ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಆರೋಪಗಳನ್ನು ಹಬ್ಬಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಸಂಘ (KMF) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಚರ್ಮ ವೈದ್ಯೆ ಡಾ. ಶರಣ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು KMF ಮುಂದಾಗಿದೆ.
ನಂದಿನಿ ಉತ್ಪನ್ನಗಳ ಕುರಿತು ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ ಅಥವಾ ಪ್ರಮಾಣಿತ ಪ್ರಯೋಗಾಲಯದ ವರದಿ ಇಲ್ಲದೇ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು KMF ಆರೋಪಿಸಿದೆ. ಈ ವಿಷಯವಾಗಿ ಸೈಬರ್ ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದೆ ಎಂದು ತಿಳಿಸಿದೆ.
ನಂದಿನಿ ಬ್ರ್ಯಾಂಡ್ನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಯುತ್ತಿದೆ ಎಂಬ ಅನುಮಾನವನ್ನು KMF ವ್ಯಕ್ತಪಡಿಸಿದೆ. ಈ ರೀತಿಯ ತಪ್ಪು ಮಾಹಿತಿಯಿಂದ ರೈತರು, ಹಾಲು ಉತ್ಪಾದಕರು ಮತ್ತು ಗ್ರಾಹಕರಲ್ಲಿ ಅನಾವಶ್ಯಕ ಭೀತಿ ಉಂಟಾಗಬಹುದು ಎಂದು ಸಂಘ ಸ್ಪಷ್ಟಪಡಿಸಿದೆ.
ಸಂಸ್ಥೆ ತನ್ನ ಉತ್ಪನ್ನಗಳು ಎಲ್ಲಾ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂದು ಹೇಳಿ, ಜನರು ಸುಳ್ಳು ಮಾಹಿತಿ ನಂಬದೆ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದೆ.








