ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ ರಾಜ್ಯದ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇದೀಗ ಕಾಂಗ್ರೆಸ್ ಹೈಕಮಾಂಡ್ ಸೂಚನೆಗೆ ತಲೆಬಾಗಿದ್ದಾರೆ. ತಮ್ಮೆಲ್ಲಾ ಅಸಮಾಧಾನಗಳನ್ನು ಬದಿಗಿಟ್ಟು ಪಕ್ಷದ ಗೆಲುವಿಗಾಗಿ ಮತ್ತೆ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.
ಅಸಮಾಧಾನದ ಹಿಂದಿನ ಅಸಲಿ ಕಾರಣ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಜಮೀರ್ ಅಹ್ಮದ್ ಅವರ ಅಗತ್ಯವಿಲ್ಲ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೀಡಿದ್ದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿತ್ತು. ತಮ್ಮದೇ ಪಕ್ಷದ ಸಚಿವರ ಈ ಹೇಳಿಕೆಯಿಂದ ತೀವ್ರ ಬೇಸರಗೊಂಡಿದ್ದ ಜಮೀರ್ ಅವರು ದಾವಣಗೆರೆ ಕಡೆ ಮುಖ ಮಾಡಿರಲಿಲ್ಲ. ಬದಲಾಗಿ ರಾಜ್ಯದ ಉಪಚುನಾವಣಾ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದು, ನೆರೆಯ ಕೇರಳ ರಾಜ್ಯದ ವಿಧಾನಸಭಾ ಚುನಾವಣಾ ಉಸ್ತುವಾರಿ ಹಾಗೂ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾದ ಬಂಡಾಯ
ಪ್ರಸ್ತುತ ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಹಾಗೂ ಹಾಲಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಅಲ್ಪಸಂಖ್ಯಾತ ಮತಬ್ಯಾಂಕ್ ಚದುರಿಹೋಗುವ ಭೀತಿ ಕಾಂಗ್ರೆಸ್ ನಾಯಕರನ್ನು ಕಾಡಲಾರಂಭಿಸಿತ್ತು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್
ಪೈಲ್ವಾನ್ ಅವರನ್ನು ಕಣದಿಂದ ಹಿಂದೆ ಸರಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದರೂ, ಆತಂಕ ಮಾತ್ರ ದೂರವಾಗಿರಲಿಲ್ಲ. ಸಾದಿಕ್ ಪೈಲ್ವಾನ್ ಅವರ ಮನವೊಲಿಸುವಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಸ್ಥಳೀಯವಾಗಿ ಇನ್ನೂ ಕೆಲವು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದು ಹಾಗೂ ಕೆಲವು ಮುಸ್ಲಿಂ ಯುವಕರ ಗುಂಪೊಂದು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವುದು ಕಾಂಗ್ರೆಸ್ ವಲಯದಲ್ಲಿ ಆತಂಕ ಮೂಡಿಸಿತ್ತು. ಈ ಅತೃಪ್ತ ಯುವಕರ ಪಡೆಯನ್ನು ಸಮಾಧಾನಪಡಿಸುವಲ್ಲಿ ಸ್ಥಳೀಯ ನಾಯಕರು ವಿಫಲರಾಗಿದ್ದರು. ಇದು ನೇರವಾಗಿ ಕಾಂಗ್ರೆಸ್ ಮತಬ್ಯಾಂಕ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ಗುಪ್ತಚರ ಹಾಗೂ ಆಂತರಿಕ ಮೂಲಗಳು ವರದಿ ಮಾಡಿದ್ದವು.
ಸಮಸ್ಯೆ ಬಗೆಹರಿಸಿದ ಸಿಎಂ ಹಾಗೂ ಡಿಸಿಎಂ
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಜ್ಯ ಕಾಂಗ್ರೆಸ್ ನಾಯಕರು ತಕ್ಷಣವೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಖಾಡಕ್ಕಿಳಿದು ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಮುಸ್ಲಿಂ ಮತಬ್ಯಾಂಕ್ ಒಡೆಯದಂತೆ ತಡೆಯಲು ನಿಮ್ಮ ಉಪಸ್ಥಿತಿ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಉನ್ನತ ನಾಯಕರು ಯಶಸ್ವಿಯಾಗಿದ್ದಾರೆ. ನಾಯಕರ ಮಾತಿಗೆ ಬೆಲೆಕೊಟ್ಟ ಜಮೀರ್, ಏಪ್ರಿಲ್ 5, 6 ಮತ್ತು 7ರಂದು ದಾವಣಗೆರೆ ಹಾಗೂ ಬಾಗಲಕೋಟೆ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಅಂತಿಮ ಹಂತದ ಮತದಾನದ ವೇಳೆ ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಿ ಪಕ್ಷಕ್ಕೆ ಬಲ ತುಂಬುವುದು ಅವರ ಪ್ರಮುಖ ಉದ್ದೇಶವಾಗಿದೆ.
ಜಮೀರ್ಗೆ ಒಲಿದ ರಾಷ್ಟ್ರೀಯ ಮಟ್ಟದ ಸ್ಥಾನಮಾನ
ಒಂದೆಡೆ ರಾಜ್ಯ ನಾಯಕರು ಮನವೊಲಿಸಿದರೆ, ಮತ್ತೊಂದೆಡೆ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಅಸಮಾಧಾನದ ಬೆನ್ನಲ್ಲೇ ಜಮೀರ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಲ್ಪಸಂಖ್ಯಾತ ವಿಭಾಗದ ಸಲಹಾ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಅತ್ಯುನ್ನತ ಮಂಡಳಿಯಲ್ಲಿ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರಾದ ತಾರಿಕ್ ಅನ್ವರ್, ಸಲ್ಮಾನ್ ಖುರ್ಷಿದ್, ಡಾ. ಅಭಿಷೇಕ್ ಮನು ಸಿಂಘ್ವಿ, ಸಯ್ಯದ್ ನಸೀರ್ ಹುಸೇನ್ ಮತ್ತು ಇಮ್ರಾನ್ ಪ್ರತಾಪ್ಗಢಿ ಅವರಂತಹ ಪ್ರಮುಖರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪ್ರಭಾವಿ ನಾಯಕರ ಸಾಲಿನಲ್ಲಿ ಇದೀಗ ಜಮೀರ್ ಅಹ್ಮದ್ ಅವರಿಗೂ ಸ್ಥಾನ ಕಲ್ಪಿಸುವ ಮೂಲಕ ಹೈಕಮಾಂಡ್ ಅವರ ರಾಜಕೀಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಮುಸ್ಲಿಂ ಮುಖಂಡರ ನಡುವಿನ ಶೀತಲ ಸಮರಕ್ಕೆ ಹೈಕಮಾಂಡ್ ಎಂಟ್ರಿಯೊಂದಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಜಮೀರ್ ಅಹ್ಮದ್ ಖಾನ್ ಅವರ ಮರುಪ್ರವೇಶ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇದು ಉಪಚುನಾವಣೆಯ ಫಲಿತಾಂಶದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಕಾದು ನೋಡಬೇಕಿದೆ.








