ಮೈಸೂರು: ಕುರುಬ ಸಮುದಾಯವು ಸತ್ಯ ಮತ್ತು ನಿಷ್ಠೆಗೆ ಹೆಸರಾದದ್ದು. ಪುಣ್ಯಕೋಟಿಯಂತಹ ಸತ್ಯಸಂಧ ಪರಂಪರೆ ನಮ್ಮದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿಗೆ ತಪ್ಪುವ ಮೂಲಕ ಇಡೀ ಸಮುದಾಯದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಗೊಂದಲ ಮತ್ತು ಸಿದ್ದರಾಮಯ್ಯ ಅವರ ನಡೆವಳಿಕೆಯ ಬಗ್ಗೆ ಹರಿಹಾಯ್ದರು. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲೇಬೇಕು ಎಂದು ಆಗ್ರಹಿಸಿರುತ್ತಾರೆ.
ಪುಣ್ಯಕೋಟಿ ಕಥೆಯ ಉಲ್ಲೇಖ ಮತ್ತು ವಾಗ್ದಾಳಿ
ಧರಣಿ ಮಂಡಲ ಮಧ್ಯದೊಳಗೆ ಎಂಬ ಜನಪ್ರಿಯ ಜನಪದ ಕವಿತೆಯನ್ನು ಉಲ್ಲೇಖಿಸಿದ ವಿಶ್ವನಾಥ್, ಹಸಿವು ಎಂದು ಬಂದ ವ್ಯಾಘ್ರಕ್ಕೆ ಮಾತು ಕೊಟ್ಟು, ಆಡಿದ ಮಾತಿನಂತೆ ನಡೆದುಕೊಂಡ ಗೋವಿನ ಸಂಸ್ಕೃತಿ ನಮ್ಮದು. ನಾವು ಕುರುಬ ಸಮಾಜದವರು, ಹಾಲು ಕೆಟ್ಟರೂ ಕುರುಬ ಸಮುದಾಯ ಕೆಡುವುದಿಲ್ಲ. ಆದರೆ ಸಿದ್ದರಾಮಯ್ಯ ಅವರು ವಚನ ಭ್ರಷ್ಟರಾಗುವ ಮೂಲಕ ಕುರುಬ ಸಮಾಜದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಹಂಚಿಕೆ ಒಪ್ಪಂದ ಮುರಿದರೆ ಕಾಂಗ್ರೆಸ್ ಧೂಳೀಪಟ
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಆಣೆ ಪ್ರಮಾಣ ಮಾಡಲಾಗಿತ್ತು. ಅಂದು ನಡೆದ ಮಾತುಕತೆಯ ಬಗ್ಗೆ ಅಲ್ಲಿ ಉಪಸ್ಥಿತರಿದ್ದ ಹಿರಿಯ ನಾಯಕರು ಮೌನ ಮುರಿಯಬೇಕು. ಒಂದು ವೇಳೆ ಒಪ್ಪಂದದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಲಿದೆ ಎಂದು ಹಳ್ಳಿಹಕ್ಕಿ ಭವಿಷ್ಯ ನುಡಿದರು.
ಜೆಡಿಎಸ್ ನಿಂದ ಬಂದವರಿಗೆ ಆಶ್ರಯ ನೀಡಿದ ಪಕ್ಷಕ್ಕೆ ದ್ರೋಹ?
ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ ಅವರಿಗೆ ರಾಜಕೀಯ ಮರುಜೀವ ಮತ್ತು ಆಶ್ರಯ ನೀಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಸಿದ್ದರಾಮಯ್ಯ ಅವರು ಅದೇ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ವಚನ ಭ್ರಷ್ಟರಾದವರು ಯಾರೂ ಇತಿಹಾಸದಲ್ಲಿ ಉಳಿದಿಲ್ಲ ಎಂಬ ಸತ್ಯವನ್ನು ಅವರು ಮರೆಯಬಾರದು ಎಂದು ಕಿಡಿಕಾರಿದರು.
ಅಭಿವೃದ್ಧಿ ಶೂನ್ಯ, ಸಾಲದ ಶೂಲ
ರಾಜ್ಯದಲ್ಲಿ ದಿನ ಬೆಳಗಾದರೆ ಕೇವಲ ಅಧಿಕಾರ ಹಂಚಿಕೆ ಮತ್ತು ಸಿಎಂ ಬದಲಾವಣೆಯ ಚರ್ಚೆಗಳೇ ನಡೆಯುತ್ತಿವೆ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಈ ಗೊಂದಲ ನಿವಾರಿಸಲು ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
ಇದೇ ವೇಳೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಟೀಕಿಸಿದ ಅವರು, ಪ್ರಧಾನಿ ಮೋದಿ ಅವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬರೀ ಬೊಗಳೆ ಬಿಡುತ್ತಿದ್ದಾರೆ. ಅತಿಯಾದ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಹಣಕಾಸು ಸಚಿವರಾಗಿರುವ ಅವರಿಗೆ ಹಣದ ಮೌಲ್ಯವೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರ ಮದ್ಯದ ಬೆಲೆಯನ್ನು ವಿಪರೀತವಾಗಿ ಏರಿಸಿದೆ. ದುಬಾರಿ ಮದ್ಯವನ್ನು ಕೊಳ್ಳಲಾಗದ ಯುವಕರು ಗಾಂಜಾದಂತಹ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಯುವ ಸಮುದಾಯ ಹಾದಿ ತಪ್ಪುತ್ತಿದೆ ಎಂದು ವಿಶ್ವನಾಥ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.








