ಭಾರತದ ಹೆಬ್ಬುಲಿಗಳ ಅಟ್ಟಹಾಸಕ್ಕೆ ಪತರುಗುಟ್ಟಿದ ಪಾಕಿಸ್ತಾನ ಕಾರ್ಗಿಲ್ ಬಿಟ್ಟು ಓಡಿಹೋಗಿ 21 ವರ್ಷಗಳು ಕಳೆದಿವೆ.. ಭಾರತೀಯ ಯೋಧರ ಧೈರ್ಯ, ಸಾಹಸ, ದೇಶಪ್ರೇಮದ ಪ್ರತೀಕವಾಗಿ ಕಾರ್ಗಿಲ್ ಭಾರತದಲ್ಲೇ ಉಳಿದಿದೆ. ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಕಥೆಯೇ ರೋಮಾಂಚಕಾರಿ ಯಾದ್ರೆ, ಯುದ್ಧದಲ್ಲಿ ಗೆದ್ದು, ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿಗಳ ಹೋರಾಟ ಅದೊಂದು ಇತಿಹಾಸ. ಇಂತಹ ವೀರ ಸೇನಾನಿಗಳ ಪೈಕಿ ಕರಾವಳಿಯಲ್ಲಿ ಹೆಮ್ಮಯ ಯೋಧ ಪ್ರವೀಣ್ ಶೆಟ್ಟಿ ಕೂಡಾ ಒಬ್ಬರು.
ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ವಿಶ್ವದ ಏಕೈಕ 244 ಹೆವಿ ಮೋಟಾರ್ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಮಂಗಳೂರಿನ ಕುಂಪಲ ನಿವಾಸಿ ಪ್ರವೀಣ್ ಶೆಟ್ಟಿ, ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. 18 ವರ್ಷದಲ್ಲೇ ಸೇನೆ ಸೇರಿದ ಪ್ರವೀಣ್ ಶೆಟ್ಟಿ ಸೇನೆ ಸೇರಿದ ಎರಡು ವರ್ಷದಲ್ಲೇ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಊರಿಗೆ ಬಂದ ದಿನವೇ ಸೇನೆಯಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ಬಂತು. ಹಾಗಾಗಿ ತಕ್ಷಣವೇ ಮತ್ತೆ ಕರ್ತವ್ಯಕ್ಕೆ ತೆರಳಿದ ಪ್ರವೀಣ್ ಶೆಟ್ಟಿಗೆ ಕಂಡಿದ್ದು, ಬರೀ ಹೆಣಗಳ ರಾಶಿ. ಅಂದು ತನ್ನ ರೆಜಿಮೆಂಟ್ ನಲ್ಲಿದ್ದವರ ಛಿದ್ರ ಛಿದ್ರ ವಾದ ಹೆಣಗಳನ್ನು ನೋಡಿದ ಪ್ರವೀಣ್ ಶೆಟ್ಟಿ, ಒಂದು ಕ್ಷಣ ಅವಕ್ಕಾದರೂ ಮತ್ತೆ ಹೋರಾಡಿದ ರೀತಿ ಮಾತ್ರ ಆಶ್ಚರ್ಯಕಾರಕ.
ಶುತ್ರುಗಳ ರುಂಡ ಚೆಂಡಾಡಿದ್ದ ಪ್ರವೀಣ್
ಒಂದು ಕಡೆ ಜೊತೆಗಿದ್ದವರ ಮರಣ. ಮತ್ತೊಂದೆಡೆ ಶತ್ರುಗಳ ಅಟ್ಟಹಾಸ. ಹೌದು..! ಪ್ರವೀಣ್ ಶೆಟ್ಟಿ ಅಂದು ಅನ್ನಾಹಾರ ಯುದ್ಧ ಭೂಮಿಯಲ್ಲಿ ಹೋರಾಡಿದರು. ಯುದ್ಧ ಭೂಮಿಯ ಅತೀ ಮುಖ್ಯಭಾಗದ ಕಾರ್ಗಿಲ್ ನ ತೊಲೊಲಿಂಗ್ ಪ್ರದೇಶವನ್ನು ಪ್ರವೀಣ್ ಶೆಟ್ಟಿ ತಂಡ ವಶಪಡಿಸಿಕೊಂಡಿತು. ತನ್ನ ಜೊತೆ ಇದ್ದವರು ತನ್ನೆದುರೇ ಹುತಾತ್ಮರಾದರೂ ಛಲ ಬಿಡದ ಪ್ರವೀಣ್ ಶೆಟ್ಟಿ ತಂಡ 49 ಶತ್ರುಗಳನ್ನು ಹೊಡೆದುರುಳಿಸಿದ್ದರು.
ಕಾರ್ಗಿಲ್ ನಲ್ಲಿ ಶತ್ರುಗಳ ಮಾರಣ ಹೋಮ ನಡೆಸಿದ್ದ ಪ್ರವೀಣ್ ಶೆಟ್ಟಿ, ತಮ್ಮ 16 ವರ್ಷಗಳ ಕಾಲ ದೇಶ ಸೇವೆಯಲ್ಲಿ 8 ಸೇನಾ ಸೇವಾ ಪದಕಗಳನ್ನು ಗಳಿಸಿದ್ದಾರೆ. 9Years ಸೇನಾ ಪದಕ, 50years ಸೇನಾ ಪದಕ, ಫೀಲ್ಡ್ ಸೇನಾ ಪದಕ, ಡಬಲ್ ಫೀಲ್ಡ್ ಸೇನಾ ಪದಕ, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್, ಆಪರೇಷನ್ ವಿಜಯ್ ಸ್ಟಾರ್ ಎಂಬ ಪದಕಗಳನ್ನು ಗಳಿಸಿದ್ದಾರೆ. ಅಂದಹಾಗೆ ಆಪರೇಷನ್ ವಿಜಯ್ ಸ್ಟಾರ್ ಪದಕ ಗಳಿಸಿದ ಕರಾವಳಿ ಕರ್ನಾಟಕದ ಏಕೈಕ ಯೋಧ ಪ್ರವೀಣ್ ಶೆಟ್ಟಿ.
ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರವೀಣ್ ಶೆಟ್ಟಿ ಸದ್ಯ ಮಂಗಳೂರಿನ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಟ್ಟಾರೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿ ಪ್ರವೀಣ್ ಶೆಟ್ಟಿಯವರ ಕೆಚ್ಚೆದೆಯ ಹೋರಾಟಕ್ಕೆ ನಮ್ಮದೊಂದು ಸಲಾಂ.








