ನಿಜವಾದ ಟ್ರಬಲ್ ಶೂಟರ್ ಯಾರು ? ಡಿಕೆ ಬ್ರದರ್ಸ್ ವಿರುದ್ಧ ಬ್ರದರ್ ಎಚ್ಡಿಕೆ ವಾಗ್ದಾಳಿ
ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ… ಯಾರು ಮಿತ್ರರೂ ಅಲ್ಲ. ಯಾವಾಗ ಶತ್ರುಗಳಾಗ್ತಾರೋ… ಯಾವಾಗ ಮಿತ್ರರಾಗ್ತಾರೋ ಎಂಬುದು ಗೊತ್ತೇ ಆಗಲ್ಲ. ಪಾಪ ರಾಜಕಾರಣಿಗಳನ್ನು ನಂಬಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾರ್ಯಕರ್ತರ ಪಾಡನ್ನಂತೂ ಹೇಳುವುದೇ ಬೇಡ.
ನೆನಪಿರಬಹುದು.. ಕಳೆದ ವಿಧಾನ ಸಭೆಯ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಾಟಕಗಳನ್ನು ವಿಧಾನ ಸೌಧದಲ್ಲಿ ನೋಡಿದ್ದೀರಿ. ಚುನಾವಣೆಗೆ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಬ್ಬರನ್ನೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡು ಮತ ಕೇಳುತ್ತಿದ್ದರು. ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ನಾಯಕರು ನೇರವಾಗಿ ಹೋಗಿದ್ದು ದೇವೇಗೌಡರ ಮನೆ ಬಾಗಿಲಿಗೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ.. ನಾವು ಬೆಂಬಲ ನೀಡುತ್ತೇವೆ ಅಂತ ಹೇಳಿದಾಗ ದೇವೇಗೌಡರಿಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಯಾಕಂದ್ರೆ ಜನ ಬೆಂಬಲವಿಲ್ಲದಿದ್ರೂ ಮಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಅಂದಾಗ ಯಾರು ಬೇಡ ಅಂತಾರೆ. ಹಾಗೇ ಸಮ್ಮಿಶ್ರ ಸರ್ಕಾರವೂ ರಚನೆಯಾಯ್ತು. ಪರಮೇಶ್ವರ್ ಉಪಮುಖ್ಯಮಂತ್ರಿಯಾದ್ರು.
ಇನ್ನೊಂದೆಡೆ ಪರಮ ಶತ್ರುಗಳಾಗಿ ಕಿತ್ತಾಡಿಕೊಳ್ಳುತ್ತಿದ್ದ ಡಿ.ಕೆ. ಶಿವ ಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಆಪ್ತ ಮಿತ್ರರಾದ್ರು. ಅಷ್ಟೇ ಅಲ್ಲ ಜೋಡೆತ್ತುಗಳು ಎಂದು ಹೇಳಿಕೊಳ್ಳುತ್ತಾ ಸಮ್ಮಿಶ್ರ ಸರ್ಕಾರದ ಎರಡು ಕಣ್ಣುಗಳಂತಿದ್ದರು. ಮಂಡ್ಯ ಲೋಕ ಸಭೆಯ ಉಪ ಚುನಾವಣೆಯಲ್ಲೂ ಡಿಕೆಶಿ ಮತ್ತು ಎಚ್ಡಿಕೆ ಜೊತೆಯಾಗಿ ನಿಂತು ಪ್ರಚಾರ ಮಾಡಿದ್ದರು.
ಆನಂತರ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತು. ಬಿಎಸ್ವೈ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾದ್ರು. ಆಗ ಡಿ.ಕೆ. ಶಿವ ಕುಮಾರ್ ನೇರವಾಗಿ ಮುಂಬೈಗೆ ಹೋಗಿ ಅಲ್ಲಿ ಅತೃಪ್ತ ಶಾಸಕರನ್ನು ಮನವೋಲಿಸಿದ್ದರು. ಅಲ್ಲದೆ ಮುಂಬೈ ಪೊಲೀಸರ ವಶಕ್ಕೂ ಪಡೆದುಕೊಂಡಿದ್ದರು. ಅಂದು ಡಿ.ಕೆ. ಶಿವಕುಮಾರ್ ಸರ್ಕಾರ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.
ಆದ್ರೆ ಡಿ.ಕೆ. ಶಿವಕುಮಾರ್ ಅಂದು ಡ್ರಾಮಾ ಮಾಡಿದ್ರು ಎಂಬುದು ಕುಮಾರಸ್ವಾಮಿಯವರ ಈಗಿನ ಹೇಳಿಕೆಯಿಂದ ಗೊತ್ತಾಗುತ್ತದೆ. ಮಂಡ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಸಾಥ್ ನೀಡಲಿಲ್ಲ. ಡಿ.ಕೆ. ಶಿವಕುಮಾರ್ ಪ್ರಚಾರಕ್ಕೆ ಬಂದು ಭಾಷಣ ಮಾಡಿ ಹೋಗಿದ್ರು. ಸ್ಥಳೀಯ ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ನೀಡಿಲ್ಲ. ಅವರು ಮನಸ್ಸು ಮಾಡಿದ್ರೆ ಆಗುತ್ತಿತ್ತು ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದ್ರು.
ಇನ್ನು ರಾಮನಗರದಲ್ಲಿ ನನ್ನ ಪ್ರಾಬಲ್ಯವನ್ನು ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲ ಇದೆ. ಇದಕ್ಕಾಗಿ ಡಿಕೆಶಿ ಅವರ ತಮ್ಮ ಸಂಸದ ಡಿ.ಕೆ. ಸುರೇಶ್ ಕುಮಾರ್ ಮೂಲಕ ರಾಮನಗರದಲ್ಲಿ ನಮ್ಮ ಪಕ್ಷವನ್ನು ಮುಗಿಸುವ ಯತ್ನ ನಡೆಸುತ್ತಿದ್ದಾರೆ. ಆದ್ರೆ ಅದೆಲ್ಲಾ ಸಾಧ್ಯವಿಲ್ಲ. ನನಗೆ ನನ್ನ ಜನರ ಬಗ್ಗೆ ನಂಬಿಕೆ ಇದೆ ಎಂದು ಎಚ್ಡಿಕೆ ಹೇಳಿದ್ರು.
ಡಿ.ಕೆ. ಶಿವಕುಮಾರ್ ಮತ್ತು ನಾನು ಅಂದು ಮಿತ್ರರಾಗಿದ್ದು ನಿಜ. ಆದ್ರೆ ಈಗ ಅಲ್ಲ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಮುಖ್ಯ ಕಾರಣ ಬೆಳಗಾವಿ ರಾಜಕಾರಣ. ಬೆಳಗಾವಿ ರಾಜಕಾರಣದಿಂದಲೇ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು. ಡಿಕೆಶಿ ಮನಸ್ಸು ಮಾಡಿದ್ರೆ ಸರ್ಕಾರವನ್ನು ಉಳಿಸಬಹುದಿತ್ತು. ಟ್ರಬಲ್ ಶೂಟರ್ ಯಾರು ಎಂಬುದು ಗೊತ್ತಿದೆ ಎಂದು ಎಚ್ಡಿಕೆ ಡಿಕೆಶಿ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.