ಮೈಸೂರು: ಜೆಡಿಎಸ್ ಹಿರಿಯ ನಾಯಕ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗುವಲ್ಲಿ ನನ್ನ ಬೆಂಬಲ ಮತ್ತು ಪಾತ್ರ ಬಹಳ ದೊಡ್ಡದಿದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಟಿಡಿ, ಎಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ನೀಡಿದ ಬೆಂಬಲವೇ ಪ್ರಮುಖ ಕಾರಣ. ಅವರು ಕೂಡ ನಾನು ಸಚಿವನಾಗಲು ಸಹಾಯ ಮಾಡಿದ್ದಾರೆ ಎನ್ನುವುದನ್ನು ಮರೆಯುವುದಿಲ್ಲ. ಇನ್ನು ರಾಜ್ಯಾದ್ಯಂತ ನಡೆದ ಕುಮಾರಪರ್ವ ಸಮಾವೇಶಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನತೆ ನೀಡಿದ ಬೆಂಬಲ ಅತ್ಯಂತ ದೊಡ್ಡದು. ಇಂತಹ ಯಶಸ್ಸು ಬೇರೆಲ್ಲೂ ಸಿಕ್ಕಿರಲಿಲ್ಲ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಪಕ್ಷಕ್ಕಿಂತ ನನಗೆ ಜನರೇ ಮುಖ್ಯ
ಜಿಟಿಡಿ ಅವರು ತಮ್ಮ ಎರಡೂ ಕಾಲುಗಳನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ನನ್ನ ಬಗ್ಗೆ ಏನು ಹೇಳಿದ್ದಾರೋ ನನಗೆ ತಿಳಿಯದು. ಆದರೆ ನನಗೆ ರಾಜಕಾರಣಕ್ಕಿಂತ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಮತ್ತು ಅವರ ಅಭಿವೃದ್ಧಿಯೇ ನನ್ನ ಗುರಿ. 2028ರ ಚುನಾವಣೆಯಲ್ಲೂ ನನ್ನನ್ನೇ ಸ್ಪರ್ಧಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾವುದರ ಭಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರ್ಪಡೆ ವದಂತಿಗೆ ಸ್ಪಷ್ಟನೆ
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ಜಿಟಿಡಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರ ಪರ ಮಾತನಾಡಿದ ತಕ್ಷಣ ಕಾಂಗ್ರೆಸ್ ಸೇರುತ್ತೇನೆ ಎಂದರ್ಥವಲ್ಲ. ನಾನು ಡಿ ಕೆ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿಲ್ಲ. ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಅನುದಾನ ನೀಡಿದೆ, ಅದನ್ನು ಬಳಸಿಕೊಂಡು ಅಭಿವೃದ್ಧಿ ಮಾಡುವುದು ನನ್ನ ಕೆಲಸ ಎಂದು ತಿಳಿಸಿದರು.
ತಮ್ಮ ಪುತ್ರ ಹರೀಶ್ ಗೌಡ ಅವರೊಂದಿಗಿನ ಮುನಿಸಿನ ಬಗ್ಗೆಯೂ ಮಾತನಾಡಿದ ಜಿಟಿಡಿ, ಯಾವ ಕುಟುಂಬದಲ್ಲಿ ತಾನೇ ಸಣ್ಣಪುಟ್ಟ ಜಗಳಗಳು ಇರುವುದಿಲ್ಲ? ಪ್ರತಿಯೊಂದು ಕುಟುಂಬದಲ್ಲೂ ಭಿನ್ನಾಭಿಪ್ರಾಯಗಳು ಸಹಜ. ನಾವು ಮತ್ತೆ ಒಂದಾಗುವುದಿಲ್ಲ ಎಂದು ಭಾವಿಸುವವರು ಮೂರ್ಖರು ಮಾತ್ರ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.








