ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನೀಡಿದ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ತೀಕ್ಷ್ಣವಾಗಿ ಮತ್ತು ಸರಣಿ ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಎಲೆಯ ಮೇಲೆ ಆನೆ ಬಿದ್ದಿದ್ದರೂ ಪರರ ಎಲೆಯ ಮೇಲಿರುವ ನೊಣ ಹುಡುಕುವ ಢೋಂಗಿ ಬುದ್ಧಿ ಪ್ರಧಾನಿಯವರದ್ದು ಎಂದು ಸಿದ್ದರಾಮಯ್ಯ ಅಣಕಿಸಿದ್ದಾರೆ.
ಯಾರಾಗಿ ಮಾತನಾಡುತ್ತಿದ್ದಾರೆ ಪ್ರಧಾನಿ?
ಮೋದಿಯವರು ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ ಅಥವಾ ರಾಜ್ಯ ಬಿಜೆಪಿ ಅಧ್ಯಕ್ಷರಂತೆಯೋ ಅಥವಾ ವಿರೋಧ ಪಕ್ಷದ ನಾಯಕನಂತೆಯೋ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು. ಅವರ ಭಾಷಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ಮುಚ್ಚಿಡುವ ಪ್ರಯತ್ನ ಮತ್ತು ರಾಜ್ಯ ಬಿಜೆಪಿಯ ಅಸಹಾಯಕತೆ ಎದ್ದು ಕಾಣುತ್ತಿತ್ತು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಧಾನಿ ಹುದ್ದೆಯ ಘನತೆಗೆ ಕುಂದು
ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ಪ್ರಧಾನಿ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿದ್ದರು. ಆದರೆ ಮೋದಿ ಅವರು ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷದ ಭಾಷಣಗಳ ಮೂಲಕ ಈ ಉನ್ನತ ಹುದ್ದೆಯ ಮರ್ಯಾದೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದರೂ ಅವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ಗುಂಗಿನಲ್ಲೇ ಇದ್ದಂತೆ ಕಾಣುತ್ತಿದ್ದಾರೆ ಎಂದು ಸಿಎಂ ಟೀಕಿಸಿದ್ದಾರೆ.
ಆರ್ಥಿಕ ವೈಫಲ್ಯ ಮತ್ತು ಬೆಲೆ ಏರಿಕೆ
ಭಾರತವನ್ನು 5 ತ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುತ್ತೇವೆ ಎಂದು ಬೀಗುತ್ತಿದ್ದ ಪ್ರಧಾನಿಗಳು ಇಂದು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯ ನಡುವೆ ಜನರಿಗೆ ಎಣ್ಣೆ, ಗೊಬ್ಬರ ಕಡಿಮೆ ಬಳಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ಅಭಿವೃದ್ಧಿ? ವಿದೇಶಾಂಗ ನೀತಿಯ ಎಡಬಿಡಂಗಿತನದಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ವೈಫಲ್ಯಕ್ಕೆ ಈಗ ಯಾರನ್ನು ದೂರುತ್ತೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕದ ಆರ್ಥಿಕ ಶಕ್ತಿ
ದೇಶದ ತಲಾವಾರು ಆದಾಯ 2.11 ಲಕ್ಷ ರೂಪಾಯಿಗಳಿದ್ದರೆ, ಕರ್ನಾಟಕದ ತಲಾವಾರು ಆದಾಯ 4.33 ಲಕ್ಷ ರೂಪಾಯಿಗಳಷ್ಟಿದೆ. ದೇಶದ ಜಿಡಿಪಿ ದರ ಶೇಕಡಾ 7.4 ಆಗಿದ್ದರೆ, ಕರ್ನಾಟಕ ಶೇಕಡಾ 8.1 ರಷ್ಟು ಪ್ರಗತಿ ಸಾಧಿಸಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಾಜ್ಯವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದ್ದು, ಪ್ರಧಾನಿಗಳು ಸುಳ್ಳು ಆರೋಪ ಮಾಡುವ ಬದಲು ಅಂಕಿಅಂಶಗಳೊಂದಿಗೆ ತಯಾರಿ ನಡೆಸಲಿ ಎಂದು ಸಿಎಂ ಸಲಹೆ ನೀಡಿದ್ದಾರೆ.
ರಾಜ್ಯ ಬಿಜೆಪಿಯ ಪರಿಸ್ಥಿತಿ ಬುಟ್ಟಿಯಲ್ಲಿರುವ ಏಡಿಗಳಂತಾಗಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸ್ವಪಕ್ಷೀಯರೇ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಇವರನ್ನು ನಿಯಂತ್ರಿಸುವ ಧೈರ್ಯ 56 ಇಂಚಿನ ಎದೆಯುಳ್ಳ ಪ್ರಧಾನಿಗೆ ಇಲ್ಲವೇ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ. ಮಿತ್ರಪಕ್ಷಗಳಿಗೆ ವಿಶ್ವಾಸದ್ರೋಹ ಮಾಡಿದ ಇತಿಹಾಸ ಹೊಂದಿರುವ ಮೋದಿ, ಕಾಂಗ್ರೆಸ್ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ. ಮೊದಲು ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ, ಆಮೇಲೆ ನಮ್ಮ ಬಗ್ಗೆ ಮಾತನಾಡಿ ಎಂದು ಸಿಎಂ ಗುಡುಗಿದ್ದಾರೆ.








