ಗಲ್ಫ್ ಯುದ್ಧ ಮೂವತ್ತು ದಿನಗಳನ್ನು ಪೂರೈಸಿದ್ದು ಇದರ ನೇರ ಹೊಡೆತ ಕರುನಾಡಿನ ಜನಸಾಮಾನ್ಯರ ಅಡುಗೆ ಮನೆಯ ಮೇಲೆ ಬಿದ್ದಿದೆ. ರಾಜ್ಯಾದ್ಯಂತ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು ವಾಣಿಜ್ಯ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಅಕ್ಷರಶಃ ಕಂಗಾಲಾಗಿವೆ. ಖಾಲಿ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವ ಆತಂಕಕಾರಿ ದೃಶ್ಯಗಳು ಎದುರಾಗಿವೆ.
ಈ ಭಾರಿ ಬಿಕ್ಕಟ್ಟಿನ ನಡುವೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಅವರು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗ್ಯಾಸ್ ಕೊರತೆ ಇರುವುದರಿಂದ ಜನರು ಪರ್ಯಾಯವಾಗಿ ಸೌದೆ ಒಲೆಗಳನ್ನು ಬಳಸುವಂತೆ ಅವರು ಕರೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ಖಾಸಗಿ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುನಿಯಪ್ಪ ಪ್ರಸ್ತುತ ಎದುರಾಗಿರುವ ಸಿಲಿಂಡರ್ ಅಭಾವವನ್ನು ನಿಭಾಯಿಸಲು ಹಳ್ಳಿ ಭಾಗದ ಜನರು ಹಾಗೂ ಸಾಧ್ಯವಿರುವವರು ಸೌದೆ ಒಲೆಗಳ ಮೊರೆ ಹೋಗುವುದು ಸೂಕ್ತ ಎಂದರು. ನಗರ ಪ್ರದೇಶದವರ ಕುರಿತು ಮಾತನಾಡಿದ ಅವರು ಬೆಂಗಳೂರು ನಗರದಿಂದ ಒಂದು ನಲವತ್ತು ಕಿಲೋಮೀಟರ್ ಆಚೆ ಹೋದರೆ ಧಾರಾಳವಾಗಿ ಸೌದೆ ಸಿಗುತ್ತದೆ. ಅರಣ್ಯ ಪ್ರದೇಶಗಳಿಗೆ ಹಾನಿ ಮಾಡದೆ ಉರುವಲಿಗೆ ಕೇವಲ ಒಣಗಿದ ಕಟ್ಟಿಗೆಗಳನ್ನು ಮಾತ್ರ ಬಳಸುವಂತೆ ಅವರು ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿಕೊಂಡರು.
ಗ್ಯಾಸ್ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ
ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲದ ಅಭಾವಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಸಚಿವರು ವಾಗ್ದಾಳಿ ನಡೆಸಿದರು. ಪ್ರಸ್ತುತ ರಾಜ್ಯದ ಬೇಡಿಕೆಯ ಕೇವಲ ಶೇಕಡಾ 40 ರಷ್ಟು ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿದೆ. ಆದರೆ ಗೃಹಬಳಕೆಯ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಆಯಿಲ್ ಕಂಪನಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು ಗ್ರಾಹಕರು ಸಿಲಿಂಡರ್ ಗಾಗಿ ಬೀದಿಯಲ್ಲಿ ಕ್ಯೂ ನಿಲ್ಲುವ ಅವಶ್ಯಕತೆಯಿಲ್ಲ. ಬುಕ್ಕಿಂಗ್ ಮಾಡಿದವರ ಮನೆ ಬಾಗಿಲಿಗೆ ನಿಗದಿತ ಸಮಯಕ್ಕೆ ಸಿಲಿಂಡರ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಹಕರಿಗೆ ಅಭಯ ನೀಡಿದರು.
ಉದ್ಯಮಗಳ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಪೂರೈಕೆಯನ್ನು ಶೇಕಡಾ 68 ಕ್ಕೆ ಹೆಚ್ಚಿಸಿದೆ. ಭಾನುವಾರದಿಂದಲೇ ಹೆಚ್ಚುವರಿ ಸಿಲಿಂಡರ್ ಗಳ ವಿತರಣೆ ಕಾರ್ಯ ಸಮರೋಪಾದಿಯಲ್ಲಿ ಆರಂಭವಾಗಿದೆ. ಪ್ರತಿದಿನ ಒಟ್ಟು 29463 ವಾಣಿಜ್ಯ ಸಿಲಿಂಡರ್ ಗಳನ್ನು ವಿವಿಧ ಕ್ಷೇತ್ರಗಳಿಗೆ ವಿತರಿಸಲು ಹಂಚಿಕೆ ಮಾಡಲಾಗಿದೆ.
ಶಿಕ್ಷಣ ಸಂಸ್ಥೆಗಳು ವಸತಿ ನಿಲಯಗಳು ಹಾಗೂ ಆಸ್ಪತ್ರೆಗಳಿಗೆ 4200 ಸಿಲಿಂಡರ್ ಮೀಸಲಿಡಲಾಗಿದೆ.
ಸರ್ಕಾರಿ ಕ್ಯಾಂಟೀನ್ ಗಳು ವಿಮಾನ ರೈಲು ಹಾಗೂ ಬಸ್ ನಿಲ್ದಾಣಗಳಿಗೆ 1200 ಸಿಲಿಂಡರ್ ನೀಡಲಾಗುತ್ತಿದೆ.
ಹೋಟೆಲ್ ಡಾಬಾ ರೆಸ್ಟೋರೆಂಟ್ ಬೇಕರಿ ಹಾಗೂ ಪಿಜಿಗಳಿಗೆ ಅತಿ ಹೆಚ್ಚು ಅಂದರೆ 17500 ಸಿಲಿಂಡರ್ ಹಂಚಿಕೆ ಮಾಡಲಾಗಿದೆ.
ಕೃಷಿ ಮೀನುಗಾರಿಕೆ ಕೋಳಿ ಸಾಕಣೆ ಮುಂತಾದ ವಲಯಗಳಿಗೆ 6000 ಹಾಗೂ ಇತರೆ ತುರ್ತು ಅಗತ್ಯಗಳಿಗೆ 563 ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿದೆ.
ಕಾಳಸಂತೆಕೋರರಿಗೆ ಸಚಿವರ ಖಡಕ್ ಎಚ್ಚರಿಕೆ
ಬಿಕ್ಕಟ್ಟಿನ ಪರಿಸ್ಥಿತಿಯ ಲಾಭ ಪಡೆದು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವ ವಿತರಕರ ವಿರುದ್ಧ ಸಚಿವ ಮುನಿಯಪ್ಪ ಗುಡುಗಿದ್ದಾರೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸುವುದು ಕಡ್ಡಾಯ. ಒಂದು ವೇಳೆ ಹೆಚ್ಚುವರಿ ಹಣ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಏಜೆನ್ಸಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟದ ವಿರುದ್ಧ ಸಮರ ಸಾರಿರುವ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಎಲ್ ಪಿ ಜಿ ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ಬರೋಬ್ಬರಿ 1169 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 1603 ಗೃಹಬಳಕೆ ಸಿಲಿಂಡರ್ ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಒಟ್ಟಾರೆಯಾಗಿ ಯುದ್ಧದ ಪರಿಣಾಮದಿಂದ ಎದುರಾಗಿರುವ ಈ ಅಭಾವವನ್ನು ನೀಗಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಮತ್ತೊಂದೆಡೆ ಸಚಿವರ ಸೌದೆ ಬಳಕೆಯ ಕರೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆ ಹುಟ್ಟುಹಾಕಿದೆ.








