ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ ಕೆಳಗಿಳಿಸಿದ ಬೆನ್ನಲ್ಲೇ ಪಕ್ಷದೊಳಗೆ ಬಿರುಗಾಳಿ ಎದ್ದಿದೆ. ಸ್ಥಾನ ಕಳೆದುಕೊಂಡ ಬೇಸರದಲ್ಲಿ ರಾಘವ್ ಚಡ್ಡಾ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದು ಇದಕ್ಕೆ ಆಮ್ ಆದ್ಮಿ ಪಕ್ಷ ತೀಕ್ಷ್ಣ ಹಾಗೂ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ನಡುಕವೇ
ರಾಘವ್ ಚಡ್ಡಾ ಅವರ ವಿಡಿಯೋಗೆ ತಿರುಗೇಟು ನೀಡಿರುವ ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಾಂಡಾ ಕಟು ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಲು ರಾಘವ್ ಚಡ್ಡಾ ಹೆದರುತ್ತಿದ್ದಾರೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. ರಾಘವ್ ನೀವು ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಬದಲಾಗಿದ್ದೀರಿ. ನಿಮಗೆ ಮೋದಿ ವಿರುದ್ಧ ಮಾತನಾಡಲು ಭಯವಾಗುತ್ತಿದೆ. ದೇಶದ ನೈಜ ಹಾಗೂ ಜ್ವಲಂತ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿ ಹಿಡಿಯಲು ನಿಮಗೆ ನಡುಕ ಶುರುವಾಗಿದೆ ಎಂದು ಧಾಂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಕೇಜ್ರಿವಾಲ್ ಅವರ ಅಪ್ಪಟ ಸೈನಿಕರು
ಆಮ್ ಆದ್ಮಿ ಪಕ್ಷದ ಹೋರಾಟದ ಕಿಚ್ಚನ್ನು ನೆನಪಿಸಿದ ಧಾಂಡಾ ನಾವು ಅರವಿಂದ್ ಕೇಜ್ರಿವಾಲ್ ಅವರ ನಿಷ್ಠಾವಂತ ಸೈನಿಕರು. ಯಾವುದೇ ಪ್ರಭಾವಿ ನಾಯಕರಿದ್ದರೂ ಅವರ ವಿರುದ್ಧ ನಿರ್ಭೀತವಾಗಿ ಮಾತನಾಡುವುದೇ ನಮ್ಮ ಪಕ್ಷದ ಮೂಲ ಗುರುತು. ಯಾರಾದರೂ ನರೇಂದ್ರ ಮೋದಿಯವರ ಹೆಸರೇಳಲು ಅಥವಾ ಅವರ ನೀತಿಗಳನ್ನು ಟೀಕಿಸಲು ಭಯಪಟ್ಟರೆ ಅಂತಹವರು ದೇಶಕ್ಕಾಗಿ ಹೇಗೆ ಹೋರಾಡುತ್ತಾರೆ ಎಂದು ನಂಬಲು ಸಾಧ್ಯ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಸಮೋಸಾ ಬೆಲೆ ಇಳಿಸುವುದು ನಮ್ಮ ಕೆಲಸವಲ್ಲ
ಸಂಸತ್ತಿನಲ್ಲಿ ನಡೆಯುವ ಚರ್ಚೆಗಳ ಬಗ್ಗೆಯೂ ರಾಘವ್ ಚಡ್ಡಾ ಅವರನ್ನು ಧಾಂಡಾ ಲೇವಡಿ ಮಾಡಿದ್ದಾರೆ. ವಿರೋಧ ಪಕ್ಷವಾಗಿ ನಮಗೆ ಸಂಸತ್ತಿನಲ್ಲಿ ಸಿಗುವ ಸೀಮಿತ ಹಾಗೂ ಅಮೂಲ್ಯವಾದ ಸಮಯವನ್ನು ದೇಶವನ್ನು ಉಳಿಸುವ ಮತ್ತು ಜನರ ಪರವಾದ ಧ್ವನಿಯಾಗಲು ಬಳಸಬೇಕೇ ಹೊರತು ವಿಮಾನ ನಿಲ್ದಾಣದ ಕ್ಯಾಂಟೀನ್ಗಳಲ್ಲಿ ಸಮೋಸಾ ಬೆಲೆ ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಅಲ್ಲ ಎಂದು ಕಟಕಿಯಾಡಿದ್ದಾರೆ.
ಪಕ್ಷದ ನಿರ್ಧಾರಗಳಿಗೆ ಬೆನ್ನಿತ್ತಿದ್ದೇಕೆ ಚಡ್ಡಾ
ಇತ್ತೀಚಿನ ಹಲವು ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ಆಪ್ ನಾಯಕರು ರಾಘವ್ ಚಡ್ಡಾ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಗುಜರಾತ್ನಲ್ಲಿ ಎಎಪಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿದಾಗ ರಾಘವ್ ಚಡ್ಡಾ ಸದನದಲ್ಲಿ ಆ ವಿಷಯವನ್ನು ಪ್ರಸ್ತಾಪಿಸುವ ಧೈರ್ಯ ಮಾಡಲಿಲ್ಲ ಎಂದು ಧಾಂಡಾ ದೂರಿದ್ದಾರೆ.
ಅಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪಕ್ಷವು ನಿರ್ಣಯ ಮಂಡಿಸಿದಾಗ ರಾಘವ್ ಚಡ್ಡಾ ಅದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಪಕ್ಷದ ಎಲ್ಲ ಸಂಸದರು ಒಗ್ಗಟ್ಟಾಗಿ ಸದನದಿಂದ ಹೊರನಡೆದಾಗಲೂ ಚಡ್ಡಾ ಮಾತ್ರ ಅವರಿಗೆ ಸಾಥ್ ನೀಡದೆ ತಮ್ಮ ಆಸನದಲ್ಲೇ ಮೌನವಾಗಿ ಕುಳಿತುಕೊಂಡಿದ್ದರು ಎಂದು ಧಾಂಡಾ ಗಂಭೀರ ಆರೋಪ ಮಾಡಿದ್ದಾರೆ.
ನಾನು ಮಾಡಿರುವ ತಪ್ಪಾದರೂ ಏನು ಎಂದ ರಾಘವ್ ಚಡ್ಡಾ
ತಮ್ಮಿಂದ ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡುವ ಹಕ್ಕನ್ನು ಕಸಿದುಕೊಂಡಿರುವ ಆಪ್ ನಾಯಕರ ಕ್ರಮಕ್ಕೆ ರಾಘವ್ ಚಡ್ಡಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ವಿಡಿಯೋ ಸಂದೇಶದಲ್ಲಿ ನೋವು ತೋಡಿಕೊಂಡಿರುವ ಅವರು ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ನಾನು ಕೇವಲ ಸಾರ್ವಜನಿಕ ಸಮಸ್ಯೆಗಳನ್ನೇ ಎತ್ತಿದ್ದೇನೆ.
ಬಹುಶಃ ನಾನು ಇತರರು ಸಾಮಾನ್ಯವಾಗಿ ಚರ್ಚಿಸದ ವಿಷಯಗಳನ್ನು ಪ್ರಸ್ತಾಪಿಸಿರಬಹುದು ಆದರೆ ಸಾರ್ವಜನಿಕರ ದೈನಂದಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತುವುದು ಅಪರಾಧವೇ ಎಂದು ಅವರು ಪ್ರಶ್ನಿಸಿದ್ದಾರೆ. ನಾನು ತಪ್ಪು ಮಾಡಿದ್ದೇನಾ ಅಥವಾ ನಾನು ಏನಾದರೂ ದೇಶ ವಿರೋಧಿ ಕೆಲಸ ಮಾಡಿದ್ದೇನಾ ಎಂದು ರಾಘವ್ ಚಡ್ಡಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಆಮ್ ಆದ್ಮಿ ಪಕ್ಷದೊಳಗಿನ ಈ ನಾಯಕರ ಗುದ್ದಾಟ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.







