ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಜನರ ಬಗ್ಗೆ ನೀಡಿರುವ ಹೇಳಿಕೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕೇರಳಿಗರ ವಿದ್ಯಾವಂತಿಕೆಯನ್ನು ಹೊಗಳುವ ಭರದಲ್ಲಿ ಗುಜರಾತ್ ಜನತೆಯನ್ನು ಅನಕ್ಷರಸ್ಥರು ಎಂದು ಟೀಕಿಸಿರುವುದು ಬಿಜೆಪಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದರು. ಈ ವೇಳೆ ಅವರು, ಕೇರಳದ ಜನರು ಅತ್ಯಂತ ವಿದ್ಯಾವಂತರು ಮತ್ತು ಬುದ್ಧಿವಂತರು. ಇಲ್ಲಿನ ಜನರನ್ನು ಗುಜರಾತ್ ಅಥವಾ ಇತರ ಕೆಲವು ರಾಜ್ಯಗಳಲ್ಲಿರುವ ಅನಕ್ಷರಸ್ಥರಂತೆ ಸುಲಭವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ವಾಕ್ಯ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಸಮರಕ್ಕೆ ನಾಂದಿ ಹಾಡಿದೆ.
ಖರ್ಗೆ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಇದೊಂದು ನಾಚಿಕೆಗೇಡಿನ ಹಾಗೂ ವಿಭಜಕ ತಂತ್ರ ಎಂದು ಜರೆದಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇಡೀ ರಾಜ್ಯದ ಜನರನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಅನಕ್ಷರಸ್ಥರು ಎಂದು ಕರೆಯುವ ವ್ಯಕ್ತಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲು ಖಂಡಿತಾ ಅರ್ಹರಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದೇ ವೇಳೆ ಗಾಂಧಿ ಕುಟುಂಬದತ್ತ ಬಾಣ ಬಿಟ್ಟ ರವಿಶಂಕರ್ ಪ್ರಸಾದ್, ಖರ್ಗೆ ಅವರ ಈ ವಿಭಜಕ ಹೇಳಿಕೆಯನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಬಲಿಸುತ್ತಾರೆಯೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಸ್ವಲ್ಪವಾದರೂ ವಿವೇಚನೆ ಇದ್ದರೆ ತಕ್ಷಣವೇ ಈ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಬೇಕು ಮತ್ತು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕಾಲದಲ್ಲಿ ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರಂತಹ ಶ್ರೇಷ್ಠ ನಾಯಕರು ಅಲಂಕರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಖರ್ಗೆ ಅವರು ಇಂತಹ ಹಗುರವಾದ ಭಾಷೆ ಬಳಸುತ್ತಿರುವುದು ವಿಷಾದನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗುಜರಾತ್ ರಾಜ್ಯವು ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆಗೂ ಅನೇಕ ಮಹಾನ್ ರಾಷ್ಟ್ರೀಯ ನಾಯಕರು ಮತ್ತು ಬುದ್ಧಿಜೀವಿಗಳನ್ನು ದೇಶಕ್ಕೆ ನೀಡಿದೆ. ಪ್ರಸ್ತುತ ಗುಜರಾತ್ ರಾಜ್ಯದ ಸಾಕ್ಷರತಾ ಪ್ರಮಾಣ ಶೇಕಡಾ 82 ರಷ್ಟಿದೆ ಎಂಬ ಅಧಿಕೃತ ಅಂಕಿ ಅಂಶಗಳನ್ನು ರವಿಶಂಕರ್ ಪ್ರಸಾದ್ ಮಾಧ್ಯಮಗಳ ಮುಂದಿಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದ್ವೇಷಕ್ಕಾಗಿ ಇಡೀ ಗುಜರಾತ್ ರಾಜ್ಯದ ಜನರನ್ನು ಅನಕ್ಷರಸ್ಥರು ಎಂದು ಅವಮಾನಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.
ಕೇವಲ ಗುಜರಾತ್ ಮಾತ್ರವಲ್ಲದೆ, ಈ ಹಿಂದೆಯೂ ಉತ್ತರ ಪ್ರದೇಶ ಹಾಗೂ ಬಿಹಾರದ ಜನರ ಬಗ್ಗೆಯೂ ಇಂತಹದೇ ಅವಹೇಳನಕಾರಿ ಮಾತುಗಳನ್ನು ಆಡಲಾಗಿದೆ. ಇಂತಹ ವಿಭಜಕ ಮನಸ್ಥಿತಿಯ ಹೇಳಿಕೆಗಳು ದೇಶವನ್ನು ಒಡೆಯುವ ನೀತಿಯನ್ನು ಹೊಂದಿವೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರಿಗೆ ಇಂತಹ ಮಾತುಗಳು ಶೋಭೆ ತರುವುದಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಇಡೀ ದೇಶದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಪಟ್ಟು ಹಿಡಿದಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಹೊಸ್ತಿಲಲ್ಲಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದ್ದು, ಗುಜರಾತ್ ಜನರ ಸಾಕ್ಷರತೆ ಕುರಿತಾದ ಈ ವಿವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ತಿರುವು ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.







