ಬಿಸಿಸಿಐ ಅಪೆಕ್ಸ್ ಸಮಿತಿಯ ಮಹತ್ವ ಸಭೆಯಲ್ಲಿ ನಿರ್ಧಾರವಾಗುವುದೇ ಐಪಿಎಲ್ ಭವಿಷ್ಯ
ಜುಲೈ-17, ಕೊರೋನಾ ಸೋಂಕಿನಿಂದಾಗಿ ಬಿಸಿಸಿಐ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ. ಕುಬೇರನಂತೆ ಬಿಸಿಸಿಐ ಬೊಕ್ಕಸ ತುಂಬಿತುಳುಕುತ್ತಿತ್ತು. ಆದ್ರೆ ಕೋವಿಡ್-19ನಿಂದಾಗಿ ಬಿಸಿಸಿಐ ಮುಂಬರುವ ದಿನಗಳಲ್ಲಿ ನಷ್ಟವನ್ನು ಹೇಗೆ ಸರಿದೂಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದೆ.
ಮುಖ್ಯವಾಗಿ ಐಪಿಎಲ್ ಟೂರ್ನಿ. ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ನಡೆಸುವುದು ದೂರದ ಮಾತಾಗಿದೆ. ಹೀಗಾಗಿ ಶ್ರೀಲಂಕಾ ಮತ್ತು ಯುಎಇನಲ್ಲಿ ನಡೆಸುವುದರ ಬಗ್ಗೆಯೂ ಪ್ಲಾನ್ ಮಾಡಿಕೊಂಡಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಸರಣಿ, ಶ್ರೀಲಂಕಾ ಸರಣಿ, ಜಿಂಬಾಬ್ವೆ ಸರಣಿ, ಇಂಗ್ಲೆಂಡ್ ಸರಣಿ, ಏಷ್ಯಾಕಪ್ ಟೂರ್ನಿಗಳು ರದ್ದುಗೊಂಡಿವೆ. ಟಿ–ಟ್ವೆಂಟಿ ವಿಶ್ವಕಪ್ ನ ಭವಿಷ್ಯ ಕೂಡ ಇನ್ನು ನಿರ್ಧಾರವಾಗಿಲ್ಲ. ಹಾಗೇ ದೇಸಿ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿಲ್ಲ. ಹೀಗೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬಿಸಿಸಿಐ ಜುಲೈ 17ರಂದು ಮಹತ್ವದ ಸಭೆಯನ್ನು ನಡೆಸಲಿದೆ.
ಸಭೆಯಲ್ಲಿ 11 ವಿಚಾರಗಳ ಬಗ್ಗೆ ಚರ್ಚೆ
ಈ ಸಭೆಯಲ್ಲಿ ಐಪಿಎಲ್ ಮತ್ತು ದೇಸಿ ಕ್ರಿಕೆಟ್ ಟೂರ್ನಿಗಳು ಮತ್ತು ಟೀಮ್ ಇಂಡಿಯಾದ ಮುಂಬರುವ ಟೂರ್ನಿಗಳ ಬಗ್ಗೆ ಚರ್ಚೆ ನಡೆಯಲಿದೆ. ಒಟ್ಟು 11 ವಿಷಯಗಳ ಕುರಿತು ಬಿಸಿಸಿಐ ಪದಾಧಿಕಾರಿಗಳು ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮುಖ್ಯವಾಗಿ ಐಪಿಎಲ್ ಭವಿಷ್ಯ, ದೇಸಿ ಟೂರ್ನಿಗಳ ಮರು ವೇಳಾಪಟ್ಟಿ ನಿಗದಿ, ಟೀಮ್ ಇಂಡಿಯಾದ ಮುಂದಿನ ಸರಣಿ, 2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ತೆರಿಗೆ ವಿನಾಯಿತಿ, ಎನ್ಸಿಎ ಸೌಲಭ್ಯಗಳ ಬಗ್ಗೆ, ಐಪಿಎಲ್ ಮತ್ತು ಬಿಸಿಸಿಐ ಪ್ರಾಯೋಜಕತ್ವದ ಕುರಿತು, ಬಿಸಿಸಿಐ ಸಿಬ್ಬಂದಿಗಳ ನೇಮಕ, ಬಿಹಾರ ಕ್ರಿಕೆಟ್ ಸಂಸ್ಥೆಯ ಗೊಂದಲ, ಬಿಸಿಸಿಐ ಹೊಸ ಸಿಇಒ ಆಯ್ಕೆ ಪ್ರಕ್ರಿಯೆ ಕುರಿತು, ಈಶಾನ್ಯ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಸಬ್ಸಿಡಿ ಬಗ್ಗೆ ಹಾಗೂ ತಂಡದ ಜೆರ್ಸಿ ಪ್ರಾಯೋಜಕತ್ವದ ಬಗ್ಗೆ ಚರ್ಚೆ ನಡೆಯಲಿದೆ.
ಈ ನಡುವೆ ಐಸಿಸಿ ಮುಂದಿನ ವಾರ ಸಭೆ ನಡೆಸಲಿದ್ದು, ಟಿ-ಟ್ವೆಂಟಿ ವಿಶ್ವಕಪ್ ನ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಆದಾದ ಬಳಿಕವೇ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಯಾಕಂದ್ರೆ ಅಕ್ಟೋಬರ್ -ನವೆಂಬರ್ನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಿಗದಿಯಾಗಿದೆ. ಒಂದು ವೇಳೆ ವಿಶ್ವಕಪ್ ಟೂರ್ನಿ ರದ್ದುಗೊಂಡ್ರೆ ಈ ಅವಧಿಯಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಲೆಕ್ಕಚಾರ ಬಿಸಿಸಿಐನದ್ದಾಗಿದೆ.