ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯವಸ್ಥಿತವಾದ ಅಕ್ರಮ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮರು ಎಣಿಕೆಯ ನೆಪದಲ್ಲಿ ಮತಪತ್ರಗಳನ್ನು ತಿರುಚುವ ಮೂಲಕ ದೇಶದಲ್ಲೇ ಅತ್ಯಂತ ದೊಡ್ಡ ಮಟ್ಟದ ಅಪರಾಧ ಚಟುವಟಿಕೆಯನ್ನು ಇಲ್ಲಿ ನಡೆಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮರು ಎಣಿಕೆಯ ಪ್ರಕ್ರಿಯೆಯನ್ನು ತಾವು ಇಡೀ ರಾತ್ರಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು. ಮಾಜಿ ಶಾಸಕ ಜೀವರಾಜ್ ಅವರು ಈ ಹಿಂದೆ ಅಧಿಕಾರದಲ್ಲಿದ್ದಾಗ ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ ಎಂದು ಅವರು ದೂರಿದರು.
ಅಂಚೆ ಮತಪತ್ರಗಳಿದ್ದ ಬಾಕ್ಸ್ ಗಳನ್ನು ಅಕ್ರಮವಾಗಿ ತೆರೆಯುವುದು, ನಂತರ ಮತಪತ್ರಗಳನ್ನು ತಿರುಚುವುದು ಮತ್ತು ನ್ಯಾಯಾಲಯದ ಮೂಲಕ ಮರು ಎಣಿಕೆಯ ಆದೇಶ ತರುವುದು ಇದೆಲ್ಲವೂ ಒಂದು ಸುವ್ಯವಸ್ಥಿತ ಹುನ್ನಾರವಾಗಿದೆ. ಇದು ಕೇವಲ ರಾಜಕೀಯ ಪಿತೂರಿಯಲ್ಲ, ಇದೊಂದು ಗಂಭೀರವಾದ ಅಪರಾಧವಾಗಿದೆ. ಈ ಕುರಿತು ತಮಗೆ ಸವಿವರವಾದ ವರದಿ ಬಂದಿದ್ದು, ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಈ ಹಿಂದೆ ನಡೆದ ಮತ ಎಣಿಕೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳ ಏಜೆಂಟರ ಸಮ್ಮುಖದಲ್ಲೇ ಪಾರದರ್ಶಕವಾಗಿ ಪ್ರಕ್ರಿಯೆ ನಡೆದಿತ್ತು. ಆಗ ಸಂಬಂಧಪಟ್ಟ ಎಲ್ಲರೂ ಸಹಿಗಳನ್ನು ಹಾಕಿದ್ದರು. ಆದರೆ ಈಗ ಜೀವರಾಜ್ ಅವರು ಕಾನೂನಿನ ಹಾದಿ ಹಿಡಿದು ವಾಮಮಾರ್ಗದ ಮೂಲಕ ಫಲಿತಾಂಶ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಕಾಂಗ್ರೆಸ್ ಪಕ್ಷ ಕಾನೂನು ಸಮರ ಸಾರಿದೆ. ಸರ್ಕಾರದ ವತಿಯಿಂದಲೂ ಈ ಅಕ್ರಮವನ್ನು ತಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಯಾವ ರೀತಿಯ ಕಾನೂನು ಹೋರಾಟ ನಡೆಸಲು ಸಾಧ್ಯವಿದೆಯೋ ಅದನ್ನು ಪರಿಶೀಲಿಸಲಾಗುವುದು ಎಂದು ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.








