಮಿಡಿಯುತ್ತದೆ. ಆದ್ರೆ ಐಪಿಎಲ್ ಹಾಗಲ್ಲ. ಪಂದ್ಯದ ರೋಚಕ ಕ್ಷಣಗಳನ್ನು ಎಂಜಾಯ್ ಮಾಡೋದು, ಅದನ್ನು ಬರೆಯುವುದು ನನ್ನ ಕಾಯಕ ಅಷ್ಟೇ. ಸದ್ಯದ ಪರಿಸ್ಥಿತಿ ಹಾಗಿಲ್ಲ. ಯಾಕೋ ಏನೋ ಯಾರಿಗೆ ಸಪೋರ್ಟ್ ಮಾಡಬೇಕು ಎಂಬ ದೊಡ್ಡ ಗೊಂದಲ ಎದುರಾಗಿದೆ. ಒಬ್ಬರು ತನ್ನ ಕ್ರಿಕೆಟ್ ಬದುಕಿನ ಸಾರ್ಥಕತೆಗಾಗಿ ಕಪ್ ಗೆಲ್ಲಬೇಕು. ಅದು ಈಡೇರಬೇಕು ಎಂದು ಕೋಟ್ಯಾಂತರ ಅಭಿಮಾನಿಗಳು ಬಯಸುತ್ತಾರೆ. ಇನ್ನೊಬ್ಬರು ಕಪ್ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ. ಮತ್ತೊಬ್ಬರು ಮೂರು ಫ್ರಾಂಚೈಸಿಗಳಿಗೆ ಕಪ್ ಗೆದ್ದ ದಾಖಲೆ ಬರೆಯಬೇಕು ಎಂಬ ತುಡಿತದಲ್ಲಿದ್ದಾರೆ. ಯಾರನ್ನು ಬಿಡೋದು.. ಯಾರಿಗೆ ಬೆಂಬಲ ನೀಡೋದು..! ಮೈಂಡ್ ಫುಲ್ ಬ್ಲ್ಯಾಂಕ್ ಆಗಿ ಹೋಗ್ಬಿಟ್ಟಿದೆ ಗುರು..!
ಕಾರಣ – ಪ್ರಶಸ್ತಿಗಾಗಿ ಆರ್ಸಿಬಿ- ಪಿಬಿಕೆಎಸ್ ಫೈಟ್.. ಯಾರಿಗೆ ಸಪೋರ್ಟ್..?
ಬಹುಶಃ ಐಪಿಎಲ್ ಇತಿಹಾಸದಲ್ಲಿ ಇಂತಹದ್ದೊಂದು ಫೈನಲ್ ಪಂದ್ಯ ನಡೆಯುತ್ತೆ ಅಂತ ಯಾರು ಕೂಡ ಊಹೆ ಮಾಡಿರಲಿಕ್ಕಿಲ್ಲ. ಈ ಹಿಂದೆ ರೋಮಾಂಚನಗೊಳಿಸುವ ಎಷ್ಟೋ ರೋಚಕ ಫೈನಲ್ ಪಂದ್ಯಗಳು ನಡೆದಿವೆ. ಇಲ್ಲ ಅಂತ ಹೇಳುತ್ತಿಲ್ಲ. ಆದ್ರೆ ಈ ಬಾರಿಯ ಫೈನಲ್ ಪಂದ್ಯ ವೆರಿ ವೆರಿ ಸ್ಪೇಷಲ್. ಒಂದು ತಂಡ ಗೆಲ್ಲಬೇಕು ಎಂದು ಕೋಟಿ ಕೋಟಿ ಅಭಿಮಾನಿಗಳು ಬಯಸುವುದು, ಪ್ರಾರ್ಥನೆ, ಪೂಜೆ ಮಾಡೋದು.. ಆ ಒಬ್ಬ ವ್ಯಕ್ತಿಗೋಸ್ಕರವಾದ್ರೂ ಕಪ್ ಗೆಲ್ಲಬೇಕು ಎಂದು ಮನಸಾರೆ ಇಚ್ಛಿಸುವುದು.. ಅಬ್ಬಾ.. ಏನು ಪ್ರೀತಿ.. ಏನು ಅಭಿಮಾನ.. ಈ ಅಭಿಮಾನದ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಐಸಿಸಿ ಟೂರ್ನಿಗಳು ಬಂದಾಗ ಟೀಮ್ ಇಂಡಿಯಾ ಗೆಲ್ಲಬೇಕು ಎಂದು ಪ್ರಾರ್ಥನೆ ಮಾಡೋದು ಭಾರತದಲ್ಲಿ ಮಾಮೂಲಿ. ಆದ್ರೆ ಒಂದು ಫ್ರಾಂಚೈಸಿ ಗೆಲ್ಲಬೇಕು ಎಂದು ಈ ರೀತಿಯ ಪ್ರೀತಿ, ಅಭಿಮಾನ, ಪ್ರಾರ್ಥನೆ ಇದೇ ಮೊದಲು ಮತ್ತಿದು ತೀರಾ ವಿಶೇಷ ಅನ್ಸುತ್ತೆ.
ಕಾರಣ -ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ
ಇದು ಸತ್ಯವಾದ್ರೂ ಸತ್ಯವೋ ಸತ್ಯ. ಆರ್ಸಿಬಿಯಂತ ಕಟ್ಟರ್ ಅಭಿಮಾನಿಗಳು ಯಾವ ತಂಡಕ್ಕೂ ಇಲ್ಲ. ಮುಂದೆ ಸಿಗೋದು ಇಲ್ಲ.. ಸದ್ಯ ಆರ್ಸಿಬಿ ಅಭಿಮಾನಿಗಳ ಮನಸು ಹೇಗಿದೆ ಅಂದ್ರೆ, ಗಗನವೇ ಬಾಗಿ.. ಭುವಿಯನ್ನು ಚುಂಬಿಸುವ ಹಾಗಿದೆ. ಕಡಲು ನದಿಯನ್ನು ಭೇಟಿಗೆ ಕರೆದಂತಿದೆ. ಈ ಹಿಂದೆ ಮೂರು ಬಾರಿ ಕೈ ಜಾರಿದಾಗ ಕಣ್ಣೀರು ಸುರಿಸಿದ್ದು, 14 ಬಾರಿ ಸೋತು ಸುಣ್ಣವಾದ್ರೂ ಮುಂದಿನ ಸಲ ಕಪ್ ನಮ್ದೆ ಅಂತ ಹೇಳುತ್ತಾ ಸಮಧಾನಪಟ್ಟುಕೊಂಡಿದ್ದು ಆಗಿದೆ. ಅದೆಲ್ಲವನ್ನೂ ಮರೆತು ಇದೀಗ ಜೀವನ ಮತ್ತೆ ಶುರುವಾದಂತಿದೆ. ಮತ್ತೊಂದು ಕನಸಿನೂರಿನ ಬಾಗಿಲು ತೆರೆದಂತಿದೆ. ಖುಷಿಯಂತೂ ಮೀತಿ ಮೀರಿ ಮಧುಮಾಸದಂತೆ ಕೈ ಚಾಚಿದಂತಿದೆ. 18 ವರ್ಷಗಳಿಂದ ಬಿಡಿ ವಜ್ರದ ಹಾಗೇ ಕಾಡುತ್ತಿದ್ದ ಐಪಿಎಲ್ ಟ್ರೋಫಿಯ ಆಗಮನದ ನಿರೀಕ್ಷೆಯೂ ಹೆಚ್ಚಾಗುತ್ತಿದೆ. ಆ ಒಂದು ಸಂತಸದ ಕ್ಷಣವನ್ನು ಮನಬಂದಂತೆ ಆನಂದಿಸಬೇಕು. ಕಣ್ತುಂಬ ನೋಡಿಕೊಳ್ಳಬೇಕು. ಆ ಘಳಿಗೆಗಾಗಿ ರೆಡಿಯಾಗುತ್ತಿರುವುದನ್ನು ನೋಡಿದಾಗ ಪ್ರೀತಿ ಕುರುಡು ಅನ್ನೋದು ಸುಳ್ಳಲ್ಲ ಅಂತ ಅನ್ಸುತ್ತೆ.
ಕಾರಣ – ಆರ್ಸಿಬಿ ಅಭಿಮಾನಿಗಳ ಪ್ರೀತಿಯ ಅಭಿಮಾನ
ಇನ್ನೂ ಪ್ರೀತಿ ಝಿಂಟಾ.. ಪ್ರೀತಿ ಮಾಡಿದವ ಕೈಗೆ ಸಿಗಲಿಲ್ಲ. ಹಾಗೇ ಐಪಿಎಲ್ ಟ್ರೋಫಿಯೂ ಆಕೆಗೆ ಮರೀಚಿಕೆಯಾಗಿದೆ. ಆದ್ರೂ ನೆಸ್ ವಾಡಿಯಾ ಮತ್ತು ಪ್ರೀತಿ ಝಿಂಟಾಳ ಪ್ರೀತಿಯ ಸಂಬಂಧ ಮುರಿದು ಬಿದ್ರೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಅವರ ಉದ್ಯಮದ ಸಂಬಂಧವನ್ನು ಗಟ್ಟಿಗೊಳಿಸಿದೆ. ಎಷ್ಟೇ ಭಿನ್ನಾಭಿಪ್ರಾಯಗಳಿದ್ರೂ ಫ್ರಾಂಚೈಸಿಗೆ ಒಂಚೂರು ತೊಂದರೆಯಾಗಿಲ್ಲ. ಕಳೆದ 18 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. 2014ರ ಬಳಿಕ ಮತ್ತೆ ಇದೀಗ ಫೈನಲ್ಸ್ ಗೆ ಬಂದಿದೆ. ಪ್ರತಿ ಪಂದ್ಯವನ್ನು ವೀಕ್ಷಿಸುವ ಪ್ರೀತಿ ಝಿಂಟಾಳ ಕಣ್ಣಲ್ಲಿ ಕೂಡ ಐಪಿಎಲ್ ಟ್ರೋಫಿ ಹೊಳೆಯುತ್ತಿದೆ. ಒಂದು ಬಾರಿಯಾದ್ರೂ ಕಪ್ ಗೆದ್ದು ಸಂಭ್ರಮಿಸಬೇಕು. ಆ ಕ್ಷಣಕ್ಕಾಗಿ ಡಿಂಪಲ್ ರಾಣಿ ಕೂಡ ಕಾಯುತ್ತಿದ್ದಾಳೆ. ನೆಸ್ ವಾಡಿಯಾ ಜೊತೆಯಾಗಿ ಫ್ರಾಂಚೈಸಿ ಖರೀದಿ ಮಾಡಿದ್ರೂ, ನಿಜವಾದ ಪ್ರೀತಿ ಸಿಗಲಿಲ್ಲ. ಆದ್ರೆ ಜೊತೆಯಾಗಿ ಐಪಿಎಲ್ ಟ್ರೋಫಿಯನ್ನು ಕೈಯಲ್ಲಿ ಹಿಡಿಯುವ ಭಾಗ್ಯವಾದ್ರೂ ಸಿಗುತ್ತಾ..? ಆರ್ಸಿಬಿ ಅದಕ್ಕೆ ಅವಕಾಶ ಕೊಡುತ್ತಾ..?
ಕಾರಣ – ಪ್ರೀತಿಗಿಂತಲೂ ಮಿಗಿಲಾಗಿದೆ ಈ ಐಪಿಎಲ್ ಟ್ರೋಫಿ
ಇದೆಲ್ಲದರ ಮಧ್ಯೆ ಆತನೊಬ್ಬ ಇರಬೇಕಿತ್ತು.. ಇದ್ದು ಇರುತ್ತಿದ್ರೆ ಅವನನ್ನು ಹಿಡಿಯುವವರು ಯಾರು ಇರುತ್ತಿರಲಿಲ್ಲ. ಅವನ ಖುಷಿಗಂತೂ ಇವತ್ತು ಪಾರವೇ ಇರುತ್ತಿರಲಿಲ್ಲ. ಆದ್ರೆ ಆತ ಇದ್ದು ಇರದಂತೆ ಎಲ್ಲೋ ದೂರದಿಂದ ನೋಡುತ್ತಿರುವ ನತದೃಷ್ಟ.. ಹೌದು. ಆತ ಬೇರಾರು ಅಲ್ಲ, ವಿಜಯ್ ಮಲ್ಯ.. ಆರ್ಸಿಬಿ ತಂಡದ ಮೊದಲ ಮಾಲೀಕ. ಮಲ್ಯ ಅವರಿಗೆ ಆರ್ಸಿಬಿ ತಂಡವೇ ಉಸಿರಾಗಿತ್ತು. ಅದಕ್ಕಾಗಿ ಏನು ಮಾಡಲು ಕೂಡ ರೆಡಿಯಾಗಿದ್ರು. ಇವತ್ತೂ ಆರ್ಸಿಬಿ ಇಷ್ಟೊಂದು ಜನಪ್ರಿಯ ಫ್ರಾಂಚೈಸಿಯಾಗಲು ಕಾರಣವೇ ಮಲ್ಯ. ಒಂದು ವೇಳೆ ಅವರ ಮಾಸ್ಟರ್ ಪ್ಲ್ಯಾನ್ ಇಲ್ಲದೆ ಇರುತ್ತಿದ್ರೆ ಆರ್ಸಿಬಿ ಕೂಡ ಒಂದು ಮಾಮೂಲಿ ಐಪಿಎಲ್ ಫ್ರಾಂಚೈಸಿಯಾಗುತ್ತಿತ್ತು. ಖಂಡಿತವಾಗಿಯೂ ಆರ್ಸಿಬಿ ಮಲ್ಯ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದೆ. ಯಾಕೆ ಓಡಿ ಹೋದ್ರಿ ವಿಜಯ್ ಮಲ್ಯ ಅವ್ರೇ..? ಐತಿಹಾಸಿಕ ಕ್ಷಣ, ಐತಿಹಾಸಿಕ ಮ್ಯಾಚ್ ಅನ್ನು ಕಣ್ಣಾರೆ ನೋಡುವ ಭಾಗ್ಯ ನಿಮಗಿಲ್ಲ ಬಿಡಿ. ಆದ್ರೂ ಇವತ್ತು ನಿಮಗೆ ಹಬ್ಬನೇ.. ದೂರದಲ್ಲಿದ್ರೂ ಯಾವ ಭಯವಿಲ್ಲದೆ, ಕೈಲೊಂದು ಲಾರ್ಜ್ ಕಿಂಗ್ ಫಿಶರ್ ಸಿಪ್ ಮಾಡುತ್ತಾ, ಸಕತ್ತಾಗಿಯೇ ಎಂಜಾಯ್ ಮಾಡಿಕೊಂಡು ಮ್ಯಾಚ್ ಅನ್ನು ಟಿವಿಯಲ್ಲಿ ನೋಡ್ತಿರಾ..? ನಿಮ್ಮ ಪಾರ್ಟಿ ಪ್ಲ್ಯಾನ್ ರೆಡಿಯಾಗಿರುತ್ತೆ ಗೊತ್ತು ಬಿಡಿ..! ಆದರೂ ಒಂದು ಸಣ್ಣ ಬೇಸರವಂತೂ ಇದ್ದೇ ಇದೆ.
ಕಾರಣ-ಆರ್ಸಿಬಿ ಕನಸುಗಾರ ವಿಜಯ್ ಮಲ್ಯ ದೇಶ ಬಿಟ್ಟು ಓಡಿ ಹೋಗಬಾರದಿತ್ತು..!
ನಿಜ, ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿಬಿಟ್ಟಿದೆ. ಇಲ್ಲಿ ಕ್ರಿಕೆಟ್ ಆಟಗಾರರೇ ಪ್ರವಾದಿಗಳು.. ಅಭಿಮಾನಿಗಳೇ ಭಕ್ತರು. ಹಾಗಂತ ಇಲ್ಲಿ ಯಾವುದೇ ಕುಲ, ಜಾತಿ, ಅಂತಸ್ತಿನ ತಾರತಮ್ಯ ಇಲ್ಲ. ಪ್ರತಿಭೆಯ ಜೊತೆ ಅದೃಷ್ಟವೂ ಕೆಲವೊಂದು ಬಾರಿ ಬೇಕಾಗುತ್ತದೆ. ಅದನ್ನು ಬಿಟ್ಟು ವಿವಾದ, ಭ್ರಷ್ಟಾಚಾರ, ಒಳರಾಜಕೀಯ ಎಲ್ಲವೂ ನಡೆಯುತ್ತದೆ. ಆದ್ರೂ ಭಾರತೀಯ ಕ್ರಿಕೆಟ್ ಇವತ್ತೂ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನೇ ಕೈ ಬೆರಳಿನಲ್ಲೇ ಆಡಿಸುತ್ತಿದೆ. ಹಾಗಾಗಿಯೇ ಐಪಿಎಲ್ ಎಂಬ ದೇಸಿ ಟೂರ್ನಿ ಇವತ್ತು ಇಡೀ ಕ್ರಿಕೆಟ್ ಜಗತ್ತಿನ ಜನಪ್ರಿಯ ಟೂರ್ನಿಯಾಗಿ ಬೆಳೆದಿರುವುದು.
ಕಾರಣ – ಬಿಸಿಸಿಐ ಎಂಬ ದೈತ್ಯ ಕ್ರಿಕೆಟ್ ಪೋಷಕ ಸಂಸ್ಥೆ
ಒಟ್ನಲ್ಲಿ, ಇವತ್ತು ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣ ಒಂದು ಐತಿಹಾಸಿಕ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಇವತ್ತು ರಾತ್ರಿ 7 ಗಂಟೆಯ ನಂತ್ರ ಅಭಿಮಾನಿಗಳು ಮನೆಯಿಂದ ಹೊರಗಡೆ ಬರಲ್ಲ ಅಂತ ಗೊತ್ತು ಹೊಟೇಲ್, ಪಬ್ಗಳು ಹೌಸ್ಫುಲ್ ಆಗಿರುತ್ತವೆ. ರಂಗು ರಂಗಿನ ಬೆಳಕಿನ ನಡುವೆ ಪಂದ್ಯ ನೋಡುವುದಕ್ಕಿಂತ ಮನೆಯಲ್ಲೇ ಕೂತು ಆರಾಮವಾಗಿ ಪಂದ್ಯ ನೋಡಬೇಕು. ಯಾರು ಗೆಲ್ತಾರೋ ಗೊತ್ತಿಲ್ಲ. ಯಾರು ಗೆದ್ರೂ ಖುಷಿನೇ.. ಯಾಕಂದ್ರೆ ಐಪಿಎಲ್ ಜಸ್ಟ್ ಗೇಮ್. ಒಂದು ಟಿ-20 ಮ್ಯಾಚ್ ಅಷ್ಟೇ. ಇಲ್ಲಿ ಹೆಚ್ಚು ಎಮೋಷನ್ ಇಲ್ಲ. ಅತೀಯಾದ ಅಮೃತವೂ ವಿಷವಾಗುತ್ತೆ ಅಂತರಲ್ಲ ಹಾಗೇ, ಅತೀಯಾದ ಅಭಿಮಾನವೂ ಕೆಲವೊಂದು ಸಲ ಭಂಗವಾಗುತ್ತದೆ. ಯಾವುದಕ್ಕೂ ಪಂದ್ಯವನ್ನು ನೋಡಿ ಎಂಜಾಯ್ ಮಾಡಿ.
ಕಾರಣ – ಕ್ರಿಕೆಟ್ ಜಂಟಲ್ ಮ್ಯಾನ್ ಗೇಮ್
ಕೊನೆದಾಗಿ ಒಂದು ಮಾತು, “ಈ ಸಲ ಐಪಿಎಲ್ ನಲ್ಲಿ ಆರ್ಸಿಬಿಗಿಂತ ಮುಖ್ಯವಾಗಿ ಪಂಜಾಬ್ ಗಿಂತ ಮುಖ್ಯವಾಗಿ ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್ ಗೆಲ್ಲಬೇಕು.. ವಿರಾಟ್-ಶ್ರೇಯಸ್ ಇಬ್ಬರೂ ಕ್ರಿಕೆಟ್ ಅನ್ನು ಗೆಲ್ಲಿಸಬೇಕು”
ಇಂತೀ ಒಬ್ಬ ಸಾಮಾನ್ಯ ಮಾಮೂಲಿ ಕ್ರಿಕೆಟ್ ಅಭಿಮಾನಿ
-ಸನತ್ ರೈ








