ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಏಕವಚನ ಬಳಸಿ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆರ್ ಎಸ್ ಎಸ್ ನಾಯಕ ಬಿ ಎಲ್ ಸಂತೋಷ್ ಹಾಗೂ ಬಿಜೆಪಿ ನಾಯಕ ಸಿ ಟಿ ರವಿ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಆರ್ ಎಸ್ ಎಸ್ ಸಂಘಟನೆಯ ಮೂಲಕ ಬೆಳೆದು ಬಂದಿರುವ 59 ವರ್ಷ ವಯಸ್ಸಿನ ಬಿ ಎಲ್ ಸಂತೋಷ್ ಅವರಿಗೆ ಕನಿಷ್ಠ ಸಂಸ್ಕಾರ ಮತ್ತು ಸಾಮಾನ್ಯ ಜ್ಞಾನವಿಲ್ಲವೇ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಒಮ್ಮೆ ಮಹಾತ್ಮ ಗಾಂಧೀಜಿಯವರು ಅಲಂಕರಿಸಿದ್ದ ಮಹೋನ್ನತ ಸ್ಥಾನದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರು ಈ ದೇಶದ ಹಿರಿಯ ರಾಜಕಾರಣಿ. ಅಂತಹ ಹಿರಿಯ ನಾಯಕರ ಬಗ್ಗೆ ಭಾಷಣ ಮಾಡುವಾಗ ಅವನು, ಅವನ ಅಪ್ಪ ಎಂದು ಏಕವಚನದಲ್ಲಿ ಹೀಯಾಳಿಸಿರುವುದು ಅತ್ಯಂತ ಕೀಳು ಮಟ್ಟದ ರಾಜಕಾರಣ. ಬಿ ಎಲ್ ಸಂತೋಷ್ ತಕ್ಷಣ ತಮ್ಮ ಮಾತಿನ ಧಾಟಿಯನ್ನು ತಿದ್ದಿಕೊಳ್ಳಬೇಕು ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಸವಾಲು ಎಸೆದಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕ ಸಿ ಟಿ ರವಿ ವಿರುದ್ಧವೂ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ ಶಾಸಕರು, ನಾನು ಇತ್ತೀಚೆಗೆ ಸಿ ಟಿ ರವಿ ಅವರ ಹೆಸರಿಗೆ ವಿರುದ್ಧಾರ್ಥಕ ಪದ ಯಾವುದು ಎಂದು ಗೂಗಲ್ ನಲ್ಲಿ ಹುಡಿಕಿದೆ. ಅದಕ್ಕೆ ಒಳ್ಳೆಯತನ ಎಂಬ ಉತ್ತರ ಸಿಕ್ಕಿತು. ಸಿ ಟಿ ರವಿ ಅವರಿಗೆ ಬಾಯಿಗೆ ಬಂದಂತೆ ಮಾತನಾಡುವುದೇ ಕಾಯಕವಾಗಿದೆ. ಅವರ ಸಂಸ್ಕೃತಿ ಮತ್ತು ಭಾಷೆಯ ಶೈಲಿಯನ್ನು ಇಡೀ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.
ಮತ್ತೊಂದೆಡೆ ಆರ್ ಎಸ್ ಎಸ್ ನೊಂದಣಿ ವಿಚಾರವಾಗಿ ಬಿ ಎಲ್ ಸಂತೋಷ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, ನಂಬಿಕೆಯಿಂದ ಆರ್ ಎಸ್ ಎಸ್ ನಡೆಸುತ್ತಿದ್ದೇವೆ, ನಮಗೆ ನೋಂದಣಿ ಅಗತ್ಯವಿಲ್ಲ ಎಂದು ಸಂತೋಷ್ ಹೇಳುತ್ತಾರೆ. ಹಾಗಾದರೆ ಇವರಿಗೆ ದೇಶದ ಸಂವಿಧಾನ, ಕಾನೂನು ಮತ್ತು ಆದಾಯ ತೆರಿಗೆ ಕಾಯ್ದೆಯ ಬಗ್ಗೆ ಕನಿಷ್ಠ ಗೌರವವಿಲ್ಲವೇ. ಮಾಡುತ್ತಿರುವುದೆಲ್ಲಾ ಅನಾಚಾರ, ಮನೆ ಮುಂದೆ ಮಾತ್ರ ಬೃಂದಾವನ ಎಂಬಂತೆ ಬಿಜೆಪಿಯವರ ನಡವಳಿಕೆ ಇದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ತಮ್ಮ ಮತ್ತು ಬಿ ಎಲ್ ಸಂತೋಷ್ ಅವರ ವಯಸ್ಸನ್ನು ಹೋಲಿಸಿದ ಶಾಸಕರು, ನನಗೆ ಈಗಷ್ಟೇ 40 ವರ್ಷ, ಸಂತೋಷ್ ಅವರಿಗೆ 58 ವರ್ಷಕ್ಕಿಂತ ಹೆಚ್ಚು. ವಯಸ್ಸಿನಲ್ಲಿ ಅವರು ನನಗಿಂತ ದೊಡ್ಡವರಾದ್ದರಿಂದ ನಾನು ಅವರನ್ನು ಈಗಲೂ ಸರ್ ಎಂದೇ ಗೌರವದಿಂದ ಕರೆಯುತ್ತಿದ್ದೇನೆ. ರಾಜಕೀಯ ಏನೇ ಇರಲಿ, ಹಿರಿಯ ನಾಯಕರಿಗೆ ಮತ್ತು ವೈಯಕ್ತಿಕ ವ್ಯಕ್ತಿತ್ವಕ್ಕೆ ಗೌರವ ನೀಡುವುದು ನಮ್ಮ ಸಂಸ್ಕೃತಿ. ಅದನ್ನು ಬಿಜೆಪಿಯ ನಾಯಕರು ಮೊದಲು ಮೈಗೂಡಿಸಿಕೊಳ್ಳಲಿ ಎಂದು ಪ್ರದೀಪ್ ಈಶ್ವರ್ ಸೀದಾ ಸಾದಾ ಬುದ್ಧಿವಾದ ಹೇಳಿದ್ದಾರೆ.







