ರಾಜ್ಯದಲ್ಲಿ ಗುಣಮುಖರಾಗುವವರ ಪ್ರಮಾಣದಲ್ಲಿ ಶೇ.5 ರಷ್ಟು ಏರಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು ಆಗಸ್ಟ್ 3, ರಾಜ್ಯದಲ್ಲಿ ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾಗುವವರ ಪ್ರಮಾಣವು ಕಳೆದೊಂದು ವಾರದಲ್ಲಿ ಶೇ.5.67 ರಷ್ಟು ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
“ಪ್ರತಿ ದಿನ ಗುಣಮುಖರಾಗುವವರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ.9.17 ರಷ್ಟು ಏರಿಕೆ ಕಂಡಿದೆ. ಭಾನುವಾರ (ಆ.2) ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ಪ್ರಮಾಣ ಶೇ.42.81 ಮತ್ತು ಬೆಂಗಳೂರಿನಲ್ಲಿ ಶೇ.35.14 ರಷ್ಟು ಇತ್ತು”, ಎಂದು ಅವರು ತಿಳಿಸಿದ್ದಾರೆ.
ಮಹಿಳೆಗೆ ಸಚಿವರ ಸ್ಪಂದನೆ
ಮಡಿವಾಳದ ಸೇಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯಲ್ಲಿ ಮೃತದೇಹ ಪಡೆಯಲು ಸಾಧ್ಯವಾಗದೆ ಕಣ್ಣೀರಿಡುತ್ತಿದ್ದ ಮಹಿಳೆಗೆ ಸಚಿವ ಡಾ.ಕೆ.ಸುಧಾಕರ್ ಸ್ಪಂದಿಸಿದ್ದಾರೆ.
ತಂದೆಯ ಮೃತದೇಹ ಹಸ್ತಾಂತರಕ್ಕೆ ಶುಲ್ಕ ಪಾವತಿಸಬೇಕು ಎಂದು ಆಸ್ಪತ್ರೆ ಸೂಚಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
“ಹಣಕ್ಕಿಂತ ಮಾನವೀಯತೆ ದೊಡ್ಡದು. ಹಣ ಕಟ್ಟಿ ಇಲ್ಲ ಅಂದ್ರೆ ಮೃತದೇಹ ಕೊಡಲ್ಲ ಎನ್ನುತ್ತಿರುವ ಮಡಿವಾಳದ ಸೇಂಟ್ ಜಾನ್ಸ್ ಖಾಸಗಿ ಆಸ್ಪತ್ರೆಯ ವರ್ತನೆ ತೀರಾ ಅಮಾನವೀಯವಾಗಿದೆ. ತಂದೆಯ ಮೃತದೇಹಕ್ಕಾಗಿ ಮಗಳು ಕಣ್ಣೀರಿಡುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೂಡಲೇ ಈ ಮಹಿಳೆಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ”, ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.