ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಬೀದಿ ನಾಯಿ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಕ್ಷದ ಹಿರಿಯ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಶಾಸಕರನ್ನು ಬೀದಿ ನಾಯಿಗಳಿಗೆ ಹೋಲಿಕೆ ಮಾಡಿದ್ದ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಹೇಳಿಕೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತೀಕ್ಷ್ಣವಾಗಿಯೇ ಪ್ರತ್ಯುತ್ತರ ನೀಡಿದ್ದು, ನಿಷ್ಠಾವಂತ ಕಾಂಗ್ರೆಸ್ಸಿಗರನ್ನು ನಿಯತ್ತಿನ ನಾಯಿಗಳಿಗೆ ಹೋಲಿಸಿ ಸಮರ್ಥಿಸಿಕೊಂಡಿದ್ದಾರೆ.
ನಾಯಿ ನಿಯತ್ತಿನ ಸಂಕೇತ ಎಂದ ಡಿಕೆ ಸುರೇಶ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ಸಚಿವ ಮಹಾದೇವಪ್ಪ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಪರೋಕ್ಷವಾಗಿಯೇ ಚಾಟಿ ಬೀಸಿದರು. ನಾಯಿ ಎಂಬ ಪ್ರಾಣಿ ನಿಯತ್ತಿಗೆ ಹೆಸರುವಾಸಿ. ಅದು ಬೀದಿ ನಾಯಿಯೇ ಆಗಿರಲಿ ಅಥವಾ ಮನೆಯಲ್ಲಿ ಸಾಕು ನಾಯಿಯೇ ಆಗಿರಲಿ, ಅನ್ನ ಹಾಕಿದ ಯಜಮಾನನಿಗೆ ಸದಾ ನಿಯತ್ತಿನಿಂದ ಇರುತ್ತದೆ ಎಂದು ಹೇಳಿದರು.
ಕಟ್ಟಾ ಕಾಂಗ್ರೆಸ್ಸಿಗರು ಯಾವತ್ತಿದ್ದರೂ ಪಕ್ಷಕ್ಕೆ ನಿಯತ್ತಿನ ನಾಯಿಗಳಂತೆ ಇರುತ್ತಾರೆ. ಅವರು ಬೀದಿ ನಾಯಿಗಳಲ್ಲ. ಯಜಮಾನ ತಮಗೆ ಅನ್ನ ಹಾಕುತ್ತಾನೆ, ನಮ್ಮನ್ನು ಸಾಕುತ್ತಾನೆ ಮತ್ತು ರಕ್ಷಣೆ ನೀಡುತ್ತಾನೆ ಎಂಬ ವಿಶ್ವಾಸದಿಂದ ನಾಯಿ ಆತನ ಋಣ ತೀರಿಸುತ್ತದೆ. ಅದೇ ರೀತಿ ಪಕ್ಷದ ಕಾರ್ಯಕರ್ತರು ನಾಯಕರಿಗೆ ನಿಷ್ಠರಾಗಿರುತ್ತಾರೆ ಎಂದು ಸುರೇಶ್ ಮಾರ್ಮಿಕವಾಗಿ ನುಡಿದರು. ಈ ಮೂಲಕ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರನ್ನು ಬೀದಿ ನಾಯಿಗಳೆಂದು ಕರೆದವರಿಗೆ ಖಡಕ್ ಸಂದೇಶ ರವಾನಿಸಿದರು.
ಸಚಿವರನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಶಾಸಕ ಶಿವಗಂಗಾ ಬಸವರಾಜ್
ಇದೇ ವಿಚಾರವಾಗಿ ಶಾಸಕ ಶಿವಗಂಗಾ ಬಸವರಾಜ್ ಕೂಡ ಸಚಿವ ಮಹಾದೇವಪ್ಪ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕರನ್ನು ಬೀದಿ ನಾಯಿಗೆ ಹೋಲಿಸಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಚಿವರ ತರ್ಕವನ್ನೇ ಪ್ರಶ್ನಿಸಿದ್ದಾರೆ.
ಎಲ್ಲಾ ಶಾಸಕರನ್ನು ಬೀದಿ ನಾಯಿ ಎಂದು ಕರೆಯುವುದಾದರೆ, ಮಹಾದೇವಪ್ಪ ಅವರು ಕೂಡ ಒಬ್ಬ ಶಾಸಕರೇ ಅಲ್ಲವೇ? ಹಾಗಿದ್ದ ಮೇಲೆ ಆ ಹೋಲಿಕೆ ಅವರಿಗೂ ಅನ್ವಯಿಸುವುದಿಲ್ಲವೇ? ಎಂದು ಬಸವರಾಜ್ ಪ್ರಶ್ನಿಸುವ ಮೂಲಕ ಸಚಿವರನ್ನು ಮುಜುಗರಕ್ಕೀಡು ಮಾಡಿದ್ದಾರೆ. ಒಬ್ಬ ಹಿರಿಯ ಸಚಿವರಾಗಿ, ಅನುಭವಿ ರಾಜಕಾರಣಿಯಾಗಿ ಅವರ ಬಾಯಲ್ಲಿ ಇಂತಹ ಕೀಳು ಮಟ್ಟದ ಪದಗಳು ಬರಬಾರದಿತ್ತು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಒಟ್ಟಾರೆಯಾಗಿ, ಕಾಂಗ್ರೆಸ್ ನಾಯಕರ ನಡುವಿನ ಈ ಶ್ವಾನ ಪುರಾಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತೊಮ್ಮೆ ಸ್ಫೋಟಗೊಂಡಂತಾಗಿದೆ.







