ಗ್ರೇಟರ್ ಬೆಂಗಳೂರು ಟೌನ್ಶಿಪ್ ವಿರೋಧಿಸಿ ಜೆಡಿಎಸ್ ನಡೆಸಿದ ಪಾದಯಾತ್ರೆಗೆ ಹೆಚ್ ಸಿ ಬಾಲಕೃಷ್ಣ ಖಡಕ್ ಕೌಂಟರ್. 24 ಗಂಟೆಯಲ್ಲಿ ಅಕೌಂಟ್ಗೆ ಹಣ ಹಾಕ್ತೀವಿ ಎಂದ ಸಚಿವ!
ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯನ್ನು ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಅದು ಪಾದಯಾತ್ರೆಯಲ್ಲ, ಅದೊಂದು ಜಾಲಿ ಟ್ರಿಪ್. ಜೆಡಿಎಸ್ ನಾಯಕರು ಬರೀ ಡೌ ಮಾಡಿಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ತಾಲೂಕಿನ ಕರಲಮಂಗಲ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಪಾದಯಾತ್ರೆಯ ಗಾಂಭೀರ್ಯವನ್ನು ಪ್ರಶ್ನಿಸಿ ಕಟು ಮಾತುಗಳಲ್ಲಿ ವೀರೋಧ ವ್ಯಕ್ತಪಡಿಸಿದರು. ಬಡವರ ಹಾಗೂ ರೈತರ ಪರ ಎಂದು ಹೇಳಿಕೊಳ್ಳುವ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮುಗಿದ ತಕ್ಷಣ ರಾತ್ರಿ ಎಲ್ಲಿ ಹೋಗಿ ಮಲಗಿದ್ದರು? ಬಡ ಕಾರ್ಯಕರ್ತರ ಜೊತೆ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದಿರಾ? ಎಂದು ಸಚಿವರು ನೇರವಾಗಿ ಪ್ರಶ್ನಿಸಿದರು.
ದೇವೇಗೌಡರು ಮತ್ತು ಕುಮಾರಸ್ವಾಮಿ ಬಂದು ಮಗನಿಗೆ ಪಟ್ಟಾಭಿಷೇಕ ಮಾಡಿ ಹೋದರು. ವಿಪಕ್ಷ ನಾಯಕ ಆರ್. ಅಶೋಕ್ ಕಾಟಾಚಾರಕ್ಕೆ ಬಂದು ಐಕ್ಯತೆ ಪ್ರದರ್ಶಿಸಿ ಹೋದರು. ಬಸ್ಸಿನಲ್ಲಿ ಕಾಸು ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದು ಪಾದಯಾತ್ರೆಯಾ ಎಂದು ಸಚಿವರು ಪ್ರಶ್ನೆಗಳ ಸುರಿಮಳೆಗರೆದರು.
ಕುಮಾರಸ್ವಾಮಿ ಕನಸಿನ ಕೂಸಿಗೆ ಈಗ ವಿರೋಧವೇಕೆ?
2006ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್ಶಿಪ್ ಯೋಜನೆಯನ್ನು ತಮ್ಮ ಕನಸಿನ ಕೂಸು ಎಂದು ಕರೆದಿದ್ದರು. ಆದರೆ ಈಗ ಅದೇ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ಇಬ್ಬಂದಿ ನೀತಿಯನ್ನು ತೋರಿಸುತ್ತದೆ. ಒಬ್ಬ ರಾಜಕಾರಣಿಗೆ ನಡೆ ಮತ್ತು ನುಡಿ ಒಂದೇ ಆಗಿರಬೇಕು. ಅವಕಾಶಕ್ಕೆ ತಕ್ಕಂತೆ ಮಾತು ಬದಲಾಯಿಸುವ ಬಾಲಿಷ ಹೇಳಿಕೆಗಳನ್ನು ನಿಖಿಲ್ ಕುಮಾರಸ್ವಾಮಿ ತಕ್ಷಣ ನಿಲ್ಲಿಸಲಿ ಎಂದು ಸಚಿವರು ಎಚ್ಚರಿಸಿದರು.
ನಿಖಿಲ್ ಒಪ್ಪಿದರೆ 24 ಗಂಟೆಯಲ್ಲಿ ಕೋಟಿ ಕೋಟಿ ಹಣ!
ಸರ್ಕಾರದ ಬಳಿ ಹಣವಿಲ್ಲ ಎಂಬ ನಿಖಿಲ್ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಬಿಡದಿ ಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ 4 ಎಕರೆ ಹಾಗೂ ಅವರ ತಾಯಿ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 31 ಎಕರೆ ಸೇರಿದಂತೆ ಒಟ್ಟು 35 ಎಕರೆ ಜಮೀನಿದೆ. ನಿಖಿಲ್ ಕುಮಾರಸ್ವಾಮಿ ಯೋಜನೆಗೆ ಸಮ್ಮತಿ ನೀಡಿದರೆ, ಕೇವಲ 24 ಗಂಟೆಯೊಳಗೆ ಅವರ ಬ್ಯಾಂಕ್ ಅಕೌಂಟ್ಗೆ ಕೋಟ್ಯಂತರ ರೂಪಾಯಿ ಜಮಾ ಮಾಡುತ್ತೇವೆ ಎಂದು ತೆರೆದ ಸವಾಲು ಎಸೆದರು.
35 ಎಕರೆ ದಲಿತರ ಜಮೀನು? ತನಿಖೆಯ ಬಾಂಬ್ ಸಿಡಿಸಿದ ಸಚಿವ!
ಇದೇ ವೇಳೆ ಕುಮಾರಸ್ವಾಮಿ ಕುಟುಂಬದ ಜಮೀನಿನ ಬಗ್ಗೆ ಗಂಭೀರ ಆರೋಪ ಮಾಡಿದ ಸಚಿವ ಬಾಲಕೃಷ್ಣ, ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿರುವ ಈ 35 ಎಕರೆ ಜಮೀನು ವಿವಾದದಲ್ಲಿದೆ. ಅದು ದಲಿತ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಜಮೀನು ಎಂದು ದೂರು ಬಂದಿದೆ. ಈ ಜಮೀನಿಗೆ ಮೂಲ ಮಂಜೂರಾತಿ ಪತ್ರವೇ ಇಲ್ಲ. ಅದು ನಿಯಮಬಾಹಿರವಾಗಿ ಹೇಗೆ ಮಂಜೂರಾಯಿತು ಎಂಬುದರ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ತಿಳಿಸಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.








