ರಕ್ತಸಿಕ್ತ ಚರಿತ್ರೆಯ ನಾಡಿನಲ್ಲಿ ಈಗ ಕ್ರಿಕೆಟ್ ಸುಗ್ಗಿ. ಹೌದು. ಜಮ್ಮು ಕಾಶ್ಮೀರ ಅಂದ ತಕ್ಷಣ ನೆನಪಾಗುವುದು ಪಾಕ್ ಕುಮ್ಮಕ್ಕಿನಿಂದ ನಡೆಯುತ್ತಿರುವ ಭಯೋತ್ಪಾನೆ. ಮದ್ದು ಗುಂಡುಗಳ ಸದ್ದು. ಅಂತರಿಕ ಸಂಘರ್ಷ. ಪ್ರತಿ ದಿನ ನೀರಿನಂತೆ ಹರಿಯುವ ರಕ್ತದÀ ಓಕುಳಿ. ಆದ್ರೆ ಈಗ ಮಂಜಿನ ಹನಿಯಲ್ಲಿ ಹೆಪ್ಪುಗಟ್ಟಿದ ನೆತ್ತರ ಕಲೆಗಳು ಅಳಿಸಿ ಹೋಗುವಂತಹ ಸನ್ನಿವೇಶ ಮೇಲ್ನೋಟಕ್ಕೆ ನವ ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿದೆ. ಅದಕ್ಕೆ ಉತ್ತಮ ನಿದರ್ಶನ ಕ್ರಿಕೆಟ್ ಆಟ. ಇಷ್ಟು ದಿನ ಜಮ್ಮು ಕಾಶ್ಮೀರ ಕ್ರಿಕೆಟ್ಗೆ ಅಂಟಿಕೊಂಡಿದ್ದ ಕಳಂಕವೂ ನೆನಪಿನ ಪುಟದಿಂದ ಜಾರಿ ಹೋಗುವಂತಾಗಿದೆ.
ನಮ್ಮ ಇತಿಹಾಸದ ಪುಟಗಳಲ್ಲಿ ಜಮ್ಮು ಕಾಶ್ಮೀರ ಅಂದ್ರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಪ್ರದೇಶ. ಸ್ವಾತಂತ್ರ್ಯ ನಂತ್ರ ಇಂಡೋ ಪಾಕ್ ನಡುವೆ ಜಮ್ಮು ಕಾಶ್ಮೀರಕ್ಕಾಗಿ ನಾಲ್ಕೈದು ಯುದ್ಧಗಳೇ ನಡೆದಿವೆ. ಪ್ರತಿ ದಿನ ಗಂಡಿನ ಚಕಮಕಿಗಳೂ ನಡೆಯುತ್ತಿವೆ. ಆದ್ರೂ ಜಮ್ಮು ಕಾಶ್ಮೀರ ಪಾಕ್ ಕೈಗೆ ಸಿಗಲೇ ಇಲ್ಲ. ಅದಕ್ಕಾಗಿ ನೇರ ಹೋರಾಟದ ಬದಲು ಭಯೋತ್ಪಾದಕರು ಮತ್ತು ಧರ್ಮದ ಹೆಸರಿನಲ್ಲಿ ಭಾರತದ ವಿರುದ್ಧ ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಅಂತರಯುದ್ಧವನ್ನು ನಡೆಸುತ್ತಿದೆ. ಒಂದು ರೀತಿಯಲ್ಲಿ ಅದು ಮುಗಿಯದ ಅಂತರಿಕ ಕಲಹ. ಆದ್ರೆ ಭಾರತ ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರವನ್ನು ಬಿಟ್ಟುಕೊಟ್ಟಿಲ್ಲ. ಬಿಟ್ಟು ಕೊಡುವುದು ಇಲ್ಲ. ಯಾಕಂದ್ರೆ ಜಮ್ಮು ಕಾಶ್ಮೀರ ಅನ್ನೋದು ಭಾರತಾಂಬೆಯ ಮುಕುಟದ ಗರಿ. ಅದನ್ನು ಎಂದಾದ್ರೂ ಬಿಟ್ಟುಕೊಡುವುದು ಅಂದ್ರೆ ಅದು ಕನಸಿನ ಮಾತು.
ಇದೀಗ ಜಮ್ಮು ಕಾಶ್ಮೀರ ಮತ್ತೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ಬಾಂಬ್ ಸ್ಫೋಟ, ಯುದ್ದ, ಭಯೋತ್ಪಾದನೆ, ಹಿಂಸೆಗೆ ಸುದ್ದಿಯಾಗಿಲ್ಲ. ಬದಲಾಗಿ ಕ್ರಿಕೆಟ್ ವಿಷ್ಯದಲ್ಲಿ ಜಮ್ಮು ಕಾಶ್ಮೀರ ಎಲ್ಲರ ಕಣ್ಮನ ಸೆಳೆದಿದೆ. ಬಹುಶಃ ಭಾರತೀಯ ಕ್ರಿಕೆಟ್ನಲ್ಲಿ ಜಮ್ಮು ಕಾಶ್ಮೀರ ಈ ಮಟ್ಟದ ಪ್ರದರ್ಶನ ನೀಡುತ್ತೆ ಅಂತ ಯಾರು ಕೂಡ ಊಹೆ ಕೂಡ ಮಾಡಿರಲಿಲ್ಲ. ಬುಲೆಟ್ ಸೌಂಡ್ಗಳ ಮದ್ಯೆ ಚೆಂಡು – ಬ್ಯಾಟಿನ ಸದ್ದು ಕೇಳಿಸುತ್ತಿರುವುದು ನಿಜಕ್ಕೂ ಅಚ್ಚರಿಯಾಗುತ್ತಿದೆ.
ಹಾಗಂತ, ಜಮ್ಮು ಕಾಶ್ಮೀರಕ್ಕೆ ಕ್ರಿಕೆಟ್ ಆಟ ಹೊಸದೇನೂ ಅಲ್ಲ. ಭಾರತದ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದಂತೆ ಜಮ್ಮು ಕಾಶ್ಮೀರದಲ್ಲೂ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿತ್ತು. 1959ರಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಅಸ್ತಿತ್ವಕ್ಕೆ ಬಂದ್ರೂ ಅಲ್ಲಿನ ರಾಜಕೀಯ ಅಸ್ಥಿರತೆ, ಭಯದ ವಾತಾವರಣ ಹಾಗೂ ಭ್ರಷ್ಟಾಚಾರದಿಂದ ಕ್ರಿಕೆಟ್ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿತ್ತು. ಆದ್ರೂ 1983ರಲ್ಲಿ ಶ್ರೀನಗರದ ಶೇರ್ ಎ ಕಾಶ್ಮೀರ್ ಅಂಗಣದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಪಂದ್ಯ ನಡೆದಿತ್ತು. ಆದಾಗ ಬಳಿಕ ಜಮ್ಮು ಕಾಶ್ಮೀರದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಂಘಟಿಸಿಲ್ಲ. ಆದ್ರೂ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ದೇಸಿ ಕ್ರಿಕೆಟ್ ಟೂರ್ನಿಗಳು ಮಾತ್ರ ನಡೆಯುತ್ತಿದ್ದವು. ಆದ್ರೆ ಜಮ್ಮು ಕಾಶ್ಮೀರದ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಸಿಗುತ್ತಿರಲಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೀಗಾಗಿಯೇ ಪ್ರತಿಭಾವಂತ ಕ್ರಿಕೆಟಿಗರ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪರ್ವೇಜ್ ರಸೂಲ್, ಉಮ್ರಾನ್ ಮಲ್ಲಿಕ್, ಅಬ್ದಲ್ ಸಮಾದ್ನಂತಹ ಆಟಗಾರರು ಭಾರತೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಅಷ್ಟೇ ಅಲ್ಲ ಯುವ ಕ್ರಿಕೆಟಿಗರ ಅದ್ಭುತ ಪ್ರದರ್ಶನದಿಂದಲೇ ರಣಜಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವುದು ಕೂಡ. ಜೊತೆಗೆ ಫೈನಲ್ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿರುವುದನ್ನು ನೋಡಿದಾಗ ಜಮ್ಮು ಕಾಶ್ಮೀರ ತಂಡದ ಆಟಗಾರರ ಪ್ರತಿಭೆ, ಸಾಮಥ್ರ್ಯ ಏನು ಎಂಬುದು ಅರ್ಥವಾಗುತ್ತಿದೆ.
ಹಾಗೇ ನೋಡಿದ್ರೆ ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ಗೆ ಬೇಕಾದಂತಹ ಆತ್ಯಾಧುನಿಕ ಮಾದರಿಯ ಸೌಲಭ್ಯಗಳಿರಲಿಲ್ಲ. ಮೈದಾನದಲ್ಲಿ ಧೈರ್ಯವಾಗಿ ಆಡುವ ಪರಿಸ್ಥಿತಿಯೂ ಇರಲಿಲ್ಲ. ಹೀಗಾಗಿ ಪಂಜಾಬ್, ಮುಂಬೈ ಸೇರಿದಂತೆ ಬೇರೆ ಬೇರೆ ಕಡೆ ತಂಡದ ಆಟಗಾರರು ಅಭ್ಯಾಸ ನಡೆಸಬೇಕಾಗಿತ್ತು. ಇಷ್ಟೆಲ್ಲಾ ಕಷ್ಟ, ಆತಂಕಗಳಿದ್ರೂ ಕ್ರಿಕೆಟ್ ಮೇಲಿನ ಪ್ರೀತಿಯೇ ಅಲ್ಲಿನ ಹುಡುಗರ ಪ್ರತಿಭೆಗಳನ್ನು ಅನಾವರಣಗೊಳ್ಳುವಂತೆ ಮಾಡಿದೆ. ಒಂದು ಕಾಲದಲ್ಲಿ ಜಮ್ಮು ಕಾಶ್ಮೀರದ ಹುಡುಗರು ಕೈಯಲ್ಲಿ ಬಂದೂಕು ಹಿಡಿದುಕೊಂಡು ಹಿಡಿ ಮಣ್ಣಿಗಾಗಿ ಕಾದಾಟ ನಡೆಸುತ್ತಿದ್ದರು. ಆದ್ರೆ ಈಗ ಅವರಿಗೂ ಜ್ಞಾನೋದಯವಾದಂತಿದೆ. ಈ ರೀತಿ ಕಚ್ಚಾಟ ನಡೆಸುವುದರಲ್ಲಿ ಅರ್ಥವಿಲ್ಲ ಎಂಬುದು ಮನದಟ್ಟಾಗಿದೆ. ಯಾರದ್ದೋ ಮಾತು ಕೇಳಿ ಮಾತೃಭೂಮಿಗೆ ದ್ರೋಹ ಬಗೆಯುವುದು ಸರಿಯಲ್ಲ ಎಂಬುದು ಅರಿವಾದಂತಿದೆ. ಒಟ್ಟಾರೆ, ಜಮ್ಮು ಕಾಶ್ಮೀರದ ಕ್ರಿಕೆಟ್ ಹುಡುಗರ ಮನಸ್ಥಿತಿ ಬದಲಾದಂತೆ ಕಾಣುತ್ತಿದೆ.
ಇಲ್ಲದೆ ಇರುತ್ತಿದ್ರೆ ಉಮ್ರಾನ್ ಮಲ್ಲಿಕ್ನಂತಹ ವೇಗಿ ಸನ್ ರೈಸರ್ಸ್ ಹೈದ್ರಬಾದ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಗಂಟೆಗೆ 150ಕ್ಕೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಉಮ್ರಾನ್ ಮಲ್ಲಿಕ್ ಜಮ್ಮು ಎಕ್ಸ್ ಪ್ರೆಸ್ ಅಂತನೇ ಫೇಮಸ್ ಆಗಿದ್ದಾನೆ. ಅಷ್ಟೇ ಅಲ್ಲ ಜಮ್ಮು ಕಾಶ್ಮೀರದ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾನೆ. ಹಾಗೇ ಅಬ್ದುಲ್ ಸಮಾದ್ನಂತಹ ಆಲ್ರೌಂಡರ್ ಜಮ್ಮು ಕಾಶ್ಮೀರಕ್ಕೆ ಅಂಟಿದ್ದ ಕಳಂಕವನ್ನು ಅಳಿಸಿ ಹಾಕಿರೋ ಕ್ರಿಕೆಟಿಗ. ಹಾಗೇ ರಸಿಕ್ ಸಲಾಂ ಎಂಬ ಯುವ ವೇಗಿ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಗುರುತಿಸಿಕೊಂಡು ಕಾಶ್ಮೀರ ಅಂದ್ರೆ ಬರೀ ಬ್ಯಾಟ್ಗೆ ಮಾತ್ರ ಫೇಮಸ್ ಅಲ್ಲ.. ಬೌಲಿಂಗ್ಗೂ ಫೇಮಸ್ ಎಂಬುದನ್ನು ಸಾಬೀತು ಮಾಡಿದ್ದಾನೆ.
ಇನ್ನು ಜಮ್ಮು ಕಾಶ್ಮೀರ ತಂಡವನ್ನು ಮುನ್ನಡೆಸುತ್ತಿರುವ ಪರಾಸ್ ಡೊಗ್ರಾ ಮೂಲತಃ ಹಿಮಾಚಲ ಪ್ರದೇಶದವರು. ಆದ್ರೆ ಕಳೆದ ಏಳೆಂಟು ವರ್ಷಗಳಿಂದ ಜಮ್ಮು ಕಾಶ್ಮೀರ ತಂಡದ ಆಡುತ್ತಿದ್ದಾರೆ. ಅಲ್ಲದೆ ಬಲಿಷ್ಠ ತಂಡವನ್ನು ಕಟ್ಟಿದ್ದ ಹಿರಿಮೆಯೂ ಅವರ ಹೆಸರಿಗೆ ಸೇರ್ಪಡೆಗೊಂಡಿದೆ. ಹಾಗೇ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಬಲಿಯಾಗಿದ್ದ ಅಜೇಯ್ ಶರ್ಮಾ ಜಮ್ಮು ಕಾಶ್ಮೀರ ತಂಡದ ಹೆಡ್ ಕೋಚ್. ಇದೀಗ ತನ್ನ ಹೆಸರಿಗೆ ಅಂಟಿಕೊಂಡಿದ್ದ ಕಳಂಕವನ್ನು ಜಮ್ಮು ಕಾಶ್ಮೀರದ ಹುಡುಗರು ಅಳಿಸಿ ಹಾಕುತ್ತಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಅಜೇಯ್ ಶರ್ಮಾ. ಯಾಕಂದ್ರೆ 67 ವರ್ಷಗಳ ಬಳಿಕ ಜಮ್ಮುಕಾಶ್ಮೀರ ಇದೇ ಮೊದಲ ಬಾರಿ ರಣಜಿ ಫೈನಲ್ ಪ್ರವೇಶಿಸಿದೆ.
ಅಂದ ಹಾಗೆ, ಜಮ್ಮು ಕಾಶ್ಮೀರ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿ ಗೆಲುವಿನ ರುಚಿ ತೋರಿಸಿದ್ದು ನಮ್ಮ ಕನ್ನಡದ ಹೆಮ್ಮೆಯ ಕ್ರಿಕೆಟಿಗ ಸುನೀಲ್ ಜೋಶಿ. 2014ರಲ್ಲಿ ಸುನೀಲ್ ಜೋಶಿ ಅವರು ಜಮ್ಮು ಕಾಶ್ಮೀರದ ತಂಡದ ಹೆಡ್ ಕೋಚ್ ಆಗಿದ್ದರು. ಜೋಶಿ ಗರಡಿಯಲ್ಲಿ ಪಳಗಿದ್ದ ಜಮ್ಮು ಕಾಶ್ಮೀರ ತಂಡ ರಣಜಿ ಪಂದ್ಯದಲ್ಲಿ ಮುಂಬೈಗೆ ಆಘಾತ ನೀಡಿತ್ತು. ಅಲ್ಲಿಂದಲೇ ಜಮ್ಮು ಕಾಶ್ಮೀರ ತಂಡಕ್ಕೆ ಗೆಲುವು ಮರೀಚಿಕೆಯಲ್ಲ ಎಂಬ ಭಾವನೆ ಮೂಡಿದ್ದು.
ನಂತ್ರ ಜಮ್ಮು ಕಾಶ್ಮೀರ ಕ್ರಿಕೆಟ್ನಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್. ಜಮ್ಮು ಕಾಶ್ಮೀರ ಇಂದು ರಣಜಿ ಫೈನಲ್ನಲ್ಲಿ ಆಡುತ್ತಿದೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಇರ್ಫಾನ್ ಪಠಾಣ್. 2018ರಲ್ಲಿ ಜಮ್ಮು ಕಾಶ್ಮೀರದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಪ್ರತಿಭಾನ್ವೇಷಣೆ ಮಾಡಿರುವುದು ಇರ್ಫಾನ್ ಪಠಾಣ್. ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಬಗ್ಗೆ ಜಾಗೃತಿ ಮೂಡಿಸಿ ಬಂದೂಕು ಹಿಡಿಯುವ ಕೈಗಳಲ್ಲಿ ಚೆಂಡು – ಬ್ಯಾಟ್ ಹಿಡಿದುಕೊಂಡು ಆಡುವಂತೆ ಮಾಡಿರೋದು ಇರ್ಫಾನ್ ಪಠಾಣ್. ಜಮ್ಮು ಕಾಶ್ಮೀರದ ಆಟಗಾರಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡಿರುವುದು ಇರ್ಫಾನ್ ಪಠಾಣ್. ಸದ್ದಿಲ್ಲದೆ ಕಣಿವೆ ರಾಜ್ಯದಲ್ಲಿ ಕ್ರಿಕೆಟ್ ಕಲರವವನ್ನು ಸೃಷ್ಟಿಸಿದ್ದ್ದು ಇರ್ಫಾನ್ ಪಠಾಣ್. ಇದೀಗ ಜಮ್ಮು ಕಾಶ್ಮೀರದ ಕ್ರಿಕೆಟ್ನ ಹರಿಕಾರನಂತೆ ಕಂಗೋಳಿಸುತ್ತಿದ್ದಾರೆ ಇರ್ಫಾನ್ ಪಠಾಣ್.
ಹಾಗೇ ಮತ್ತೊಬ್ಬ ಹೀರೋ ಈಗಿನ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್. ದೆಹಲಿ ಪರ ಆಡುತ್ತಿದ್ದ ಮಿಥುನ್ ಕೂಡ ಜಮ್ಮು ಕಾಶ್ಮೀರ ತಂಡಕ್ಕೆ ವಲಸೆ ಹೋಗಿದ್ದರು. ಆಗ ಅಲ್ಲಿನ ಪ್ರತಿಭಾವಂತ ಕ್ರಿಕೆಟಿಗರನ್ನು ಗುರುತಿಸಿದ್ದ ಮಿಥುನ್, ಜಮ್ಮು ಕ್ರಿಕೆಟ್ನ ಏಳಿಗೆಗೆ ಅವಿರತವಾಗಿ ಶ್ರಮಿಸಿದ್ರು. ಬಿಸಿಸಿಐ ಕಾರ್ಯದರ್ಶಿ ಜೈಶಾ ಅಣತಿಯಂತೆ ಜಮ್ಮು ಕಾಶ್ಮೀರದ ಕ್ರಿಕೆಟ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಮಿಥುನ್ ಮನ್ಹಾಸ್ ವಹಿಸಿಕೊಂಡ್ರು. ಜಮ್ಮು ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಆರ್ಥಿಕವಾಗಿ ಸಹಾಯ ಮಾಡಿದ್ದಲ್ಲದೇ ಆತ್ಯಾಧುನಿಕ ಮಾದರಿಯ ಸೌಲಭ್ಯಗಳನ್ನು ಕೂಡ ಕಲ್ಪಿಸುವಲ್ಲಿ ಮಿಥುನ್ ಮನ್ಹಾಸ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಜಮ್ಮು ಕಾಶ್ಮೀರದ 24 ಜಿಲ್ಲೆಗಳಲ್ಲೂ ಕ್ರಿಕೆಟ್ ಟೂರ್ನಿಗಳನ್ನು ಸಂಘಟಿಸಿ ಪ್ರತಿಭಾನ್ವೇಷಣೆ ಮಾಡಿದ್ದ ಮಿಥುನ್ ಮನ್ಹಾಸ್ ಮುಖದಲ್ಲೂ ಸಾರ್ಥಕತೆಯ ಭಾವನೆ ಇದೆ.
ಒಟ್ಟಿನಲ್ಲಿ, ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಅಜೇಯ್ ಶರ್ಮಾ, ಸುನೀಲ್ ಜೋಶಿ, ಇರ್ಫಾನ್ ಪಠಾಣ್ ಮತ್ತು ಹಾಲಿ ಬಿಸಿಸಿಐ ಅಥ್ಯಕ್ಷ ಮಿಥುನ್ ಮನ್ಹಾಸ್ ಅವರ ದೂರದೃಷ್ಠಿಯ ಯೋಚನೆ, ಯೋಜನೆಯ ಫಲವಾಗಿ ಜಮ್ಮು ಕಾಶ್ಮೀರ ತಂಡ ರಣಜಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಆದ್ರೆ ಈ ತಂಡವನ್ನು ಕಟ್ಟಿ ಬೆಳೆಸಲು ಭದ್ರ ಅಡಿಪಾಯ ಹಾಕಿರುವುದು ಇರ್ಫಾನ್ ಪಠಾಣ್. ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ ಅಭಿವೃದ್ಧಿಯ ಮಂತ್ರವನ್ನು ಪಠಿಸಿದ್ದು ಮಿಥುನ್ ಮನ್ಹಾಸ್. ಹಾಗೇ ಬಲಿಷ್ಠ ತಂಡವಾಗಿ ಹೊರಹೊಮ್ಮುವಂತೆ ಮಾಡಿರೋದು ಹೆಡ್ ಕೋಚ್ ಅಜೇಯ್ ಶರ್ಮಾ. ಹೀಗಾಗಿ ಜಮ್ಮು ಕಾಶ್ಮೀರದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇರ್ಫಾನ್ ಪಠಾಣ್, ಮಿಥುನ್ ಮನ್ಹಾಸ್ ಮತ್ತು ಅಜೇಯ್ ಶರ್ಮಾ ಕ್ರಿಕೆಟ್ ದೇವದೂತರಾಗಿದ್ದಾರೆ.
ಸನತ್ ರೈ







