ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟ ತಾರಕಕ್ಕೇರಿರುವಾಗಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ‘ಬ್ರೇಕ್ ಫಾಸ್ಟ್ ಮೀಟಿಂಗ್’ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಎಂದೇ ಗುರುತಿಸಿಕೊಂಡಿರುವ ಕೆ.ಎನ್. ರಾಜಣ್ಣ ಮತ್ತು ಕೇಂದ್ರ ಸಚಿವ, ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಅವರ ದಿಢೀರ್ ಭೇಟಿ ಕಾಂಗ್ರೆಸ್ ಹೈಕಮಾಂಡ್ ನಿದ್ದೆಗೆಡಿಸಿದೆ.
ಸಿದ್ದು ಆಪ್ತನ ನಡೆ, ಹೈಕಮಾಂಡ್ ಕಡೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಕ್ಷಣಾ ಕವಚದಂತೆ ವರ್ತಿಸುವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರೋಧಿ ಬಣದ ಪ್ರಮುಖ ಧ್ವನಿಯಾಗಿರುವ ಕೆ.ಎನ್. ರಾಜಣ್ಣ, ಬಹಳ ದಿನಗಳ ನಂತರ ದೆಹಲಿಗೆ ಬಂದಿಳಿದಿದ್ದಾರೆ. ಮೇಲ್ನೋಟಕ್ಕೆ ಸ್ನೇಹಿತರೊಬ್ಬರ ಮೊಮ್ಮಗನ ಮದುವೆ ನೆಪವಿದ್ದರೂ, ಅಸಲಿ ಉದ್ದೇಶ ಮಾತ್ರ ರಾಜಕೀಯ ಲಾಬಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ಭೇಟಿಯ ನಡುವೆಯೇ ಅವರು ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಉಪಾಹಾರ ಸೇವಿಸುತ್ತಾ ಮಾತುಕತೆ ನಡೆಸಿರುವುದು, ರಾಜಣ್ಣ ‘ಕೈ’ ಬಿಟ್ಟು ‘ಕಮಲ’ದತ್ತ ಮುಖಮಾಡುತ್ತಿದ್ದಾರೆಯೇ ಎಂಬ ಅನುಮಾನಗಳಿಗೆ ಇಂಬು ನೀಡಿದೆ.
ಡಿಕೆಶಿ ವಿರುದ್ಧ ರಣತಂತ್ರ?
ಕೆ.ಎನ್. ರಾಜಣ್ಣ ಅವರು ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಏಕಚಕ್ರಾಧಿಪತ್ಯಕ್ಕೆ ತಡೆಯೊಡ್ಡಲು ಯತ್ನಿಸುತ್ತಲೇ ಬಂದಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಸೂತ್ರ ಜಾರಿಯಾಗಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಅಥವಾ ಡಿಸಿಎಂ ಸ್ಥಾನವನ್ನಾದರೂ ಬಿಡಬೇಕು ಎಂದು ರಾಜಣ್ಣ ಬಹಿರಂಗವಾಗಿಯೇ ಆಗ್ರಹಿಸಿದ್ದರು. ಇದೀಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಅವರು, ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿನ ನಾಯಕತ್ವ ಗೊಂದಲದ ಬಗ್ಗೆ ನೇರ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಸತೀಶ್ ಜಾರಕಿಹೊಳಿ ಬೆನ್ನಲ್ಲೇ ರಾಜಣ್ಣ ಎಂಟ್ರಿ
ಅಸ್ಸಾಂ ಚುನಾವಣೆ ಉಸ್ತುವಾರಿ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಅವರು ವಾಪಸಾಗುತ್ತಿದ್ದಂತೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಆಗಮಿಸಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದರು. ಈಗ ಅವರ ಬೆನ್ನಲ್ಲೇ ರಾಜಣ್ಣ ಕೂಡ ದೆಹಲಿಗೆ ಆಗಮಿಸಿರುವುದು ಸಿದ್ದರಾಮಯ್ಯ ಬಣದ ಒಗ್ಗಟ್ಟು ಪ್ರದರ್ಶನ ಎಂದೇ ಬಿಂಬಿತವಾಗಿದೆ. ಒಂದು ವೇಳೆ ಸಿಎಂ ಬದಲಾವಣೆ ಅನಿವಾರ್ಯವಾದರೆ, ದಲಿತ ಅಥವಾ ಹಿಂದುಳಿದ ವರ್ಗಗಳಿಗೆ (ಅಹಿಂದ) ಅಧಿಕಾರ ನೀಡಬೇಕು ಎಂಬ ದಾಳವನ್ನು ಉರುಳಿಸಲು ಸಿದ್ದರಾಮಯ್ಯ ಬಣ ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗು!
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ತಮ್ಮದೇ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ದೆಹಲಿಯ ಕರ್ನಾಟಕ ಭವನಕ್ಕಾಗಿ ಖರೀದಿಸಿದ 12 ವಾಹನಗಳನ್ನು ದೆಹಲಿಯಲ್ಲೇ ನೋಂದಣಿ ಮಾಡಿಸುವ ಮೂಲಕ ರಾಜ್ಯಕ್ಕೆ ಬರಬೇಕಿದ್ದ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗಿದೆ. ಅಧಿಕಾರಿಗಳು ಕರ್ನಾಟಕದ ಪರವಾಗಿದ್ದಾರೋ ಅಥವಾ ದೆಹಲಿ ಸರ್ಕಾರದ ಪರವಾಗಿದ್ದಾರೋ ಎಂಬ ಅನುಮಾನ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆಡಳಿತ ಯಂತ್ರ ಕುಸಿದಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ಅಂಗಳದಲ್ಲಿ ಚೆಂಡು
ಮತಗಳ್ಳತನ ವಿವಾದದ ಹೇಳಿಕೆ ತಿರುಚಿ ತಮ್ಮ ವಿರುದ್ಧ ಹೈಕಮಾಂಡ್ಗೆ ದೂರು ನೀಡಲಾಗಿದೆ ಎಂದು ರಾಜಣ್ಣ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ನಾಯಕತ್ವದ ಗೊಂದಲವನ್ನು ಹೈಕಮಾಂಡ್ ಶೀಘ್ರವೇ ಇತ್ಯರ್ಥಪಡಿಸಬೇಕು, ವಿಳಂಬ ಮಾಡಿದರೆ ಅದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ರಾಜಣ್ಣ ಮತ್ತು ಸೋಮಣ್ಣ ಅವರ ಈ ಅನಿರೀಕ್ಷಿತ ಭೇಟಿ ಹಾಗೂ ರಾಜಣ್ಣ ಅವರ ಆಕ್ರೋಶದ ಮಾತುಗಳು, ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ಸ್ಫೋಟಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.







