ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ..,
ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ “ದಾಯಾದಿಗಳ ಕದನ” ಭಾಗ-9ರ ರಿಲೀಸ್ಗೆÀ ಕ್ಷಣಗಣನೇ ಶುರುವಾಗಿದೆ.
ಶ್ರೀಲಂಕಾದ ಪ್ರೇಮದಾಸ ಮೈದಾನದಲ್ಲಿ ಪ್ರದರ್ಶನಗೊಳ್ಳಲಿರುವ ಈ ಮಹಾನಾಟಕÀವನ್ನು ಫೆಬ್ರವರಿ 15ರಂದು ರಾತ್ರಿ 7.30ರಿಂದ ನಿಮ್ಮ ಮನೆಯ ಟಿವಿ ಪರದೆಯ ಮೇಲೆ ವೀಕ್ಷಿಸಬಹುದು.. ಅಂದ ಹಾಗೇ, ನಿಮ್ಮ ಮನೆಯ ಟಿವಿಯಾಗಿರೋದರಿಂದ ಉಚಿತವಾಗಿ ನೋಡಬಹುದು. ಯಾಕಂದ್ರೆ ರಿಚಾರ್ಜ್, ಕೇಬಲ್ ಚಾರ್ಜ್ ಎಲ್ಲವನ್ನೂ ಈಗಾಗಲೇ ನೀವು ಕಟ್ಟಿರುತ್ತೀರಿ… ಹಾಗಾಗಿ ಹೆಚ್ಚುವರಿ ದುಡ್ಡು ಕಟ್ಟಬೇಕಾಗಿಲ್ಲ. ಆದ್ರೆ ಮಸ್ತಾಗಿ ಎಂಜಾಯ್ ಮಾಡ್ಕೊಂಡು ಪಂದ್ಯವನ್ನು ನೋಡಬೇಕಾದ್ರೆ ನೀವು ಎಲ್ಲಿ ಬೇಕಾದ್ರೂ, ಎಷ್ಟು ದುಡ್ಡು ಕೊಟ್ಟು ಬೇಕಾದ್ರೂ ವೀಕ್ಷಿಸಬಹುದು.
ಡೋಂಟ್ ವರಿ..! ಇಂಡಿಯಾ – ಪಾಕ್ ಮ್ಯಾಚ್ ಅಂದ್ರೆ ನೋಡದೇ ಇರೋಕಾಗುತ್ತಾ..?ಯಾಕಂದ್ರೆ ಅಷ್ಟೊಂದು ಹೈಫ್, ಅಷ್ಟೊಂದು ಭಾವನಾತ್ಮಕವಾದ ಎಮೋಷನಲ್ ಟಚ್ ನೀಡಿರುವ ಈ ಮಹಾ ನಾಟಕದ ಪಂದ್ಯದಿಂದ ಐಸಿಸಿ, ಬಿಸಿಸಿಐ, ಪಿಸಿಬಿ, ಲಂಕಾ ಕ್ರಿಕೆಟ್ ಮಂಡಳಿಗಳ ಬೊಕ್ಕಸಕ್ಕೆ ನೀರಿನಂತೆ ದುಡ್ಡು ಹರಿದು ಬರುತ್ತದೆ. ಆದ್ರೆ ಇದೆಲ್ಲಾ ಗೊತ್ತಿದ್ರೂ ನಾವು – ನೀವು ಪಂದ್ಯವನ್ನು ನೋಡಿ ಎಂಜಾಯ್ ಮಾಡ್ಕೊಂಡು, ಕೊನೆಗೆ ಬೈಕೊಂಡು, ಅವನು ಸರಿ ಆಡಿಲ್ಲ.. ಇವನು ಸರಿಯಾಗಿ ಪ್ಲ್ಯಾನ್ ಮಾಡ್ಕೊಂಡಿಲ್ಲ..ಛೀ.. ಥೂ ಅಂತ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕೊಂಡು, ಟೈಮ್ ವೇಸ್ಟ್ ಮಾಡೋ ಈ ಮಹಾ ಪಂದ್ಯ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿರುತ್ತಾರೆ.
ಹಾಗೇ ನೋಡಿದ್ರೆ ಈ ಪಂದ್ಯವನ್ನು ಯುದ್ದಕ್ಕಿಂತ ಭೀಕರವಾಗಿ ವೈಭವೀಕರಿಸಲಾಗುತ್ತಿದೆ. ಇಲ್ಲಿ ಸಿಡಿಗುಂಡುಗಳ ಶಬ್ದಕ್ಕಿಂತ ಹೆಚ್ಚಾಗಿ ಬ್ಯಾಟ್ ಚೆಂಡಿನ ಸಪ್ಪಳ ಜೋರಾಗಿರುತ್ತೆ ಅಂತ ಬಿಂಬಿಸಲಗುತ್ತದೆ.. ಅದಕ್ಕಿಂತ ಜಾಸ್ತಿ ನಾಲಗೆಯ ಮೇಲಿಂದ ಬರೋ ಮಾತುಗಳಿಗೆ ಕಡಿವಾಣ ಹಾಕೋಕೆ ಸಾಧ್ಯನೇ ಇಲ್ಲ. ಅಂಪೈರ್ ವೈಡ್, ನೋಬಾಲ್ ತೀರ್ಮಾನ ಕೊಟ್ರೂ ಅದಕ್ಕೊಂದು ಅಂತ್ಯ ಅಂತ ಇರುತ್ತೆ. ಆದ್ರೆ ಅಭಿಮಾನಿಗಳ ಕಮೆಂಟ್ಗೆ ಅಂತ್ಯವೇ ಇರೋಲ್ಲ..
ಪ್ರೀತಿಯ ಕ್ರಿಕೆಟ್ ಅಭಿಮಾನಿ ಮಿತ್ರರೇ..! ನಾನೂ ಒಬ್ಬ ಕ್ರೀಡಾಪಟು.. ಕ್ರೀಡಾ ಪತ್ರಕರ್ತ.. ನಾನು ಹೇಳಬಾರದು.. ಬರೆಯಬಾರದು..ಆದ್ರೂ ಬರೆಯಲೇಬೇಕು.. ಹೇಳಲೇಬೇಕು.. ಇದು ನನ್ನ ಮನದಾಳದ ಅನಿಸಿಕೆ..! ನನ್ನ ಅಭಿಪ್ರಾಯ ತಪ್ಪಾಗಿದ್ರೆ ಟೀಕೆ ಮಾಡಿ.. ಕಮೆಂಟ್ ಮಾಡಿ.. ಆದ್ರೆ ಪದಬಳಕೆಯ ಮೇಲೆ ಮಾತ್ರ ನಿಗಾ ಇರಲಿ..! ಇಲ್ಲಿ ಯಾರನ್ನೂ ಒಲೈಸುವ ಅಥವಾ ಟೀಕೆ ಮಾಡೋ ಉದ್ದೇಶ, ಗುರಿ ನನ್ನದಲ್ಲ. ಕಾಂಗ್ರೆಸ್ – ಬಿಜೆಪಿ.. ಹಿಂದೂ ಮುಸ್ಲಿಂ ನನಗೆ ಯಾವುದೂ ಅನ್ವಯ ಆಗಲ್ಲ. ಆಟವನ್ನು ಆಟವನ್ನಾಗಿ ನೋಡಿಕೊಂಡು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ..!
ಸ್ನೇಹಿತರೇ..ಭಾರತ – ಪಾಕ್ ಕ್ರಿಕೆಟ್ ಪಂದ್ಯ ಅಂದ್ರೆ ಅದು ಬರೀ ಆಟವಲ್ಲ. ಹಾಗೇ ಮನರಂಜನಯೆಯೂ ಅಲ್ಲ. ಅದೆಲ್ಲಾ ನೆಪ ಅಷ್ಟೇ.. ಆದ್ರೆ ಇದೊಂದು ಜೂಜು.. ದಂಧೆ..ಒಂದು ರೀತಿಯಲ್ಲಿ ಕ್ರಿಕೆಟ್ ಮಾಫಿಯಾ.. ಉಭಯ ದೇಶಗಳ ನಡುವಿನ ಜನರನ್ನು ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಿಸುವಂತಹ ಪಂದ್ಯ. ಇಲ್ಲಿ ಯಾರು ಗೆಲ್ಲಲಿ..ಯಾರು ಸೋಲಲಿ.. ಒಂದೆರಡು ದಿನ ಚರ್ಚೆಯಾಗುವಂತಹ ಸುದ್ದಿ ಅಷ್ಟೇ..! ಆಟ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ ಅಂತ ಎಲ್ಲವೂ ಮರೆತು ಹೋಗುತ್ತೆ..!
ಆದ್ರೆ ನೆನಪಿಡಿ.. ಕ್ರಿಕೆಟ್ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಕೆರಳಿಸಿ, ರೊಚ್ಚಿಗೆಬ್ಬಿಸಿ ಅಭಿಮಾನದ ಅತಿರೇಕವನ್ನು ದುಡ್ಡನ್ನಾಗಿ ಪರಿವರ್ತಿಸಿಕೊಂಡು ಹುಸಿ ನಗೆ ಬೀರುತ್ತಿರುವುದು ಮಾತ್ರ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ.
ಹೌದು, ಭಾರತ – ಪಾಕಿಸ್ತಾನದ ಕ್ರಿಕೆಟ್ ಪಂದ್ಯಕ್ಕೆ ಇನ್ನಿಲ್ಲದ ರೋಚಕತೆ ಸೃಷ್ಟಿಸುವುದು ಎಲ್ಲವೂ ಪಕ್ಕಾ ಪ್ಲ್ಯಾನ್. ಹಾಗೇ ನೋಡಿದ್ರೆ ಉಭಯ ತಂಡಗಳ ಆಟಗಾರರಿಗೆ ಇದೊಂದು ಮಾಮೂಲಿ ಪಂದ್ಯ. ಸೋತ್ರೂ – ಗೆದ್ರೂ ದುಡ್ಡು ಬಂದೇ ಬರುತ್ತೆ. ಆದ್ರೆ ಗೆಲ್ಲಲೇಬೇಕು ಎಂಬ ಒತ್ತಡವಂತೂ ಇದ್ದೇ ಇರುತ್ತೆ.. ಇದರಲ್ಲಿ ಎರಡು ಮಾತಿಲ್ಲ. ಆದ್ರೂ ಇದು ಎರಡು ಮೂರು ದಿನಗಳ ನೋವು, ಗೆಲುವಿನ ಸಂಭ್ರಮವಷ್ಟೇ. ಆದ್ರೆ ಅಲ್ಲಿ ನಿಜವಾಗಿಯೂ ಹರಕೆಯ ಕುರಿಯಾಗೋದು ಮಾತ್ರ ಕ್ರಿಕೆಟ್ ಅಭಿಮಾನಿಗಳು.
ಒಂದಂತೂ ಸತ್ಯ.. ಇದು ಸದಾ ಕಾಡುವ ಪ್ರಶ್ನೆ ಅಂದ್ರೆ, ಐಸಿಸಿಯ ಟೂರ್ನಿಗಳಲ್ಲಿ ಇಂಡೋ ಪಾಕ್ ಪಂದ್ಯಕ್ಕೆ ಯಾಕೆ ಅಷ್ಟೊಂದು ಮಹತ್ವ..? ಯಾಕೆ ಕ್ರಿಕೆಟ್ ಜಗತ್ತು ಭಾರತ – ಪಾಕ್ ಪಂದ್ಯಕ್ಕೆ ಇನ್ನಿಲ್ಲದ ಮಹತ್ವ ನೀಡುತ್ತೆ ಅನ್ನೋ ಪ್ರಶ್ನೆಗೆ ಒಂದೇ ವಾಕ್ಯದ ಉತ್ತರ ಅಂದ್ರೆ ಅದು ದುಡ್ಡು..! ದಾಯಾದಿಗಳ ಮುನಿಸು ಕ್ರಿಕೆಟ್ ಜಗತ್ತಿಗೆ ಕಾಸು ಎಂಬುಂತಾಗಿದೆ. ಒಂಥರಾ ಕೋಳಿ ಅಂಕದ ಹಾಗೇ..!
ನಿಜ, ಹೇಳಬೇಕು ಅಂದ್ರೆ, 2026ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ, ಬಿಸಿಸಿಐ, ಪಿಸಿಬಿ ಮಾಡಿರೋದು ಕಪಟ ನಾಟಕ. ಕ್ರಿಕೆಟ್ ಅಭಿಮಾನಿಗಳ ಭಾವನೆಗಳ ಜೊತೆ ಚೆಲ್ಲಾಟವಾಡಿಕೊಂಡು ಆಟವಾಡುತ್ತಿದ್ದಾರೆ. ಇಲ್ಲಿ ಅಭಿಮಾನಿಗಳ ಭಾವನೆ, ಪ್ರೀತಿ, ಅಭಿಮಾನಕ್ಕಿಂತ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿಗೆ ದುಡ್ಡೇ ಮಹತ್ವವಾಗಿದೆ.
ಹಾಗೇ ನೋಡಿದ್ರೆ ಪಿಸಿಬಿ ಮಾಡಿರೋ ಕಿತಾಪತಿಗೆ ಟೂರ್ನಿಯಿಂದಲೇ ಕಿಕ್ ಔಟ್ ಮಾಡೋ ಪವರ್ ಐಸಿಸಿಗಿತ್ತು. ಬಿಸಿಸಿಐಗೂ ಇತ್ತು. ಆದ್ರೆ ಅಂತಹ ಕಠಿಣ ನಿರ್ಧಾರವನ್ನೂ ಬಿಸಿಸಿಐ ತೆಗೆದುಕೊಂಡಿಲ್ಲ. ಐಸಿಸಿಯೂ ತೆಗೆದುಕೊಂಡಿಲ್ಲ. ಈ ಹಿಂದೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಈಗ ಬಾಂಗ್ಲಾದೇಶದ ವಿರುದ್ಧ ಕೈಗೊಂಡ ಕಠಿಣ ಕ್ರಮವನ್ನು ಪಾಕ್ ಮೇಲೂ ಮಾಡಬಹುದಿತ್ತು. ಕೇವಲ ಬಾಂಗ್ಲಾ ದೇಶ ಭಾರತದಲ್ಲಿ ಆಡಲ್ಲ ಅಂದಿರುವುದಕ್ಕೆ ಐಪಿಎಲ್ನಿಂದ ಬಾಂಗ್ಲಾ ಆಟಗಾರನನ್ನು ಬಿಸಿಸಿಐ ಕೈಬಿಟ್ಟಿತ್ತು. ಆದ್ರೆ ಕುಪಿತಗೊಂಡ ಪಾಕ್ ಸರ್ಕಾರ, ಭಾರತದ ವಿರುದ್ದದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಬೆದರಿಕೆ ಒಡ್ಡಿತ್ತು. ಅದೇ ಶ್ರೀಲಂಕಾ, ಅಫಘಾನಿಸ್ತಾನ ಅಥವಾ ಇನ್ನಿತರ ಸಣ್ಣ ರಾಷ್ಟ್ರಗಳ ತಂಡಗಳು ಈ ರೀತಿ ಬೆದರಿಕೆ ಹಾಕಿದ್ರೆ ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿತ್ತು. ಬಿಸಿಸಿಐ ಕೂಡ ಜೈ ಅನ್ನುತ್ತಿತ್ತು.
ಆದ್ರೆ ಪಾಕ್ ಕ್ರಿಕೆಟ್ ತಂಡ, ಪಾಕ್ ಸರ್ಕಾರದ ಅಣತಿಯಂತೆ ದರ್ಪ ತೋರಿಸಿದ್ರೂ ಐಸಿಸಿ, ಬಿಸಿಸಿಐ ಸೈಲೆಂಟ್ ಆಗಿರೋದಕ್ಕೆ ಕಾರಣ ಝಣ ಝಣ ಕಾಂಚಾಣಾದ ಸದ್ದು. ಹೌದು, ದುಡ್ಡಿನ ಮುಂದೆ ದೇಶಪ್ರೇಮ, ಭಾವನೆಗಳಿಗೆ ಬೆಲೆ ಇಲ್ಲ ಎಂಬುದು ಇಂಡೋ ಪಾಕ್ ಪಂದ್ಯದಿಂದ ಸಾಬೀತಾಗುತ್ತಿದೆ. ಉಭಯ ದೇಶಗಳ ಆಟಗಾರರು ಹ್ಯಾಂಡ್ ಶೇಕ್ ಮಾಡದಿದ್ರೂ ಪರವಾಗಿಲ್ಲ. ಪರಸ್ಪರ ಮಾತಕತೆ ನಡೆಸದಿದ್ರೂ ಚಿಂತೆ ಇಲ್ಲ.. ಜಸ್ಟ್ ಆಟವಾಡಿದ್ರೆ ಸಾಕು.. ದುಡ್ಡು ತಾನಾಗಿಯೇ ಬರುತ್ತೆ. ಆದ್ರೆ ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಏನು ಬರುತ್ತೆ..? ಏನು ಸಿಗುತ್ತೆ..?
ಒಟ್ಟಿನಲ್ಲಿ ರೆಡಿಯಾಗಿರುವ ಸ್ಕ್ರಿಪ್ಟ್, ಚಿತ್ರಕಥೆಯ ಈ ನಾಟಕದ ಪಂದ್ಯವನ್ನು ನನ್ನನ್ನು ಸೇರಿ ನೋಡುವಂತಹ ನೈಜ ಕ್ರಿಕೆಟ್ ಅಭಿಮಾನಿಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ವಿದ್ಯುತ್ ದೀಪದ ಅಲಂಕಾರದಲ್ಲಿ, ಸಿಡಿ ಮದ್ದಿನ ಸದ್ದಿನಲ್ಲಿ, ಸಂಗೀತದ ಝೇಂಕಾರದಲ್ಲಿ, ಬ್ಯಾಟ್ ಚೆಂಡಿನ ಸಪ್ಪಳದಲ್ಲಿ ನಡೆಯುವ ಈ ಮಹೋನ್ನತ ಕಪಟ ನಾಟಕವನ್ನು ನೋಡಲು ಮರೆಯದಿರಿ..ನೋಡದೇ ನಿರಾಸೆಯಾಗದಿರಿ.. ಯಾಕಂದ್ರೆ ಈ ಪಂದ್ಯವನ್ನು ನೋಡಬೇಡಿ ಅಂದ್ರೂ ನೋಡಿಯೇ ನೋಡುತ್ತೇವೆ.. ಯಾಕಂದ್ರೆ ಇದು ದಾಯಾದಿಗಳ ಕದನ. ಬದ್ಧವೈರಿಗಳ ನಡುವಿನ ಮಹಾಯುದ್ಧ.. ಅಂದ ಮೇಲೆ ನೋಡದೇ ಇರೋಕೆ ಆಗುತ್ತಾ.. ? ಏನೂ ಮಾಡೋದು, ಈ ಕ್ರಿಕೆಟ್ ಹುಚ್ಚು ಪ್ರೀತಿ
ಮಹಾಯುದ್ಧ.. ಅಂದ ಮೇಲೆ ನೋಡದೇ ಇರೋಕೆ ಆಗುತ್ತಾ.. ? ಏನೂ ಮಾಡೋದು ಈ ಕ್ರಿಕೆಟ್ ಹುಚ್ಚು ಅನ್ನೋ ಪ್ರೀತಿ ಮಾಯೆ ಇದೆಯಲ್ವಾ..? ಅದು ಒಂಥರಾ ಬಿಟ್ಟರೂ ಬಿಡದ ಮಾಯೇ..!
ಸನತ್ ರೈ








