ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ನಿನ್ನೆ ಬೆಳ್ಳಂಬೆಳಿಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿದ ಅವರು, ಮಾರುಕಟ್ಟೆಯ ವಾಸ್ತವ ಸ್ಥಿತಿಗತಿಗಳನ್ನು ಹತ್ತಿರದಿಂದ ಪರಿಶೀಲಿಸಿದರು.
ಹೆದರಬೇಡಿ ನಿಜ ಹೇಳಿ
ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದ ರೈತರ ಬಳಿ ತೆರಳಿದ ಶಿವಕುಮಾರ್ ಅವರು, ವ್ಯಾಪಾರ ಹೇಗಾಗುತ್ತಿದೆ? ನಿಮಗೆ ಎಷ್ಟು ಹಣ ಸಿಗುತ್ತಿದೆ? ಮಧ್ಯವರ್ತಿಗಳ ಕಾಟವಿದೆಯೇ? ಎಂದು ಅತ್ಯಂತ ಆತ್ಮೀಯವಾಗಿ ವಿಚಾರಿಸಿದರು. ಹೆದರ್ಕೋಬೇಡಪ್ಪ, ಎಷ್ಟು ವ್ಯಾಪಾರ ಆಗುತ್ತದೆ, ನಿನಗೆ ಕೈಗೆ ಎಷ್ಟು ಸಿಗುತ್ತದೆ ಎಂದು ಧೈರ್ಯ ತುಂಬುವ ಮೂಲಕ ರೈತರ ಮನದ ಮಾತುಗಳನ್ನು ಹೊರಹಾಕುವ ಪ್ರಯತ್ನ ಮಾಡಿದರು.
ಮೂಟೆಗಳೇ ಆಸನವಾದವು
ಸಾಮಾನ್ಯವಾಗಿ ವಿವಿಐಪಿಗಳು ಬಂದರೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಇಲ್ಲಿ ಡಿಕೆಶಿ ಅವರು ಯಾವುದೇ ಪ್ರೋಟೋಕಾಲ್ ನೋಡದೆ, ಅಲ್ಲಿಯೇ ಇದ್ದ ಈರುಳ್ಳಿ ಮೂಟೆಗಳ ಮೇಲೆ ಜನಸಾಮಾನ್ಯರಂತೆ ಕುಳಿತು ರೈತರ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಈರುಳ್ಳಿ ತೂಕ ಮಾಡುವ ವಿಧಾನ ಮತ್ತು ಹರಾಜು ಪ್ರಕ್ರಿಯೆಯನ್ನು ಸ್ವತಃ ನಿಂತು ವೀಕ್ಷಿಸಿದ ಅವರು, ವ್ಯವಹಾರದಲ್ಲಿ ಪಾರದರ್ಶಕತೆ ಇದೆಯೇ ಮತ್ತು ರೈತರಿಗೆ ಸರಿಯಾದ ಬೆಲೆ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು.
ರೈತರ ಸಂಕಷ್ಟಕ್ಕೆ ಸ್ಥಳದಲ್ಲೇ ಸ್ಪಂದನೆ
ಬೆಲೆ ಏರಿಳಿತ ಮತ್ತು ಮಾರುಕಟ್ಟೆಯಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ರೈತರು ಮತ್ತು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡರು. ಪ್ರತಿಯೊಂದು ದೂರನ್ನೂ ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿಗಳು, ರೈತರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬೆಳ್ಳಂಬೆಳಿಗ್ಗೆ ಮುಖ್ಯಮಂತ್ರಿಗಳ ಈ ದಿಢೀರ್ ಭೇಟಿ ಮಾರುಕಟ್ಟೆಯಲ್ಲಿದ್ದ ಜನರಲ್ಲಿ ಅಚ್ಚರಿ ಮೂಡಿಸಿತು. ಗದ್ದುಗೆಯ ಮೇಲಿದ್ದರೂ ನೆಲದ ಮೂಲದ ಸಮಸ್ಯೆಗಳನ್ನು ಅರಿಯಲು ಅವರು ನಡೆಸಿದ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಭೇಟಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದ ನಾಯಕನ ನಡೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.








