ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ, ಆಡಳಿತ ಪಕ್ಷದ ಶಾಸಕರ ಗುಂಪೊಂದು ದಿಢೀರ್ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಶಾಸಕರು ಸಾಮೂಹಿಕವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ತೆರಳಿರುವುದು ಕೇವಲ ಮೋಜಿನ ಪ್ರವಾಸವಲ್ಲ, ಬದಲಿಗೆ ಇದೊಂದು ಶಕ್ತಿ ಪ್ರದರ್ಶನದ ಭಾಗ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬೆಳವಣಿಗೆಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದ್ದು, ನಾಯಕರ ನಡುವಿನ ಶೀತಲ ಸಮರ ಬೀದಿಗೆ ಬರುವಂತಾಗಿದೆ.
ಶಕ್ತಿ ಪ್ರದರ್ಶನಕ್ಕೆ ವಿದೇಶಿ ನೆಲ ಅಖಾಡ
ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಕೂಗು ಜೋರಾಗಿರುವ ಸಂದರ್ಭದಲ್ಲೇ, ಸಿಎಂ ಆಪ್ತ ವಲಯದ ಶಾಸಕರು ವಿದೇಶಕ್ಕೆ ಹಾರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆದಾಗ, ಶಾಸಕಾಂಗ ಸಭೆಯಲ್ಲಿ ಸಂಖ್ಯಾಬಲವೇ ನಿರ್ಣಾಯಕವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ರೂಪಿಸಿದ ರಣತಂತ್ರ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಬಲ ಸಮುದಾಯಗಳ ಓಲೈಕೆ ಮತ್ತು ಹೈಕಮಾಂಡ್ ಇಕ್ಕಟ್ಟು
ಕಾಂಗ್ರೆಸ್ ಹೈಕಮಾಂಡ್ ಸದ್ಯದ ಮಟ್ಟಿಗೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಏಕಾಏಕಿ ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದ ಪ್ರಬಲ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕ ಹೈಕಮಾಂಡ್ಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಿಎಂ ಪಾಳಯ, ತೀರಾ ಇಕ್ಕಟ್ಟಿನ ಪರಿಸ್ಥಿತಿ ಬಂದರೆ ಶಾಸಕರ ಬಲಾಬಲ ಪ್ರದರ್ಶಿಸಿ ಮೇಲುಗೈ ಸಾಧಿಸಲು ಸಜ್ಜಾಗುತ್ತಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಪ್ರಾಯೋಜಕತ್ವದ ಬಗ್ಗೆ ಗಂಭೀರ ಆರೋಪ
ಶಾಸಕರು ಸ್ವಂತ ಖರ್ಚಿನಲ್ಲಿ ಪ್ರವಾಸ ಹೋಗಿದ್ದಾರೆ ಎಂದು ಬಿಂಬಿಸಲಾಗುತ್ತಿದ್ದರೂ, ತೆರೆಮರೆಯಲ್ಲಿ ಬೇರೆಯದ್ದೇ ಚರ್ಚೆಗಳು ನಡೆಯುತ್ತಿವೆ. ಈ ಪ್ರವಾಸಕ್ಕೆ ಪ್ರಮುಖ ಬಿಲ್ಡರ್ಗಳು ಪರೋಕ್ಷವಾಗಿ ಪ್ರಾಯೋಜಕತ್ವ ನೀಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಬಜೆಟ್ ಮಂಡನೆ ಮತ್ತು ಅಧಿಕಾರ ಹಂಚಿಕೆಯ ನಿರ್ಣಾಯಕ ಸಮಯದಲ್ಲಿ ಶಾಸಕರು ಗುಂಪುಗೂಡಿ ವಿದೇಶಕ್ಕೆ ತೆರಳಿರುವುದು ಪೂರ್ವನಿಯೋಜಿತ ಸಂಚು ಎಂದು ಡಿಕೆಶಿ ಬಣದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಡಿಮಿಡಿಗೊಂಡ ಡಿಕೆಶಿ ಪಡೆ
ಶಾಸಕರ ಈ ನಡೆಗೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಶಾಸಕ ಹಾಗೂ ಡಿಕೆಶಿ ಆಪ್ತ ಗಣಿಗ ರವಿಕುಮಾರ್ ಅವರು ಪ್ರತಿಕ್ರಿಯಿಸಿ, ಶಾಸಕರು ವಿದೇಶಕ್ಕೆ ಹೋದಾಕ್ಷಣ ಅಥವಾ ಟೂರ್ ಹೊಡೆದ ತಕ್ಷಣ ಇಲ್ಲಿ ಸರ್ಕಾರವೂ ಬೀಳುವುದಿಲ್ಲ, ಮುಖ್ಯಮಂತ್ರಿಯೂ ಬದಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಶಾಸಕರು ಕದ್ದುಮುಚ್ಚಿ ಹೋಗಲಿ ಅಥವಾ ಧೈರ್ಯವಾಗಿ ಹೋಗಲಿ, ಅಂತಿಮ ನಿರ್ಧಾರ ಹೈಕಮಾಂಡ್ ಮಾತ್ರ ತೆಗೆದುಕೊಳ್ಳಲು ಸಾಧ್ಯ. ನಾನು 50 ಶಾಸಕರನ್ನು ಕರೆದುಕೊಂಡು ಹೋದರೂ ಸಿಎಂ ಬದಲಿಸಲು ಆಗುವುದಿಲ್ಲ ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.
ಸಮರ್ಥನೆಯಲ್ಲಿ ತೊಡಗಿದ ಸಿಎಂ ಆಪ್ತರು
ಇನ್ನೊಂದೆಡೆ, ಈ ಪ್ರವಾಸವನ್ನು ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಬಜೆಟ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಶಾಸಕರು ಕೃಷಿ ಮತ್ತು ಹೈನುಗಾರಿಕೆ ಅಧ್ಯಯನಕ್ಕಾಗಿ ಸ್ವಂತ ಖರ್ಚಿನಲ್ಲಿ ಹೋಗಿದ್ದಾರೆ, ಇದು ತಪ್ಪೇನಲ್ಲ. ಇದರಲ್ಲಿ ಗುಂಪುಗಾರಿಕೆ ಇಲ್ಲ, ಹಾಗೇನಾದರೂ ಇದ್ದಿದ್ದರೆ ನನ್ನನ್ನೂ ಕರೆಯುತ್ತಿದ್ದರು ಎಂದು ಹೇಳುವ ಮೂಲಕ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸವು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವುದಂತೂ ಸತ್ಯ. ಇದು ಕೇವಲ ಪ್ರವಾಸವೋ ಅಥವಾ ಅಧಿಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ಹೈಡ್ರಾಮಾವೋ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.








