ಇದು ಜಸ್ಟ್ ಫ್ಲ್ಯಾಶ್ಬ್ಯಾಕ್..!
ಏಪ್ರಿಲ್ 2, 2011, ಮುಂಬೈನ ವಾಂಖೇಡೆ ಕ್ರೀಡಾಂಗಣ..
ಸರಿ ಸುಮಾರು 14 ವರ್ಷಗಳ ಹಿಂದೆ ಅಪ್ಪಟ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಯಾಗಿದ್ದೆ. 2011ರ ವಿಶ್ವಕಪ್ ಅಂತೂ ಸಚಿನ್ ತೆಂಡುಲ್ಕರ್ಗಾಗಿ ಭಾರತ ಗೆಲ್ಲಲೇಬೇಕು ಅನ್ನೋದು ತುಡಿತವಾಗಿತ್ತು. ಅದಕ್ಕೆ ತಕ್ಕಂತೆ ಧೋನಿ ಗೆಲುವಿನ ರನ್ಗಾಗಿ ಸಿಕ್ಸರ್ ಬಾರಿಸಿದಾಗ ಡ್ರೆಸಿಂಗ್ ರೂಮ್ನಲ್ಲಿದ್ದ ಸಚಿನ್ ಮೈದಾನಕ್ಕೆ ಓಡೋಡಿ ಬಂದು ಸಹ ಆಟಗಾರರನ್ನು ಅಲಂಗಿಸಿಕೊಂಡಿರುವುದು ಇನ್ನೂ ಕಣ್ಣಮುಂದೆಯೇ ಇದೆ…!
ಹಾಗೇ ಜೂನ್ 3..2025, ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣ. ಐಪಿಎಲ್ ಫೈನಲ್ನ ಕೊನೆಯ ಓವರ್ನಲ್ಲಿ ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್ ಕೊಹ್ಲಿಯ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಅವತ್ತು ಸಚಿನ್ ತೆಂಡುಲ್ಕರ್ ವಾಂಖೇಡೆ ಕ್ರೀಡಾಂಗಣವನ್ನು ಯಾವ ರೀತಿ ಪರವಶಮಾಡಿಕೊಂಡಿದ್ರೋ ಅದೇ ರೀತಿ ಇವತ್ತು ನರೇಂದ್ರ ಮೋದಿ ಕ್ರೀಡಾಂಗಣವನ್ನು ವಿರಾಟ್ ಕೊಹ್ಲಿ ಆವರಿಸಿಕೊಂಡುಬಿಟ್ರು. ಆರ್ಸಿಬಿ.. ಆರ್ಸಿಬಿ.. ಆರ್ಸಿಬಿ.. ಕೊಹ್ಲಿ.. ಕೊಹ್ಲಿ.. ಕೊಹ್ಲಿ.. ಅನ್ನೋ ಮಂತ್ರ ಘೋಷ ರೋಮಾಂಚನಗೊಳಿಸುವಂತಿತ್ತು. ಇನ್ನು, ಗೆಲುವಿನ ಬಗ್ಗೆ ವಿರಾಟ್ ಕೊಹ್ಲಿಯ ಪ್ರತಿಯೊಂದು ಮಾತುಗಳನ್ನು ಕೇಳಿದಾಗ ಗÉೂತ್ತಿಲ್ಲದ ಹಾಗೇ ಕಣ್ಣಂಚಿನಲ್ಲಿ ನೀರು..! ಹಾಗಂತ ಖಂಡಿತ ಇದು ಆರ್ಸಿಬಿ ಅಭಿಮಾನಕ್ಕಲ್ಲ. ಹಾಗೇ ಕ್ರಿಕೆಟ್ ಆಟಕ್ಕೂ ಅಲ್ಲ.. ಕೊಹ್ಲಿ ಮತ್ತು ಆರ್ಸಿಬಿ ನಡುವಿನ ಗಾಢವಾದ ಪ್ರೀತಿಯ ನಂಟಿಗೆ ಮನಸೋತು ಹೋದೆ.. !
ಒಬ್ಬ ಗಾಡ್ ಆಫ್ ಕ್ರಿಕೆಟ್.. ಇನ್ನೊಬ್ಬ ಚೇಸಿಂಗ್ ಗಾಡ್.. ವಿಶ್ವ ಕ್ರಿಕೆಟ್ನ ಬಹುತೇಕ ದಾಖಲೆಗಳು ಇವರಿಬ್ಬರ ಹೆಸರಿನಲ್ಲಿ ಅಂಟಿಕೊಂಡಿದ್ದವು. ಆದ್ರೆ ಸಚಿನ್ ತೆಂಡುಲ್ಕರ್ಗೆ ಏಕದಿನ ವಿಶ್ವಕಪ್ ಟ್ರೋಫಿ ಮರೀಚಿಕೆಯಾಗಿತ್ತು. ಹಾಗೇ ವಿರಾಟ್ ಕೊಹ್ಲಿಗೂ ಐಪಿಎಲ್ ಟ್ರೋಫಿ ಗಗನಕುಸುಮವಾಗಿಬಿಟ್ಟಿತ್ತು. ಸಚಿನ್ಗೆ ವಿಶ್ವಕಪ್ ಐದು ಬಾರಿ ಕೈ ಜಾರಿ ಹೋಗಿತ್ತು. ಅದರಲ್ಲೂ ಒಂದು ಬಾರಿ ಸೆಮಿಫೈನಲ್ ಹಾಗೂ ಒಂದು ಬಾರಿ ಫೈನಲ್ನಲ್ಲಿ ಜಸ್ಟ್ ಮಿಸ್ ಆಗಿತ್ತು. ಅದೇ ರೀತಿ ವಿರಾಟ್ ಕೊಹ್ಲಿಗೂ ಮೂರು ಬಾರಿ ಐಪಿಎಲ್ ಟ್ರೋಫಿ ಕಣ್ಣ ಮುಂದೆಯೇ ಹಾದು ಹೋಗಿದ್ರೂ ಕೈಯಲ್ಲಿ ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ.
ಆದ್ರೆ 20 ವರ್ಷಗಳ ಬಳಿಕ ಧೋನಿ ಹುಡುಗರು ಸಚಿನ್ಗಾಗಿ ವಿಶ್ವಕಪ್ ಗೆದ್ದ ಹಾಗೇ, 18 ವರ್ಷಗಳ ಬಳಿಕ ಆರ್ಸಿಬಿ ತರುಣರು ವಿರಾಟ್ಗಾಗಿ ಐಪಿಎಲ್ ಟ್ರೋಫಿಯನ್ನು ಕಾಣಿಕೆಯಾಗಿ ನೀಡಿದ್ರು. ಈ ಎರಡು ಘಟನೆಗಳನ್ನು ನೆನಪು ಮಾಡಿಕೊಂಡು ನೋಡಿದಾಗ ಕ್ರಿಕೆಟ್ ಬರೀ ಕ್ರೀಡೆಯಲ್ಲ.. ಹೊಡಿಬಡಿ ಆಟವಲ್ಲ.. ಮನೋರಂಜನೆಯ ಆಟವೂ ಅಲ್ಲ.. ಸೇಡು, ಏಟಿಗೆ ಏದುರೇಟು, ವಾಕ್ಸಮರ ಹಿಗೆ ಎಲ್ಲವೂ ಕ್ಷಣಿಕ ಅಷ್ಟೇ.. ಅದಕ್ಕಿಂತಲೂ ಮಿಗಿಲಾಗಿರುವುದು ಭಾವನೆಗಳ ಜೊತೆಗಿನ ಒಡನಾಟ. .ಎಂಥಾ ಆಕ್ರಮಣಕಾರಿ ಆಟಗಾರನಾಗಿರಲಿ.. ಎಂಥಾ ಚಾಂಪಿಯನ್ ಆಟಗಾರನೂ ಆಗಿರಲಿ.. ಆತನ ಒಳಮನಸ್ಸಿನಲ್ಲಿ ಎಮೋಷನಲ್ ಫೀಲಿಂಗ್ ಇರುತ್ತೆ ಎಂಬುದು ಅಷ್ಡೇ ಸತ್ಯ.
ನಿಜ, 2025ರ ಐಪಿಎಲ್ ಫೈನಲ್ ಪಂದ್ಯ ರಣರೋಚಕವಾಗಿತ್ತು. ಅದರಲ್ಲಿ ಎರಡು ಮಾತಿಲ್ಲ. 18 ವರ್ಷಗಳಿಂದ ಐಪಿಎಲ್ ಟ್ರೋಫಿಯನ್ನು ಗೆಲ್ಲಬೇಕು ಎಂದು ಕನಸು ಕಾಣುತ್ತಿದ್ದವು ಆ ಎರಡು ತಂಡಗಳು. ಈ ಹೋರಾಟವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಅದಕ್ಕೆ ಕಾರಣ ಒನ್ ಆಂಡ್ ಒನ್ಲಿ ವಿರಾಟ್ ಕೊಹ್ಲಿ. ಪಂದ್ಯ ಗೆಲ್ಲಲು ಆರ್ಸಿಬಿಗೆ ಎಷ್ಟು ಟೆನ್ಷನ್ ಇತ್ತೋ ಗೊತ್ತಿಲ್ಲ. ಅದಕ್ಕಿಂತ ಜಾಸ್ತಿ ಆರ್ಸಿಬಿ ಅಭಿಮಾನಿಗಳಿಗೆ ಒತ್ತಡ, ಆತಂಕವಿತ್ತು. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಪ್ರತಿ ಬಾರಿ ಕಪ್ ನಮ್ದೆ.. ನಿರಾಸೆ ಅನುಭವಿಸಿದಾಗ ಮುಂದಿನ ಸಲ ಕಪ್ ನಮ್ದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದ ಆರ್ಸಿಬಿ ಅಭಿಮಾನಿಗಳು, ಈ ಬಾರಿ ಕಪ್ ನಮ್ದು ಎಂದು ಎದೆತಟ್ಟಿ ಬಿಗುಮಾನದಿಂದ ಹೇಳುವ ಹಾಗಾಯ್ತು. ಇಲ್ಲಿ ಪಿಬಿಕೆಎಸ್ ವಿರುದ್ಧ ಬರೀ ಆರ್ಸಿಬಿ ಗೆದ್ದಿರುವುದಲ್ಲ..ಬದಲಾಗಿ ಗೆದ್ದಿರುವುದು ಆರ್ಸಿಬಿ ಅಭಿಮಾನಿಗಳು.
ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿಗೆ ಎದುರಾಳಿ ತಂಡಕ್ಕಿಂತ ಆರ್ಸಿಬಿ ಅಭಿಮಾನಿಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿರುತ್ತಿತ್ತು. . ಪ್ರತಿ ಬಾರಿ ಎಡವುತ್ತಿದ್ದ ಆರ್ಸಿಬಿ ಈ ಬಾರಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಲಿಷ್ಠ ತಂಡವನ್ನು ಕಟ್ಟಿತ್ತು. ಮೊದ ಮೊದಲು ಇದೇನೂ ತಂಡ ಅಂತ ಅಂದುಕೊಂಡವರ ನಿರೀಕ್ಷೆಗಳನ್ನು ಹುಸಿಗೊಳಿಸಿತ್ತು. ಪಂದ್ಯ ಗೆಲ್ಲಲು ಬ್ಯಾಟ್ಸ್ಮೆನ್ಗಳು, ಆಲ್ ರೌಂಡರ್ಗಳು ಇದ್ರೆ ಸಾಕಾಗಲ್ಲ. ಜೊತೆಗೆ ಮ್ಯಾಚ್ ವಿನ್ನಿಂಗ್ ಬೌಲರ್ಗಳು ಬೇಕು ಎಂಬುದು ಕೊನೆಗೂ ಮನವರಿಕೆ ಆಗಿತ್ತು. ಹೀಗಾಗಿಯೇ ಬಲಿಷ್ಠ ತಂಡವನ್ನು ಕಟ್ಟಿದ್ದಲ್ಲದೆ, ಸಂಘಟಿತ ಆಟವನ್ನು ಪ್ರದರ್ಶಿಸಿದ್ದ ಆರ್ಸಿಬಿ ಕೊನೆಗೂ ಐಪಿಎಲ್ ಟ್ರೋಫಿಯನ್ನು ಅಧಿಕಾರಯುತವಾಗಿಯೇ ಕೈವಶ ಮಾಡಿಕೊಂಡಿತ್ತು.
ಐಪಿಎಲ್ನ ಚೋಕಸ್ರ್ ತಂಡ ಎಂದೇ ಬಿಂಬಿತವಾಗಿದ್ದ ಆರ್ಸಿಬಿ ತಂಡವನ್ನು ಚಾಂಪಿಯನ್ಪಟ್ಟಕ್ಕೇರಿಸಿದ್ದು ಹೆಡ್ ಕೋಚ್ ಆಂಡಿ ಫ್ಲವರ್. ಈ ಬಾರಿ ಆರ್ಸಿಬಿ ಬರೀ ಫ್ಲವರ್ ಅಲ್ಲ.. ಫೈಯರ್ ಅಂತ ಸಾಬೀತುಪಡಿಸಿತ್ತು. ಹಾಗೇ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಹಾಗೂ ಬೌಲಿಂಗ್ ಕೋಚ್ ಓಂಕಾರ್ ಸಾಲ್ವಿಯ ಪರಿಶ್ರಮ ಕೂಡ ಇದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಎಂಬಂತೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಮೆಂಟರ್ ಕಮ್ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್. ಹರಾಜಿನಲ್ಲಿ ಇದೇ ಆಟಗಾರರು ಬೇಕು ಎಂದು ಪಟ್ಟು ಹಿಡಿದು ಚಾಂಪಿಯನ್ ತಂಡ ಕಟ್ಟಿದ್ದ ಶ್ರೇಯ ಡಿಕೆ ಸಾಹೇಬನಿಗೆ ಸಲ್ಲುತ್ತದೆ.
ಅಂದ ಹಾಗೇ ಈ ಬಾರಿಯ ಐಪಿಎಲ್ನಲ್ಲಿ 18ರ ನಂಟು ಆರ್ಸಿಬಿಯ ಗ್ರಹಗತಿಯನ್ನೇ ಬದಲಾಯಿಸಿತ್ತು. ಕೊಹ್ಲಿ ಜೆರ್ಸಿ ನಂಬರ್ 18, 18ನೇ ಆವೃತ್ತಿಯ ಐಪಿಎಲ್.. ಫೈನಲ್ ಮ್ಯಾಚ್ನ ಎಲ್ಲಾ ನಂಬರ್ಗಳನ್ನು ಕೂಡಿಸಿದಾಗ ಬರೋ ಸಂಖ್ಯೆಯೂ 18. ಹೀಗಾಗಿ 18ರ ನಂಟು ಆರ್ಸಿಬಿ ಮಡಿಲಿಗೆ ಐಪಿಎಲ್ ಟ್ರೋಫಿಯ ಗಂಟು ಬೀಳುತ್ತೆ ಎಂಬ ಬಲವಾದ ನಂಬಿಕೆಯೂ ಇತ್ತು. ಅದಕ್ಕೆ ತಕ್ಕಂತೆ ಬಲಿಷ್ಠ ಪಿಬಿಕೆಎಸ್ ತಂಡವನ್ನು ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿ ಕೈ ಹಿಡಿದಾಗ ಆರ್ಸಿಬಿ ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮವನ್ನು ವರ್ಣಿಸಲು ಅಸಾಧ್ಯ.
ಹೌದು, ಪಾಂಡವರ ವನವಾಸ 12 ವರ್ಷ.. ಶ್ರೀರಾಮನ ವನವಾಸ 14 ವರ್ಷ.. ಹಾಗೇ, 12, 1 4 ವರ್ಷಗಳ ವನವಾಸ ಮುಗಿಸಿದ್ರೂ ಆರ್ಸಿಬಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ರೆ ಈಗ ಕಾಲ, ಸಮಯ ಬದಲಾಗಿದೆ. ಮಹಾಭಾರತ ಯುದ್ಧ ನಡೆದಿದ್ದು 18 ದಿನ.. ಅದೇ ರೀತಿ 18 ವರ್ಷಗಳ ಬಳಿಕ ಐಪಿಎಲ್ ಮಹಾಭಾರತವನ್ನು ಆರ್ಸಿಬಿ ಗೆದ್ದು ಬೀಗಿದೆ. 2011ರ ವಿಶ್ವಕಪ್ನಲ್ಲಿ ಧೋನಿಗೆ ಸಾರಥಿಯಾಗಿದ್ದ ಸಚಿನ್ನಂತೆ, ಈ ಬಾರಿಯ ಐಪಿಎಲ್ನಲ್ಲಿ ರಜತ್ಗೆ ಸಾರಥಿಯಾಗಿದ್ದವರು ವಿರಾಟ್ ಕೊಹ್ಲಿ. ಐಪಿಎಲ್ ಬ್ಯಾಟಲ್ನಲ್ಲಿ ಹಿನ್ನಡೆ, ಮುನ್ನಡೆಯ ನಡುವೆಯೂ ಅಂತಿಮ ಕದನದಲ್ಲಿ ಆರ್ಸಿಬಿ ಗೆಲುವು ದಾಖಲಿಸಿ ಹೊಸ ಅಧ್ಯಾಯವನ್ನು ಬರೆದಿದೆ.
ಹಾಗೇ ನೋಡಿದ್ರೆ ರಜತ್ ಪಟೀದಾರ್ಗೆ ಆರ್ಸಿಬಿ ನಾಯಕತ್ವ ಕೊಟ್ಟಾಗ ಆರ್ಸಿಬಿ ಅಭಿಮಾನಿಗಳು ಕೂಡ ಚಕಿತಗೊಂಡಿದ್ದರು. ಈ ಬಾರಿಯೂ ಕಪ್ ನಮ್ದಲ್ಲ.. ಮುಂದಿನ ಸಲ ಕಪ್ ನಮ್ದು ಅಂತ ಹೇಳುತ್ತಿದ್ದರು. ಆದ್ರೆ ಕೂಲ್ ಆಗಿಯೇ ತಂಡವನ್ನು ಮುನ್ನಡೆಸಿದ್ದ ರಜತ್ ಪಟೀದಾರ್ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು. ತಂಡ ಎಷ್ಟೇ ಒತ್ತಡದಲ್ಲಿ ಇರಲಿ, ತಾಳ್ಮೆಯಿಂದಲೇ ಆಟಗಾರರನ್ನು ಹುರಿದುಂಬಿಸುತ್ತಾ ಮುನ್ನಡೆಸಿದ್ದ ರಜತ್ ಪಟೀದಾರ್ ಆರ್ಸಿಬಿಯ ಚಾಣಕ್ಯ ನಾಯಕನಾಗಿ ಹೊರಹೊಮ್ಮಿರುವುದು ವಿಶೇಷ.
ಇನ್ನು ಆರ್ಸಿಬಿ ಅಭಿಮಾನಿಗಳ ಬಗ್ಗೆ ಹೇಳೋದಾದ್ರೆ ಏನು ಹೇಳಬೇಕು ಅಂತನೇ ಗೊತ್ತಾಗುತ್ತಿಲ್ಲ. ಬಹುಶಃ ಟೀಮ್ ಇಂಡಿಯಾದ ಅಭಿಮಾನಿಗಳನ್ನು ಸಹಿಸಿಕೊಳ್ಳಬಹುದು.. ಮೆಸ್ಸಿ ಅಭಿಮಾನಿಗಳ ಅತಿರೇಕವನ್ನು ಅರಗಿಸಿಕೊಳ್ಳಬಹುದು.. ಕ್ರಿಸ್ಟಿಯಾನೋ ರೋನಾಲ್ಡೋ ಅಭಿಮಾನಿಗಳ ಅಭಿಮಾನವನ್ನು ಅರಿತುಕೊಳ್ಳಬಹುದು.. ಆದ್ರೆ ಆರ್ಸಿಬಿ ಅಭಿಮಾನಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆಗುವುದೇ ಇಲ್ಲ. ಈ ರೀತಿಯ ಅಭಿಮಾನಿಗಳೂ ಇದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯನೇ ಇಲ್ಲ. ಒಂದಲ್ಲ ಎರಡಲ್ಲ..ಬರೋಬ್ಬರಿ 18 ವರ್ಷ. ಗೆದ್ರೂ ಸೋತ್ರೂ ನೆಕ್ಷ್ಟ್ ಮ್ಯಾಚ್ ನೋಡೋಣ.. ಆರ್ಸಿಬಿ ಗೆದ್ದೇ ಗೆಲ್ಲುತ್ತೆ..ಮುಂದಿನ ಸಲ ಕಪ್ ನಮ್ದೇ.. ಈ ಬಾರಿ ಕಪ್ ನಮ್ದಲ್ಲ ಅಲ್ಲ ಅಂತ ಸಮಾಧಾನ, ತಾಳ್ಮೆಯಿಂದ ಕಾಯುತ್ತಿದ್ದ ಆಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ತಂಡವನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
ಒಂದಂತೂ ಸತ್ಯ.. ಇನ್ನೂ ಮುಂದೆ ವಿರಾಟ್ ಕೊಹ್ಲಿ ಮಗುವಿನಂತೆ ನಿದ್ದೆ ಮಾಡ್ತಾರೆ. ಮನಸಲ್ಲಿ ಯಾವುದೇ ಕೊರಗಿಲ್ಲ. ಕ್ರಿಕೆಟ್ ಬದುಕಿನಲ್ಲಿ ಅಂದುಕೊಂಡಿರುವುದನ್ನು ಸಾಧಿಸಿದ್ದೇನೆ ಎಂಬ ತೃಪ್ತಿ ಕೊಹ್ಲಿಗಿದೆ. ಇಷ್ಟು ದಿನ ತನ್ನ ಹೆಸರಿನಲ್ಲಿ ಐಪಿಎಲ್ ಟ್ರೋಫಿ ಇಲ್ಲ ಎಂಬುದು ಅವರನ್ನು ನಿದ್ದೆಯಲ್ಲೂ ಕಾಡುತ್ತಿತ್ತು. ಕೊನೆಗೂ ಬದ್ಧತೆ, ಕಮಿಂಟ್ಮೆಂಟ್ ಹಾಗೂ ಆರ್ಸಿಬಿ ತಂಡದ ಮೇಲಿನ ಪ್ರೀತಿಗೆ ಐಪಿಎಲ್ ಟ್ರೋಫಿ ಕೂಡ ಒಲಿದು ಬಂದಿದೆ.
ವಿಶ್ವ ಕ್ರಿಕೆಟ್ನ ಅಪ್ರತಿಮ ಸಾಧಕ, ಭಾರತದ ಹೆಮ್ಮೆಯ ಕ್ರಿಕೆಟಿಗ ದೆಹಲಿಯ ಸುಪುತ್ರ.. ಬೆಂಗಳೂರಿನ ದತ್ತುಪುತ್ರ, ಕರ್ನಾಟಕದ ಅಳಿಯ ವಿರಾಟ್ ಕೊಹ್ಲಿಯೇ ಅದೃಷ್ಟವಂತ. ಇಲ್ಲದೇ ಇರುತ್ತಿದ್ರೆ ಭಾಷೆ, ಗಡಿ, ರಾಜ್ಯವನ್ನು ದಾಟಿ ಇಷ್ಟೊಂದು ಅಭಿಮಾನ, ಪ್ರೀತಿಯನ್ನು ಪಡೆಯೋದಕ್ಕೆ ಹೇಗೆ ಸಾಧ್ಯ..? ಅಭಿಮಾನಿಗಳ ಕಣ್ಮನಿಯಾಗಿ, ವಿರಾಟ್ಗೋಸ್ಕರ ಟ್ರೋಫಿ ಗೆಲ್ಲಲೇಬೇಕು ಎಂಬ ಹಠ, ಅಭಿಲಾಸೆ ಹೇಗೆ ಬರುತ್ತೆ ಹೇಳಿ..? ವಿರಾಟ್, ವಿಶ್ವಕ್ರಿಕೆಟ್ನ ಚೇಸಿಂಗ್ ಗಾಡ್.. ಟೀಮ್ ಇಂಡಿಯಾದ ಜೂನಿಂiÀiರ್ ಮಾಸ್ಟರ್. ಆರ್ಸಿಬಿಯ ವಜ್ರಕಾಯ…!
ಸನತ್ ರೈ








