ಕ್ರಿಕೆಟ್ ಜಗತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಆಟಗಾರರ ನಡುವಿನ ವಾಕ್ಸಮರಗಳು ಹೊಸದೇನಲ್ಲ. ಇದೀಗ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಸ್ಲೋಗರ್ ಎಂದು ಜರಿದಿದ್ದ ಅಮೀರ್, ಇದೀಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯುವುದಿಲ್ಲ ಎಂದು ಭವಿಷ್ಯ ನುಡಿಯುವ ಮೂಲಕ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೂಪರ್ 8 ಲೆಕ್ಕಾಚಾರ ಮತ್ತು ಅಮೀರ್ ಆಯ್ಕೆ
ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಅಮೀರ್ ಅವರಿಗೆ, ಅಂತಿಮ 4ರ ಹಂತಕ್ಕೆ ಅಂದರೆ ಸೆಮಿಫೈನಲ್ಗೆ ಯಾವ ತಂಡಗಳು ಪ್ರವೇಶಿಸಲಿವೆ ಎಂದು ಪ್ರಶ್ನಿಸಲಾಗಿತ್ತು. ಈ ವೇಳೆ ಆತಿಥೇಯರು ಹಾಗೂ ಪ್ರೇಕ್ಷಕರಿಗೆ ಶಾಕ್ ನೀಡುವಂತೆ ಮಾತನಾಡಿದ ಅಮೀರ್, ಬಲಿಷ್ಠ ಭಾರತ ತಂಡವನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಭಾರತ ಇರುವ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ಗೆ ಲಗ್ಗೆ ಇಡಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಮೇಲೆ ನಂಬಿಕೆ ಇಲ್ಲದ ಅಮೀರ್
ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಅಮೀರ್, ಭಾರತದ ಬ್ಯಾಟಿಂಗ್ ವೈಫಲ್ಯವನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಲೈನ್ ಅಪ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿನ ಅಸ್ಥಿರತೆ ತಂಡಕ್ಕೆ ಮುಳುವಾಗಬಹುದು. ಆದರೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರಸ್ತುತ ಆಡುತ್ತಿರುವ ರೀತಿ ನೋಡಿದರೆ, ಅವರು ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಮೀರ್ ವಿಶ್ಲೇಷಿಸಿದ್ದಾರೆ.
ಅಭಿಷೇಕ್ ಶರ್ಮಾ ಓರ್ವ ಸ್ಲೋಗರ್ ಎಂದ ಪಾಕ್ ವೇಗಿ
ಇದೇ ವೇಳೆ ಟೀಂ ಇಂಡಿಯಾದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಆಟದ ಬಗ್ಗೆಯೂ ಅಮೀರ್ ಕಟುವಾದ ಟೀಕೆ ಮಾಡಿದ್ದಾರೆ. ಅಭಿಷೇಕ್ ಶರ್ಮಾ ತಾಂತ್ರಿಕವಾಗಿ ಸಮರ್ಥ ಆಟಗಾರನಲ್ಲ. ಆತ ಕೇವಲ ಚೆಂಡನ್ನು ಅಡ್ಡಾದಿಡ್ಡಿ ಬಾರಿಸುವ ಆಟಗಾರ (Slogger). ಪ್ರತಿ ಎಸೆತದಲ್ಲೂ ಬೌಂಡರಿ, ಸಿಕ್ಸರ್ ಬಾರಿಸಲು ಯತ್ನಿಸುವುದು ಸರಿಯಲ್ಲ. ಆಟ ಆರಂಭಿಸಿದಾಗ ಉತ್ತಮವಾಗಿ ಸಾಗಿದರೆ ಸರಿ, ಇಲ್ಲದಿದ್ದರೆ ಅವರು ವಿಫಲರಾಗುವ ಸಾಧ್ಯತೆಗಳೇ ಹೆಚ್ಚು ಎಂದು ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅಭಿಷೇಕ್ ಶರ್ಮಾ ಅವರ ಕಳೆದ 8 ಇನಿಂಗ್ಸ್ಗಳನ್ನು ಗಮನಿಸಿದರೆ ಅವರು ಕೇವಲ ಒಂದು ಬಾರಿ ಮಾತ್ರ ಉತ್ತಮ ಸ್ಕೋರ್ ಮಾಡಿದ್ದಾರೆ. ಉಳಿದಂತೆ 10, 15, 0 ಮತ್ತು 20 ರನ್ಗಳಿಗೆ ಔಟಾಗಿದ್ದಾರೆ. ತಾಂತ್ರಿಕವಾಗಿ ಉತ್ತಮವಾಗಿಲ್ಲದಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಕಾಲ ಉಳಿಯುವುದು ಕಷ್ಟ ಎಂದು ಅಮೀರ್ ಅಭಿಪ್ರಾಯಪಟ್ಟಿದ್ದಾರೆ.
ಸೈಮ್ ಅಯೂಬ್ಗೆ ಹೋಲಿಕೆ
ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಶೈಲಿಯನ್ನು ಪಾಕಿಸ್ತಾನದ ಆಟಗಾರ ಸೈಮ್ ಅಯೂಬ್ ಅವರ ಆರಂಭಿಕ ದಿನಗಳಿಗೆ ಅಮೀರ್ ಹೋಲಿಸಿದ್ದಾರೆ. ಸೈಮ್ ಕೂಡ ಪಿಎಸ್ಎಲ್ ಆರಂಭದಲ್ಲಿ ನೋ ಲುಕ್ ಶಾಟ್ ಮೂಲಕ ಗಮನ ಸೆಳೆದಿದ್ದರು. ಆದರೆ ಅವರ ದೌರ್ಬಲ್ಯ ಲೆಗ್ ಸೈಡ್ ಆಗಿತ್ತು. ಆಫ್ ಸೈಡ್ ನಲ್ಲಿ ಆಡುವುದು ಅವರಿಗೆ ಕಷ್ಟವಾಗುತ್ತಿತ್ತು. ಈಗ ಅಭಿಷೇಕ್ ಶರ್ಮಾ ಕೂಡ ಅದೇ ಹಾದಿಯಲ್ಲಿದ್ದಾರೆ. ಬಲಿಷ್ಠ ಬೌಲರ್ಗಳು ಯಾವಾಗಲೂ ಬ್ಯಾಟ್ಸ್ಮನ್ಗಳ ದೌರ್ಬಲ್ಯವನ್ನು ಗುರಿಯಾಗಿಸುತ್ತಾರೆ. ಅಭಿಷೇಕ್ ಆಫ್ ಸೈಡ್ ಆಟವನ್ನು ಸುಧಾರಿಸಿಕೊಳ್ಳದಿದ್ದರೆ ಪ್ರಗತಿ ಸಾಧಿಸುವುದು ಕಷ್ಟ ಎಂದು ಕಿವಿಮಾತು ಹೇಳಿದ್ದಾರೆ.
ಒತ್ತಡದ ಪಂದ್ಯಗಳಲ್ಲಿ ಪ್ರತಿ ಎಸೆತವನ್ನೂ ಸ್ಲಾಗ್ ಮಾಡಲು ಸಾಧ್ಯವಿಲ್ಲ. ದೊಡ್ಡ ಹಂತಗಳಲ್ಲಿ ಆಡುವಾಗ ಅಥವಾ ಏಕದಿನ ಪಂದ್ಯಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಸಲ್ಮಾನ್ ಅಲಿ ಆಘಾ ಮತ್ತು ಆರ್ಯನ್ ದತ್ ಅಂತಹ ಬೌಲರ್ಗಳು ಇವರ ದೌರ್ಬಲ್ಯವನ್ನು ಬಳಸಿಕೊಂಡೇ ವಿಕೆಟ್ ಪಡೆದಿದ್ದಾರೆ ಎಂದು ಅಮೀರ್ ವಿವರಿಸಿದ್ದಾರೆ.
ಒಟ್ಟಿನಲ್ಲಿ ಮೊಹಮ್ಮದ್ ಅಮೀರ್ ಅವರ ಈ ಸರಣಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.







